
ನವದೆಹಲಿ, ಜೂನ್ 10: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಇಂಧನ ಭದ್ರತೆಯ ಕಾಳಜಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಮೂರು ದಶಕಗಳಷ್ಟು ಹಳೆಯದಾದ, ಮಹತ್ವಾಕಾಂಕ್ಷೆಯ ‘ಒಮಾನ್-ಗುಜರಾತ್ ಆಳಸಮುದ್ರದ ನೈಸರ್ಗಿಕ ಅನಿಲ ಪೈಪ್ಲೈನ್ ಯೋಜನೆ’ಗೆ (Middle East-India Deepwater Pipeline – MEIDP) ಮರುಜೀವ ನೀಡಿದೆ. ಸುಮಾರು 40,000 ಕೋಟಿ ರೂ ವೆಚ್ಚದ ಈ ಬೃಹತ್ ಯೋಜನೆಗಾಗಿ ವಿವರವಾದ ಸಾಧ್ಯತಾ ವರದಿ (Detailed Feasibility Report) ಸಿದ್ಧಪಡಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಪ್ರಮುಖ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಾದ ಗೇಲ್ (GAIL), ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (EIL) ಗೆ ನಿರ್ದೇಶನ ನೀಡಿದೆ.
ದೆಲಿ ಮೂಲದ ಖಾಸಗಿ ಒಕ್ಕೂಟವಾದ ‘ಸೌತ್ ಏಷ್ಯಾ ಗ್ಯಾಸ್ ಎಂಟರ್ಪ್ರೈಸ್’ (SAGE) ಸಲ್ಲಿಸಿದ ಮುನ್ನೋಟ ವರದಿಯ ಆಧಾರದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಯೋಜನೆಯು ಒಮಾನ್ನ ರಾಸ್ ಅಲ್ ಜಿಫಾನ್ ಕರಾವಳಿಯಿಂದ ಭಾರತದ ಗುಜರಾತ್ನ ಪೋರಬಂದರ್ ಕರಾವಳಿಯವರೆಗೆ ಅರಬ್ಬಿ ಸಮುದ್ರದ ಆಳದಲ್ಲಿ ಸುಮಾರು 2,000 ಕಿಲೋಮೀಟರ್ ಉದ್ದದ ಪೈಪ್ಲೈನ್ ನಿರ್ಮಿಸುವುದನ್ನು ಒಳಗೊಂಡಿದೆ. ಪೂರ್ಣಗೊಂಡ ನಂತರ, ಇದು ಪ್ರತಿದಿನ ಸುಮಾರು 31 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (mmscmd) ನೈಸರ್ಗಿಕ ಅನಿಲವನ್ನು ನೇರವಾಗಿ ಭಾರತಕ್ಕೆ ಪೂರೈಸುವ ಸಾಮರ್ಥ್ಯ ಹೊಂದಿರಲಿದೆ.
ಭಾರತ ಮತ್ತು ಓಮನ್ ನಡುವೆ ಗ್ಯಾಸ್ ಪೈಪ್ಲೈನ್ ಸ್ಥಾಪಿಸುವ ಇರಾದೆ ಇವತ್ತಿನದಲ್ಲ. ಇದು ಮೂರು ದಶಕಗಳ ಹಿಂದಿನ ಕನಸು. 20ನೇ ಶತಮಾನದ ಎಂಬತ್ತರ ದಶಕದಲ್ಲಿ ಮೊದಲ ಪ್ರಸ್ತಾವ ಆಗುತ್ತದೆ. ನಂತರ, 1993ರಲ್ಲಿ ಸಾಧ್ಯತಾ ವರದಿಗಾಗಿ ಅಧ್ಯಯನ ನಡೆಸಲಾಗುತ್ತದೆ. ಹಾಗೆಯೇ ಯೋಜನೆ ಬೆಳಕು ಕಾಣುವುದಿಲ್ಲ. ಈ ಮಧ್ಯೆ ಹಲವು ಬಾರಿ ಈ ಯೋಜನೆಗೆ ಜೀವ ಕೊಡುವ ಪ್ರಯತ್ನಗಳಾಗುತ್ತವಾದರೂ ಯೋಜನೆಯು ಕಡತ ಬಿಟ್ಟು ಅಲುಗಾಡುವುದಿಲ್ಲ. ಈಗ ಸರ್ಕಾರ ಮತ್ತೊಮ್ಮೆ ಆಸಕ್ತಿ ತೋರಿದೆ. ಹಾರ್ಮುಜ್ ಜಲಸಂಕಷ್ಟವು ಈ ಪೈಪ್ಲೈನ್ ಯೋಜನೆಯ ಮಹತ್ವವನ್ನು ಎತ್ತಿ ತೋರಿಸಿದಂತಿದೆ.
ತೈಲ ಸರಬರಾಜಿಗೆ ಹಡಗಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಈ ಪೈಪ್ಲೈನ್ ಯೋಜನೆ ಸಹಕಾರಿಯಾಗುತ್ತದೆ. ಇಂಧನ ಸರಬರಾಜು ವ್ಯವಸ್ಥೆ ಮತ್ತಷ್ಟು ಬಲಿಷ್ಠಗೊಳ್ಳಲು ಸಾಧ್ಯವಾಗುತ್ತದೆ. ಗಲ್ಫ್ ರಾಷ್ಟ್ರಗಳಿಂದ ತೈಲ ಹೊತ್ತುಬರುವ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಮೂಲಕವೇ ಬರಬೇಕು. ಕಳೆದ ಕೆಲ ತಿಂಗಳಿಂದ ಉಂಟಾದ ರೀತಿಯ ಬಿಕ್ಕಟ್ಟು ಉದ್ಭವವಾದಲ್ಲಿ ತೈಲಕ್ಕೆ ತತ್ವಾರ ಪಡಬೇಕಾಗುತ್ತದೆ. ಈ ಆಳಸಮುದ್ರದ ಪೈಪ್ಲೈನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವುದರಿಂದ ಭಾರತಕ್ಕೆ ಸುರಕ್ಷಿತ ಇಂಧನ ಕಾರಿಡಾರ್ ಸಿಗಲಿದೆ.
2030ರ ಇಂಧನ ಗುರಿ: ಭಾರತವು ತನ್ನ ಒಟ್ಟು ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು 2030ರ ವೇಳೆಗೆ ಶೇ. 15 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಇಂಧನ, ರಸಗೊಬ್ಬರ ಮತ್ತು ವಿದ್ಯುತ್ ವಲಯಕ್ಕೆ ಇದು ಅತ್ಯಗತ್ಯ.
ಪಾಕಿಸ್ತಾನದ ಹಸ್ತಕ್ಷೇಪವಿಲ್ಲ: ಈ ಹಿಂದೆ ನೆಲದ ಮೇಲಿಂದ ಪೈಪ್ಲೈನ್ ಹಾಕಲು ಯೋಜಿಸಲಾಗಿತ್ತು. ಆದರೆ, ಆ ಯೋಜನೆಯಲ್ಲಿ ಪೈಪ್ಲೈನ್ ಪಾಕಿಸ್ತಾನದ ಮೂಲಕ ಹಾದುಹೋಗಬೇಕು. ಭದ್ರತಾ ದೃಷ್ಟಿಯಿಂದ ಇದು ಸಮಂಜಸ ಎನಿಸುವುದಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಅಂಡರ್-ಸೀ ಕೊಳವೆ ಮಾರ್ಗವು ಸಂಪೂರ್ಣವಾಗಿ ಅಂತಾರಾಷ್ಟ್ರಿಯ ಜಲಪ್ರದೇಶದಲ್ಲಿ ಇರಲಿದೆ. ಯಾವುದೇ ಮೂರನೇ ದೇಶದ (Transit Country) ಹಸ್ತಕ್ಷೇಪ ಇರುವುದಿಲ್ಲ. ಯೋಜಿಸಲಾಗಿದ್ದ ಭೂಪ್ರದೇಶದ ಪೈಪ್ಲೈನ್ಗಳು ಪಾಕಿಸ್ತಾನದ ಮೂಲಕ ಹಾದುಹೋಗಬೇಕಿದ್ದರಿಂದ ಭದ್ರತಾ ಕಾರಣಗಳಿಗಾಗಿ ನನೆಗುದಿಗೆ ಬಿದ್ದಿದ್ದವು.
ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
ಯೋಜನೆಯ ಸಾಧಕ ಮತ್ತು ಬಾಧಕಗಳು: ಯಾವುದೇ ಬೃಹತ್ ಮೂಲಸೌಕರ್ಯ ಯೋಜನೆಯಂತೆ, ಈ ಸಾಗರದಾಳದ ಪೈಪ್ಲೈನ್ ಕೂಡ ತನ್ನದೇ ಆದ ಅನುಕೂಲ ಮತ್ತು ಸವಾಲುಗಳನ್ನು ಹೊಂದಿದೆ:
ಹಡಗುಗಳ (LNG Tankers) ಮೂಲಕ ಅನಿಲವನ್ನು ದ್ರವೀಕರಿಸಿ, ಸಾಗಿಸಿ, ನಂತರ ಮತ್ತೆ ಅನಿಲ ರೂಪಕ್ಕೆ ತರುವ ಪ್ರಕ್ರಿಯೆಗೆ ಹೋಲಿಸಿದರೆ ಪೈಪ್ಲೈನ್ ಮೂಲಕ ನೇರ ಸರಬರಾಜು ತುಂಬಾ ಅಗ್ಗ. ಸಾಗಣೆ ವೆಚ್ಚವು ಪ್ರತಿ MMBtu ಗೆ ಕೇವಲ $2 ರಿಂದ $2.25 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಕಡಲ ಮಾರ್ಗದಲ್ಲಿ ಹಡಗುಗಳ ಬಾಡಿಗೆ ದರ (Freight Rates) ಮತ್ತು ಇಂಧನ ಬೆಲೆಗಳ ತೀವ್ರ ಏರಿಳಿತದಿಂದ ಭಾರತದ ಆರ್ಥಿಕತೆಗೆ ಆಗುವ ನಷ್ಟವನ್ನು ಇದು ತಪ್ಪಿಸುತ್ತದೆ.
ಈ ಪೈಪ್ಲೈನ್ ಕೇವಲ ಒಮಾನ್ಗೆ ಸೀಮಿತವಾಗದೆ, ಭವಿಷ್ಯದಲ್ಲಿ ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್ನಂತಹ ಜಗತ್ತಿನ ಅತಿ ದೊಡ್ಡ ಅನಿಲ ನಿಕ್ಷೇಪ ಹೊಂದಿರುವ ದೇಶಗಳ ಗ್ರಿಡ್ಗಳೊಂದಿಗೆ ಸಂಪರ್ಕ ಸಾಧಿಸಲು ಭಾರತಕ್ಕೆ ಹೆಬ್ಬಾಗಿಲಾಗಲಿದೆ.
ಈ ಪೈಪ್ಲೈನ್ ಅರಬ್ಬಿ ಸಮುದ್ರದ ಸುಮಾರು 3,450 ಮೀಟರ್ (3.5 ಕಿಮೀ) ಆಳದಲ್ಲಿ ಹಾದುಹೋಗಬೇಕು. ಇಷ್ಟು ಆಳದಲ್ಲಿ ನೀರಿನ ಒತ್ತಡವು ಅತಿಯಾಗಿರುತ್ತದೆ. ಜಗತ್ತಿನಲ್ಲೇ ಇಷ್ಟು ಆಳದಲ್ಲಿ ಪೈಪ್ಲೈನ್ ನಿರ್ಮಿಸಿದ ಉದಾಹರಣೆಗಳು ತೀರಾ ವಿರಳ.
ಈ ಮಾರ್ಗವು ಸಮುದ್ರದಾಳದ ಸಕ್ರಿಯ ಭೂಕಂಪನ ವಲಯಗಳು (Owen Fracture Zone) ಮತ್ತು ಕಡಿದಾದ ಇಳಿಜಾರುಗಳ ಮೂಲಕ ಹಾದುಹೋಗುವುದರಿಂದ, ನಡುಸಮುದ್ರದಲ್ಲಿ ಪೈಪ್ಲೈನ್ ದುರಸ್ತಿ ಮತ್ತು ನಿರ್ವಹಣೆ ಅತ್ಯಂತ ದುಬಾರಿ ಹಾಗೂ ಅಪಾಯಕಾರಿ ಕೆಲಸವಾಗಿದೆ.
ಈ ಯೋಜನೆಗೆ ಸರಣಿ ಅನುಮತಿಗಳು ಸಿಕ್ಕರೂ ಸಹ, ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡು ಭಾರತಕ್ಕೆ ಅನಿಲ ಪೂರೈಕೆಯಾಗಲು ಕನಿಷ್ಠ 5 ರಿಂದ 7 ವರ್ಷಗಳು ಬೇಕಾಗಬಹುದು.
₹40,000 ಕೋಟಿಗೂ ಅಧಿಕ ವೆಚ್ಚದ ಈ ಯೋಜನೆಗೆ ಬಂಡವಾಳ ಕ್ರೋಡೀಕರಣ ಮಾಡುವುದು ಮತ್ತು ದೀರ್ಘಾವಧಿಯ ಅನಿಲ ಖರೀದಿ ಒಪ್ಪಂದಗಳನ್ನು (Take-or-pay contracts) ಮಾಡಿಕೊಳ್ಳುವುದು ಆರ್ಥಿಕವಾಗಿ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ
ಸಾಕಷ್ಟು ಸವಾಲುಗಳಿಂದ ಕೂಡಿರುವ ಭಾರತ-ಓಮನ್ ಆಳಸಮುದ್ರ ಪೈಪ್ಲೈನ್ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯತಾ ವರದಿ ತಯಾರಿಸುವಂತೆ ಗೇಲ್ (ಜಿಎಐಎಲ್), ಎಂಜಿನಿಯರ್ಸ್ ಇಂಡಿಯಾ, ಇಂಡಿಯನ್ ಆಯಿಲ್ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಲಾಗಿದೆ. ಯೋಜನೆಯ ಎಲ್ಲಾ ಸಾಧಕ ಮತ್ತು ಬಾಧಕಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ಕೊಡಲಾಗುತ್ತದೆ. ಅದರಲ್ಲಿರುವ ಅಂಶಗಳ ಮೇಲೆ ಸರ್ಕಾರದ ಮುಂದಿನ ನಡೆ ಇರುತ್ತದೆ.
ಭಾರತವು ಕೇವಲ ಸಮುದ್ರದ ಹಡಗು ಮಾರ್ಗಗಳನ್ನು ನೆಚ್ಚಿಕೊಳ್ಳದೆ, ತನ್ನ ಇಂಧನ ಭದ್ರತೆಯನ್ನು ಗಟ್ಟಿಗೊಳಿಸಲು ಭೌಗೋಳಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಿದ್ಧವಾಗುತ್ತಿದೆ ಎಂಬುದಕ್ಕೆ ಈ ಯೋಜನೆಯ ಮರುಜೀವವೇ ಸಾಕ್ಷಿ. ಮುಂಬರುವ ಸಾಧ್ಯತಾ ವರದಿಯ ಫಲಿತಾಂಶವು ಈ ಏಷ್ಯಾದ ಅತಿ ದೊಡ್ಡ ಇಂಧನ ಕಾರಿಡಾರ್ನ ಭವಿಷ್ಯವನ್ನು ನಿರ್ಧರಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ