ಭಾರತ ವಿರುದ್ಧ ಕೆಲಸ ಮಾಡೋದಿಲ್ಲ ಪಾಕಿಸ್ತಾನ-ಚೀನಾದ ‘ಬ್ರಹ್ಮಪುತ್ರ’ ಅಸ್ತ್ರ; ಯಾವ ಲಾಜಿಕ್ಕು?

What happens if China stops Brahmaputra river flow to India: ಪಾಕಿಸ್ತಾನಕ್ಕೆ ನೀವು ಸಿಂಧೂ ನದಿ ನೀರು ಬಿಡಲಿಲ್ಲವೆಂದರೆ ನಿಮಗೆ ಬ್ರಹ್ಮಪುತ್ರ ನದಿ ನೀರು ಕೊಡೋದಿಲ್ಲ ಎಂದು ಭಾರತಕ್ಕೆ ಚೀನಾ ಪರೋಕ್ಷ ಎಚ್ಚರಿಕೆ ಕೊಟ್ಟಿದೆ. ಆದರೆ, ಬ್ರಹ್ಮಪುತ್ರ ನದಿ ನೀರನ್ನು ಚೀನಾ ತಡೆದರೆ ಭಾರತಕ್ಕೆ ಹಾನಿಯಾಗುವಂಥದ್ದು ಕಡಿಮೆ ಎನ್ನುವುದು ಅಸ್ಸಾಮ್ ಮುಖ್ಯಮಂತ್ರಿ ಅನಿಸಿಕೆ. ಬ್ರಹ್ಮಪುತ್ರ ನದಿ ಭಾರತದಲ್ಲಿ ಹೆಚ್ಚಾಗಿ ಹರಿಯುತ್ತದೆ. ಭಾರತದಲ್ಲೇ ಬೀಳುವ ಮಳೆಯ ನೀರಿನಿಂದ ಈ ನದಿ ತುಂಬುತ್ತದೆ ಎಂಬುದು ಅವರ ವಾದ.

ಭಾರತ ವಿರುದ್ಧ ಕೆಲಸ ಮಾಡೋದಿಲ್ಲ ಪಾಕಿಸ್ತಾನ-ಚೀನಾದ ‘ಬ್ರಹ್ಮಪುತ್ರ’ ಅಸ್ತ್ರ; ಯಾವ ಲಾಜಿಕ್ಕು?
ಬ್ರಹ್ಮಪುತ್ರ ನದಿ

Updated on: Jun 04, 2025 | 1:07 PM

ನವದೆಹಲಿ, ಜೂನ್ 4: ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹರಿದುಹೋಗದಂತೆ ಭಾರತ ತಡೆದಿಟ್ಟುಕೊಂಡಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ತಾನವು ನಾನಾ ತಂತ್ರಗಳ ಮೂಲಕ ಭಾರತವನ್ನು ಬೆದರಿಸಲು ಯತ್ನಿಸುತ್ತಿದೆ. ಇದಕ್ಕೆ ಚೀನಾ ಕೂಡ ಸೇರಿಕೊಂಡಂತಿದೆ. ಭಾರತವು ಬೇರೆ ದೇಶಕ್ಕೆ ನೀರು ಹರಿಸಲಿಲ್ಲವೆಂದರೆ, ಅದಕ್ಕೆ ಹರಿದು ಬರುವ ನೀರು, ಬರದೇ ಹೋಗಬಹುದು ಎಂದು ಚೀನಾದ ಉನ್ನತ ಅಧಿಕಾರಿಯೊಬ್ಬರು ಕಳೆದ ವಾರ ಹೇಳಿದ್ದರು. ಇದು ಭಾರತಕ್ಕೆ ಬಹುತೇಕ ನೇರ ಎಚ್ಚರಿಕೆ ನೀಡಿದಂತಿತ್ತು.

ಉತ್ತರ ಭಾರತದಲ್ಲಿರುವ ಕೆಲ ನದಿಗಳು ಚೀನಾದಲ್ಲಿ (ಟಿಬೆಟ್) ಹುಟ್ಟುತ್ತವೆ. ಇದರಲ್ಲಿ ಪ್ರಮುಖವಾದುವು ಬ್ರಹ್ಮಪುತ್ರ, ಸಿಂಧೂ, ಸಟ್ಲಜ್ ಇತ್ಯಾದಿ. ಯಾರ್ಲುಂಗ್ ಟ್ಸಾಂಗ್​​ಪೊ ಹೆಸರಿನಿಂದ ಟಿಬೆಟಿಯನ್ನರು ಕರೆಯುವ ಈ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಚೀನಾ ಅಣೆಕಟ್ಟುಗಳ ಮೂಲಕ ನಿಯಂತ್ರಣ ಹೊಂದಿದೆ. ಇಲ್ಲಿ ಭಾರತಕ್ಕೆ ನೀರನ್ನು ಹರಿಸದೇ ನಿಲ್ಲಿಸಿ ಪಾಠ ಕಲಿಸುತ್ತೇವೆ ಎಂಬುದು ಪಾಕಿಸ್ತಾನ-ಚೀನಾ ಮಿತ್ರಕೂಟದ ಸನ್ನಾಹ. ಆದರೆ, ಬ್ರಹ್ಮಪುತ್ರವನ್ನು ಚೀನಾ ತಡೆದಿಡಿದರೆ ಭಾರತಕ್ಕೆ ಎಷ್ಟು ಹಾನಿಯಾಗುತ್ತದೆ?

ಬ್ರಹ್ಮಪುತ್ರ ಹರಿವಿಗೆ ಚೀನಾದ ಕೊಡುಗೆ ಕಡಿಮೆ

ಬ್ರಹ್ಮಪುತ್ರ ನದಿ ನೀರನ್ನು ಚೀನಾ ಹಿಡಿದಿಟ್ಟುಕೊಂಡರೆ ಭಾರತಕ್ಕೆ ಹೆಚ್ಚು ಹಾನಿಯಾಗುವಂಥದ್ದೇನಿಲ್ಲ ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮೊನ್ನೆ ಹೇಳಿದ್ದಾರೆ. ಅದಕ್ಕೆ ಪೂರಕವಾದ ಅಂಕಿ ಅಂಶಗಳನ್ನೂ ಅವರು ಪ್ರಸ್ತುತಪಡಿಸಿದ್ದಾರೆ. ಚೀನಾದಿಂದ ಬ್ರಹ್ಮಪುತ್ರ ನದಿ ನೀರು ಬರದೇ ಹೋದರೆ ಭಾರತಕ್ಕೆ ದೊಡ್ಡ ಹಾನಿಯಾಗುತ್ತದೆ ಎನ್ನುವುದು ತಪ್ಪು ಕಲ್ಪನೆ ಎಂಬುದು ಅವರ ವಾದ.

ಇದನ್ನೂ ಓದಿ: ಅಡವಿಟ್ಟ ಚಿನ್ನ, ಲಾಕರ್​​ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್

‘ಬ್ರಹ್ಮಪುತ್ರ ನದಿ ನೀರಿಗೆ ಚೀನಾ ಮೇಲೆ ಅವಲಂಬನೆ ಇಲ್ಲ. ಭಾರತಕ್ಕೆ ಅದು ಪ್ರವೇಶವಾದ ಬಳಿಕ ಮಳೆಯ ನೀರಿನಿಂದ ಸಮೃದ್ಧಗೊಳ್ಳುತ್ತದೆ’ ಎಂದು ಅಸ್ಸಾಮ್ ಮುಖ್ಯಮಂತ್ರಿಗಳು ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ಹೇಳಿದ್ದಾರೆ.

ಅವರ ಪ್ರಕಾರ, ಭಾರತಕ್ಕೆ ಹರಿಯುವ ಬ್ರಹ್ಮಪುತ್ರ ನದಿ ನೀರಿಗೆ ಚೀನಾದ ಕೊಡುಗೆ ಶೇ. 30-35 ಇರಬಹುದು. ಟಿಬೆಟ್​​​ನಲ್ಲಿ ಹಿಮಕರಗುವಿಕೆ ಮತ್ತು ಸೀಮಿತ ಮಳೆಯಿಂದ ಒಂದಷ್ಟು ನೀರು ಭಾರತಕ್ಕೆ ಹರಿದುಬರುತ್ತದೆ. ಉಳಿದ ಶೇ. 65ರಿಂದ 70ರಷ್ಟು ನೀರು ಭಾರತದ ಅರುಣಾಚಲ, ಅಸ್ಸಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಬೀಳುವ ಮುಂಗಾರು ಮಳೆಯಿಂದ ಸೇರಿಕೊಳ್ಳುತ್ತದೆ.

ಅಷ್ಟೇ ಅಲ್ಲ, ಸುಬಾನಸಿರಿ, ಲೋಹಿತ್, ಕಾಮೆಂಗ್, ಮಾನಸ್, ಧನಸಿರಿ, ಜಿಯಾ ಭರಾಲಿ, ಕೋಪಿಲಿ ಇತ್ಯಾದಿ ಹಲವು ಉಪನದಿ, ತೊರೆ ಇತ್ಯಾದಿಗಳ ಮೂಲಕ ನೀರು ಬ್ರಹ್ಮಪುತ್ರ ನದಿಯನ್ನು ಸೇರುತ್ತದೆ.

ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಅವಕಾಶ ಹೊಂದಿರುವ ಚೀನಾ?

ಭಾರತದ ಈಶಾನ್ಯ ರಾಜ್ಯಗಳು ಪ್ರವಾಹ ಸೂಕ್ಷ್ಮ ಎನಿಸಿವೆ. ಇಲ್ಲಿ ಸಾಕಷ್ಟು ಮಳೆಯಾಗುವುದರಿಂದ ಬಹಳ ಕಡೆ ಪ್ರವಾಹ ಏರ್ಪಡುತ್ತದೆ. ಒಂದು ವೇಳೆ ಚೀನಾ ದೇಶವು ಬ್ರಹ್ಮಪುತ್ರ ನದಿ ನೀರು ನಿಲ್ಲಿಸಿದರೆ ಭಾರತಕ್ಕೆ ಅನುಕೂಲವೇ ಆಗುತ್ತದೆ ಎಂಬುದು ಹಿಮಂತ್ ಬಿಸ್ವ ಶರ್ಮಾ ಅವರ ಅನಿಸಿಕೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಡೆಯುವಾಗ ನಿಮ್ಮ ಧೂಮಪಾನ ಚಟ ಮುಚ್ಚಿಟ್ಟರೆ ಏನಾಗುತ್ತೆ? ವಿಮಾ ಸಂಸ್ಥೆಗೆ ಗೊತ್ತಾಗೋದು ಹೇಗೆ? ಇಲ್ಲಿದೆ ಡೀಟೇಲ್ಸ್

ಬ್ರಹ್ಮಪುತ್ರ ನದಿ ನೀರಿನ ಮೂಲಕ ಚೀನಾ ಭಾರತದಲ್ಲಿ ಪ್ರವಾಹ ಸೃಷ್ಟಿಸುವ ಅವಕಾಶ ಹೊಂದಿರಬಹುದು. ಅಣೆಕಟ್ಟಿನಿಂದ ಚೀನಾ ಹೆಚ್ಚಿನ ನೀರನ್ನು ಹರಿಬಿಟ್ಟರೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಭೀಕರವಾಗಬಹುದು. ಅಸ್ಸಾಮ್ ಮುಖ್ಯಮಂತ್ರಿಗಳು ಈ ಪರಿಸ್ಥಿತಿ ನಿಯಂತ್ರಿಸಲು ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದ್ದಾರೆ.

ವಿವಿಧೆಡೆ ಜಲಸಂಗ್ರಹ ವ್ಯವಸ್ಥೆಗಳನ್ನು ಮಾಡುವುದು ಮಾಡುವುದು ಸೇರಿದಂತೆ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವುದು ಅವರ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ