ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?

Excise Duty Waived, But Petrol Price Won't Drop Yet: ಕೇಂದ್ರ ಸರ್ಕಾರವು ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ (E22-E30) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿದೆ. ಆದರೆ, ದೇಶದಲ್ಲಿ ಪ್ರಚಲಿತದಲ್ಲಿರುವ E20 ಪೆಟ್ರೋಲ್ ಗ್ರಾಹಕರಿಗೆ ತಕ್ಷಣಕ್ಕೆ ಬೆಲೆ ಇಳಿಕೆಯಾಗುವುದಿಲ್ಲ. ಈ ನಿರ್ಧಾರವು ಭಾರತದ E30 ಎಥೆನಾಲ್ ಗುರಿಯ ಭಾಗವಾಗಿದೆ. ಇದು ರೈತರ ಆದಾಯ ಹೆಚ್ಚಿಸಲು, ಕಚ್ಚಾ ತೈಲ ಆಮದು ವೆಚ್ಚ ಕಡಿಮೆ ಮಾಡಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕತೆಗೆ ಪ್ರಯೋಜನ ನೀಡಲು ಸಹಾಯಕವಾಗಿದೆ.

ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ?
ಪೆಟ್ರೋಲ್ ಪಂಪ್
Image Credit source: PTI

Updated on: Jun 11, 2026 | 12:15 PM

ನವದೆಹಲಿ, ಜೂನ್ 11: ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪೂರ್ಣ ರದ್ದುಗೊಳಿಸಿದೆ. ಆದರೆ, ಸಾಮಾನ್ಯ ಗ್ರಾಹಕರು ಪೆಟ್ರೋಲ್​ನ ಬೆಲೆಯಲ್ಲಿ ತಕ್ಷಣಕ್ಕೆ ಯಾವುದೇ ಇಳಿಕೆಯಾಗುವುದಿಲ್ಲ. ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಅಬಕಾರಿ ಸುಂಕ ವಿನಾಯಿತಿಯು ಕೇವಲ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ (High Ethanol Blended Petrol) ಮಾತ್ರ ಅನ್ವಯಿಸುತ್ತದೆ.

ಇ22, ಇ25, ಇ27 ಮತ್ತು ಇ30 ಪೆಟ್ರೋಲ್​ಗೆ (ಅಂದರೆ ಶೇ. 22 ರಿಂದ ಶೇ. 30 ರವರೆಗೆ ಎಥೆನಾಲ್ ಹೊಂದಿರುವ ಇಂಧನ ಮಿಶ್ರಣಗಳು) ಮಾತ್ರ ಅಬಕಾರಿ ಸುಂಕವನ್ನು ಶೂನ್ಯ (Nil) ಮಾಡಲಾಗಿದೆ. ಸದ್ಯಕ್ಕೆ ಭಾರತದ ಬಹುತೇಕ ಬಂಕ್‌ಗಳಲ್ಲಿ ಸಿಗುತ್ತಿರುವುದು ಇ20 (ಶೇ. 20 ಎಥೆನಾಲ್) ಪೆಟ್ರೋಲ್ ಆಗಿದೆ. ಇದಕ್ಕೆ ಈ ಹೊಸ ವಿನಾಯಿತಿ ಅನ್ವಯಿಸುವುದಿಲ್ಲ.

ಗ್ರಾಹಕರ ಮೇಲಿನ ಪರಿಣಾಮವೇನು? ಪೆಟ್ರೋಲ್ ದರ ಇಳಿಯುವುದೇ?

ತಜ್ಞರ ಪ್ರಕಾರ, ಸಾಮಾನ್ಯ ವಾಹನ ಸವಾರರ ಮೇಲೆ ತಕ್ಷಣಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಶೇ. 22 ಕ್ಕಿಂತ ಹೆಚ್ಚು ಎಥನಾಲ್ ಹೊಂದಿರುವ ಇಂಧನಗಳು ಇನ್ನು ದೇಶಾದ್ಯಂತ ವ್ಯಾಪಕವಾಗಿ ಮಾರುಕಟ್ಟೆಗೆ ಬರಬೇಕಿದೆ.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಹೆಚ್ಚು ಎಥನಾಲ್ ಮಿಶ್ರಿತ ಇಂಧನವು ಮಾರುಕಟ್ಟೆ ಬಂದರೂ ಬೆಲೆ ಕಡಿಮೆ ಆಗುತ್ತದೆ ಎಂದು ಖಾತ್ರಿ ಇಲ್ಲ. ಯಾಕೆಂದರೆ ಕೈಗಾರಿಕಾ ತ್ಯಾಜ್ಯಗಳಿಂದ ಸಿಗುವ ಎಥನಾಲ್ ಅನ್ನು ಪಡೆಯಲು ಮಾಡುವ ವೆಚ್ಚ ಸಂಸ್ಕರಿತ ಪೆಟ್ರೋಲ್​ಗಿಂತ ಕಡಿಮೆ ಏನಿಲ್ಲ. ಹೀಗಾಗಿ, ಪೆಟ್ರೋಲ್ ಬೆಲೆ ಸದ್ಯಕ್ಕೆ ಇಳಿಕೆ ಕಾಣುವ ಸಾಧ್ಯತೆ ಬಹಳ ಕಡಿಮೆ.

ಸರ್ಕಾರದ ಈ ಕ್ರಮಕ್ಕೆ ಪ್ರಮುಖ ಕಾರಣಗಳು

ಇತ್ತೀಚೆಗಷ್ಟೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇ30 ಇಂಧನಕ್ಕೆ ಹೊಸ ಸುರಕ್ಷತಾ ಮತ್ತು ಗುಣಮಟ್ಟದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ದೇಶವು ಶೇ. 30 ಎಥೆನಾಲ್ ಮಿಶ್ರಣದ ಗುರಿ ಹೊಂದಿದ್ದು, ಅದಕ್ಕೆ ಪೂರಕವಾಗಿ ತೈಲ ಕಂಪನಿಗಳಿಗೆ ಈ ತೆರಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?

ಎಥೆನಾಲ್ ಅನ್ನು ಕಬ್ಬು, ಜೋಳ ಹಾಗೂ ಧಾನ್ಯಗಳಿಂದ ತಯಾರಿಸುವುದರಿಂದ, ಇದರ ಬಳಕೆ ಹೆಚ್ಚಾದಂತೆ ದೇಶದ ರೈತರ ಆದಾಯ ಹೆಚ್ಚಾಗಲಿದೆ. ಹಾಗೆಯೇ, ಮತ್ತೊಂದು ಬಹಳ ಮುಖ್ಯವಾದ ಲಾಭ ಎಂದರೆ, ಆಮದು ವೆಚ್ಚ ಕಡಿಮೆ ಆಗುವುದು. ಅಂದರೆ, ಕಚ್ಚಾ ತೈಲದ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ವಿದೇಶಿ ವಿನಿಮಯದ ಮೇಲಿನ ಹೊರೆ ಕಡಿಮೆ ಆಗುತ್ತದೆ. ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲಿನ ಹೊರೆಯನ್ನೂ ತಗ್ಗಿಸುತ್ತದೆ.

ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಈ ನಿರ್ಧಾರದಿಂದ ನಮ್ಮ ಇಂದಿನ ಅಥವಾ ನಾಳೆಯ ಪೆಟ್ರೋಲ್ ಬಿಲ್ ಕಡಿಮೆ ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಇ30 ಇಂಧನ ಲಭ್ಯವಾದಾಗ ಅದು ಸಾಮಾನ್ಯ ಪೆಟ್ರೋಲ್‌ಗಿಂತ ಸ್ವಲ್ಪ ಅಗ್ಗವಾಗಿ ಸಿಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us