Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ

2024ರ ಜನವರಿ 5ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 5.89 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ 617.3 ಬಿಲಿಯನ್ ಡಾಲರ್ ಇದೆ. 2023ರ ಏಪ್ರಿಲ್​ನಿಂದೀಚೆ ಫಾರೆಕ್ಸ್ ಮೀಸಲು ನಿಧಿಯಲ್ಲಿ 55.72 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿರುವುದು ಗಮನಾರ್ಹ.

Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ
ಫಾರೆಕ್ಸ್ ರಿಸರ್ವ್ಸ್

Updated on: Jan 14, 2024 | 1:01 PM

ನವದೆಹಲಿ, ಜನವರಿ 14: ಸತತ ನಾಲ್ಕು ವಾರ ಕಾಲ ಸಮೃದ್ಧಿ ಕಂಡ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಮೊತ್ತ ಹೊಸ ವರ್ಷದ ಮೊದಲ ವಾರದಲ್ಲಿ ಇಳಿಕೆ ಕಂಡಿದೆ. ಜನವರಿ 5ರಂದು ಅಂತ್ಯಗೊಂಡ ವಾರದಲ್ಲಿ 5.89 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ನಿಧಿ ಸಂಕುಚಿತಗೊಂಡಿದೆ. ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಫಾರೆಕ್ಸ್ ರಿಸರ್ವ್ಸ್ 617.3 ಬಿಲಿಯನ್ ಡಾಲರ್ ಇದೆ.

ಹಿಂದಿನ ವಾರದಲ್ಲಿ, ಅಂದರೆ ಡಿಸೆಂಬರ್ 29ರಂದು ಅಂತ್ಯಗೊಂಡ ವಾರದಲ್ಲಿ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ 2.759 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿತ್ತು. ಅದಕ್ಕೂ ಹಿಂದಿನ ವಾರದಲ್ಲಿ 4.471 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿತ್ತು. ಇದೀಗ 5.89 ಬಿಲಿಯನ್ ಡಾಲರ್​ನಷ್ಟು ನಷ್ಟ ಆಗಿದೆ.

ಇದನ್ನೂ ಓದಿ: Inflation: ರೀಟೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69; ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆ

ಫಾರೆಕ್ಸ್ ರಿಸರ್ವ್ಸ್ ನಿಧಿಯಲ್ಲಿ ಫಾರೀನ್ ಕರೆನ್ಸಿ ಆಸ್ತಿ, ಗೋಲ್ಡ್ ರಿಸರ್ವ್ಸ್, ಎಸ್​ಡಿಆರ್, ಐಎಂಎಫ್​ನಲ್ಲಿರಿಸಿದ ನಿಧಿ ಇವಿಷ್ಟೂ ಅಂಶಗಳು ಇರುತ್ತವೆ. ಈ ಪೈಕಿ ಕರೆನ್ಸಿ ಆಸ್ತಿ ಅತಿಹೆಚ್ಚು ಇರುತ್ತದೆ. ನಂತರದ ಮುಖ್ಯ ಸಂಪತ್ತು ಚಿನ್ನವಾಗಿರುತ್ತದೆ.

ಡಿಸೆಂಬರ್ 30ರಿಂದ ಜನವರಿ 5ರವರೆಗಿನ ವಾರದಲ್ಲಿ ವಿದೇಶೀ ಕರೆನ್ಸಿ ಸಂಪತ್ತು ಬರೋಬ್ಬರಿ 4.96 ಬಿಲಿಯನ್ ಡಾಲರ್​ನಷ್ಟು ತಗ್ಗಿದೆ. ಚಿನ್ನದ ಮೀಸಲು ನಿಧಿ 839 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಎಸ್​ಡಿಆರ್ 67 ಮಿಲಿಯನ್, ಐಎಂಎಫ್ ರಿಸರ್ವ್ ಮೊತ್ತ 26 ಮಿಲಿಯನ್ ಡಾಲರ್ ಕಡಿಮೆ ಆಗಿದೆ.

ಇದನ್ನೂ ಓದಿ: ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?

ಈ ಹಣಕಾಸು ವರ್ಷದಲ್ಲಿ 2023ರ ಏಪ್ರಿಲ್​ನಿಂದೀಚೆ ಭಾರತದಲ್ಲಿ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ 55.72 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. 623.2 ಬಿಲಿಯನ್ ಡಾಲರ್ ಮೊತ್ತವು ಈ ವರ್ಷದ ಗರಿಷ್ಠ ಫಾರೆಕ್ಸ್ ಸಂಪತ್ತಾಗಿದೆ. ಆದರೆ, 2021ರ ಅಕ್ಟೋಬರ್ ತಿಂಗಳಲ್ಲಿ ಫಾರೆಕ್ಸ್ ಮೀಸಲು ನಿಧಿ 645 ಬಿಲಿಯನ್ ಡಾಲರ್​ನಷ್ಟು ಗರಿಷ್ಠ ಮಟ್ಟ ಮುಟ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us