ಖ್ಯಾತ ಮಹಿಳಾ ಉದ್ಯಮಿ ಮಂಜುಶ್ರೀ ಖೇತಾನ್ ವಿಧಿವಶ; ಬಿರ್ಲಾ ಕುಟುಂಬದ ಈಕೆಯ ಸಾಧನೆ ಅಮೋಘ

Manjushree Khaitan Passes Away: ಬಿ.ಕೆ. ಬಿರ್ಲಾ ಅವರ ಕೊನೆಯ ಮಗಳು ಹಾಗೂ ಹೆಸರಾಂತ ಉದ್ಯಮಿಯಾಗಿದ್ದ ಮಂಜುಶ್ರೀ ಖೇತಾನ್ ಮೇ 16, ಗುರುವಾರದಂದು ಕೋಲ್ಕತಾದಲ್ಲಿ ನಿಧನರಾಗಿದ್ದಾರೆ. 69 ವರ್ಷದ ಅವರು ದೀರ್ಘಕಾಲದಿಂದ ಅನಾರೋಗ್ಯದ ಸ್ಥಿತಿಯಲ್ಲಿದ್ದರು. ಕೇಸೋರಾಮ್ ಇಂಡಸ್ಟ್ರೀಸ್​ನ ಛೇರ್ಮನ್ ಆಗಿ ಅವರು ಆಡಳಿತಾತ್ಮಕ ಮತ್ತು ವ್ಯಾವಹಾರಾತ್ಮಕ ಚಾತುರ್ಯತೆ ತೋರಿದ್ದರು. ನಷ್ಟದಲ್ಲಿ ಕಂಪನಿಯನ್ನು ಲಾಭದ ಹಳಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲಬೇಕು.

ಖ್ಯಾತ ಮಹಿಳಾ ಉದ್ಯಮಿ ಮಂಜುಶ್ರೀ ಖೇತಾನ್ ವಿಧಿವಶ; ಬಿರ್ಲಾ ಕುಟುಂಬದ ಈಕೆಯ ಸಾಧನೆ ಅಮೋಘ
ಮಂಜುಶ್ರೀ ಖೇತಾನ್

Updated on: May 17, 2024 | 3:32 PM

ಕೋಲ್ಕತಾ, ಮೇ 17: ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ (Kesoram Industries) ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ (Manjushree Khaitan) ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯೂ ಮುಗಿದಿದೆ. ಬಿರ್ಲಾ ಕುಟುಂಬದ ಕುಡಿಯಾಗಿದ್ದ ಮಂಜುಶ್ರೀ ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಲ್ಲಿಯ ಬಿರ್ಲಾ ಪಾರ್ಕ್​ನಲ್ಲಿ ನಿನ್ನೆ ಗುರುವಾರ ಕೊನೆಯುಸಿರು ಎಳೆದಿದ್ದಾರೆ. ಬಿಕೆ ಬಿರ್ಲಾ ಅವರ ಕೊನೆಯ ಮಗಳಾದ ಮಂಜುಶ್ರೀ ಅವರಿಗೆ ಇದ್ದ ಏಕೈಕ ಪುತ್ರಿ ವಿದುಲಾ ಜಲನ್ ಒಂದು ವರ್ಷದ ಹಿಂದಷ್ಟೇ ಮೃತಪಟ್ಟಿದ್ದರು. ಇದರೊಂದಿಗೆ ಪ್ರತಿಷ್ಠಿತ ಬಿರ್ಲಾ ಫ್ಯಾಮಿಲಿಯ ಬಿಸಿನೆಸ್​ಗಳೆಲ್ಲವೂ ಬಹುತೇಕ ಕುಮಾರಮಂಗಲಂ ಬಿರ್ಲಾ ಮತ್ತವರ ಕುಟುಂಬದ ಸುಪರ್ದಿಗೆ ಹೋಗಲಿದೆ. ಕೋಲ್ಕತಾದಲ್ಲಿ ನಿನ್ನೆ ಮಂಜುಶ್ರೀ ಖೇತಾನ್ ಅವರ ಅಂತ್ಯ ಸಂಸ್ಕಾರವನ್ನು ಕೆಎಂ ಬಿರ್ಲಾ ಅವರೇ ಮಾಡಿದರು.

ಕಲಬುರ್ಗಿಯಲ್ಲಿ ಸಿಮೆಂಟ್ ಫ್ಯಾಕ್ಟರಿ ಹೊಂದಿರುವ ಕೇಸೋರಾಮ್ ಇಂಡಸ್ಟ್ರೀಸ್

1998ರಲ್ಲಿ ಮಂಜುಶ್ರೀ ಅವರು ಕೇಸರೋರಾಮ್ ಇಂಡಸ್ಟ್ರೀಸ್​ಗೆ ಆಗಮಿಸಿದರು. 2013ರಲ್ಲಿ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಆದರು. 2019ರಲ್ಲಿ ಇವರ ತಂದೆ ಬಿ.ಕೆ. ಬಿರ್ಲಾ ನಿಧನದ ಬಳಿಕ ನಾನ್ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿ ಜವಾಬ್ದಾರಿ ಪಡೆದರು. ಕೇಸೋರಾಮ್ ಇಂಡಸ್ಟ್ರೀಸ್ ಒಂದು ಕಾಲದಲ್ಲಿ ನಷ್ಟದ ಮೇಲೆ ನಷ್ಟ ಕಾಣುತ್ತಾ ಸಂಕಷ್ಟದಲ್ಲಿದ್ದ ಕಂಪನಿಯಾಗಿತ್ತು. ಅದಕ್ಕೆ ಚೇತರಿಕೆ ಸಿಗಲು ಪ್ರಮುಖ ಕಾರಣವಾಗಿದ್ದು ಮಂಜುಶ್ರೀ ಅವರೇ. ಸಾಕಷ್ಟು ಬಂಡವಾಳ ತಂದು ಕಂಪನಿಯನ್ನು ಅವರು ಗಟ್ಟಿಗೊಳಿಸಿದರು. ನಷ್ಟದಲ್ಲಿ ಕಂಪನಿ ಲಾಭದಾಯಕ ಎನಿಸಿದೆ.

ಇದನ್ನೂ ಓದಿ: ದೊಡ್ಡ ಲೂಸರ್​..! ಭಾರತ ಬಿಟ್ಟು ಚೀನಾ ಹಿಡಿದುಕೊಂಡಿದ್ದಕ್ಕೆ ಇಲಾನ್ ಮಸ್ಕ್​ರನ್ನು ಟೀಕಿಸಿದ ಅಮೆರಿಕನ್ ಉದ್ಯಮಿ ವಿವೇಕ್ ವಾಧವ

ಕೇಸೋರಾಮ್ ಇಂಡಸ್ಟ್ರೀಸ್ ಬಿರ್ಲಾ ಟೈರ್ಸ್, ಬಿರ್ಲಾ ಸಿಮೆಂಟ್, ಜವಳಿ ಫ್ಯಾಕ್ಟರಿಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಎರಡು ಸಿಮೆಂಟ್ ಫ್ಯಾಕ್ಟರಿ ಹೊಂದಿದೆ. ಕಲಬುರ್ಗಿಯ ಸೇಡಂನಲ್ಲಿನ ವಾಸವದತ್ತ ಸಿಮೆಂಟ್ ಫ್ಯಾಕ್ಟರಿ ಒಂದು. ತೆಲಂಗಾಣದಲ್ಲಿ ಮತ್ತೊಂದು ಇದೆ. ಕೇಸೋರಾಮ್ ರೇಯಾನ್ ಎನ್ನುವ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ 2,700 ಮಂದಿ ಕೆಲಸ ಮಾಡುತ್ತಾರೆ.

ಈಗ ಮಂಜುಶ್ರೀ ಖೇತಾನ್ ನಿಧನರಾದ ಬಳಿಕ ಕೇಸೋರಾಮ್ ಇಂಡಸ್ಟ್ರೀಸ್​ನ ಸಿಮೆಂಟ್ ಫ್ಯಾಕ್ಟರಿಗಳು ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿಗೆ ವಿಲೀನಗೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us