ಬೆಂಗಳೂರು, ಫೆಬ್ರುವರಿ 12: ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ನಿರೀಕ್ಷೆಮೀರಿದ ಉತ್ಸಾಹದ ಸ್ಪಂದನೆ ಸಿಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯಕ್ಕೆ ಏಳೂವರೆ ಲಕ್ಷ ಕೋಟಿ ರೂ ಬಂಡವಾಳ ಸಿಗುವ ನಿರೀಕ್ಷೆ ಇತ್ತಾದರೂ, ಈಗಾಗಲೇ ಅದನ್ನು ಮೀರಿಸುವಷ್ಟು ಬಂಡವಾಳ ಹರಿದುಬರುವ ಸಾಧ್ಯತೆ ಇದೆ. ಮೊದಲ ದಿನವೇ ಮೂರು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಂದಗಳಾಗಿರುವುದು ತಿಳಿದುಬಂದಿದೆ.
ನವೀಕರಣ ಇಂಧನ ಅಭಿವೃದ್ಧಿ ನಿಗಮ (ಕೆಆರ್ಇಡಿಎಲ್) 13 ಪ್ರಮುಖ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ ಪರ್ಯಾಯ ಇಂಧನ (renewable energy) ಉತ್ಪಾದನೆಗೆ ಈ ಕಂಪನಿಗಳಿಂದ 3.43 ಲಕ್ಷ ಕೋಟಿ ರೂ ಹೂಡಿಕೆ ಆಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮತ್ತಷ್ಟು ಸೌರಶಕ್ತಿ, ವಾಯುಶಕ್ತಿ ಘಟಕಗಳು ನಿರ್ಮಾಣವಾಗಲಿವೆ. ಜೆಎಸ್ಡಬ್ಲ್ಯು ನಿಯೋ ಎನರ್ಜಿಯಿಂದ 56,000 ಕೋಟಿ ರೂ; ರಿನ್ಯೂ ಪ್ರೈ ಲಿ ಹಾಗು ಟಾಟಾ ಪವರ್ ರಿನಿವಬಲ್ ಎನರ್ಜಿ ಲಿ ಸಂಸ್ಥೆಗಳಿಂದ ತಲಾ 50,000 ಕೋಟಿ ರೂ ಹೂಡಿಕೆ ಬರಲಿದೆ.
ಇದನ್ನೂ ಓದಿ: ವ್ಹೀಲ್ ಚೇರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ
ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಬಹಳ ಅಗತ್ಯವಾಗಿರುವ ಚಿಪ್ಟೂಲ್ ಸಾಮಗ್ರಿಗಳನ್ನು ತಯಾರಿಸುವಂತಹ ಕಂಪನಿ ಕರ್ನಾಟಕಕ್ಕೆ ಆಗಮಿಸುತ್ತಿದೆ. ಅಮೆರಿದಕ ಲ್ಯಾಮ್ ರಿಸರ್ಚ್ ಸಂಸ್ಥೆ ಮುಂದಿನ ಕೆಲ ವರ್ಷಗಳಲ್ಲಿ ಕರ್ನಾಟಕದಲ್ಲಿ 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ಹೂಡಿಕೆ ಮಾಡಲು ಬದ್ಧವಾಗಿದೆ. ಈ ಸಂಬಂಧ ಕೆಐಎಡಿಬಿ ಜೊತೆ ಅದು ಎಂಒಯು ಮಾಡಿಕೊಂಡಿದೆ.
ಕರ್ನಾಟಕ ಸರ್ಕಾರ ಮುಂದಿನ ಐದು ವರ್ಷ ಕಾಲ ರಾಜ್ಯದಲ್ಲಿ ಉದ್ಯಮಗಳಿಗೆ ಉತ್ತೇಜನ ನೀಡಲು ಪೂರಕವಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುತ್ತಿದೆ. ಕೈಗಾರಿಕಾ ಬೆಳವಣಿಗೆಗೆ ಮೂರು ವಲಯಗಳನ್ನು ಸೃಷ್ಟಿಸಲಾಗುತ್ತದೆ. ಸನ್ರೈಸ್ ವಲಯ (ಉದಯೋನ್ಮುಖ ಕ್ಷೇತ್ರಗಳು) ಹಾಗೂ ಲೋಕಲ್ ಮ್ಯಾನುಫ್ಯಾಕ್ಚರಿಂಗ್ಗೆ ಒತ್ತು ಕೊಡಲಾಗುತ್ತದೆ. ಹಿಂದುಳಿದಿರುವ ಪ್ರದೇಶಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಯೋಜನೆ ಇದೆ.
ಇದನ್ನೂ ಓದಿ: ನೊಂದಾಯಿತ ಸ್ಟಾರ್ಟಪ್ಗಳ ಸಂಖ್ಯೆ 10 ಲಕ್ಷಕ್ಕೆ ಏರಿಸುವ ಗುರಿ: ಪಿಯೂಶ್ ಗೋಯಲ್
ಎಂಎಸ್ಎಂಇಗಳಿಗೆ ಶೇ. 30ರಷ್ಟು ಸ್ಥಳಾವಕಾಶ ಕೊಡಲಾಗುತ್ತದೆ. ಆರ್ ಅಂಡ್ ಡಿಗೆ ಪ್ರಧಾನ್ಯತೆ ಕೊಡಲಾಗುತ್ತದೆ. ಖಾಸಗಿ ಕೈಗಾರಿಕಾ ಪಾರ್ಕ್ಗಳ ಅಭಿವೃದ್ಧಿಗೆ ಅವಕಾಶ ಕೊಡಲಾಗುವುದು. ಹೀಗೆ ವಿವಿಧ ಆಲೋಚನೆಗಳು ಕರ್ನಾಟಕ ಸರ್ಕಾರದ ಹೊಸ ಕೈಗಾರಿಕಾ ನೀತಿಯಲ್ಲಿ ಅಡಕವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ