ಕೊಲ್ಹಾಪುರಿ ಚಪ್ಪಲಿ ತಯಾರಿಸುವವರಲ್ಲಿ ಬಹಳ ಮಂದಿ ಕರ್ನಾಟಕದವರು: ಸಚಿವ ಪ್ರಿಯಾಂಕ್ ಖರ್ಗೆ

Kolhapuri Chappal, Minister Priyank Kharge explains role of Karnataka Artisans: ಫ್ರಾನ್ಸ್ ದೇಶದ ಫ್ಯಾಷನ್ ಬ್ರ್ಯಾಂಡ್ ಆದ ಪ್ರಾದದ ಫ್ಯಾಷನ್ ಶೋವೊಂದರಲ್ಲಿ ಮಾಡಲ್​ಗಳು ಕೊಲ್ಹಾಪುರಿ ಶೈಲಿಯ ಚಪ್ಪಲಿ ಧರಿಸಿದ್ದರು. ಕೊಲ್ಹಾಪುರಿ ಚಪ್ಪಲಿಗೆ ಮಹಾರಾಷ್ಟ್ರ ಜಿಐ ಟ್ಯಾಗ್ ಹಕ್ಕು ಹೊಂದಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ, ಕೊಲ್ಹಾಪುರಿ ಚಪ್ಪಲಿ ತಯಾರಿಕೆಯಲ್ಲಿ ಕರ್ನಾಟಕದ ಕುಶಲಕರ್ಮಿಗಳ ಪಾತ್ರ ಎಷ್ಟಿದೆ ಎನ್ನುವ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೊಲ್ಹಾಪುರಿ ಚಪ್ಪಲಿ ತಯಾರಿಸುವವರಲ್ಲಿ ಬಹಳ ಮಂದಿ ಕರ್ನಾಟಕದವರು: ಸಚಿವ ಪ್ರಿಯಾಂಕ್ ಖರ್ಗೆ
ಕೊಲ್ಹಾಪುರಿ ಚಪ್ಪಲಿ

Updated on: Jun 29, 2025 | 11:03 AM

ಬೆಂಗಳೂರು, ಜೂನ್ 29: ಮಹಾರಾಷ್ಟ್ರದ ವೈಶಿಷ್ಟ್ಯವೆಂದು ಪರಿಗಣಿಸಲಾದ ಕೊಲ್ಹಾಪುರಿ ಚಪ್ಪಲಿಯನ್ನು (Kolhapuri chappals) ವಿಶ್ವಖ್ಯಾತ ಫ್ಯಾಷನ್ ಸಂಸ್ಥೆ ಪ್ರಾದ (Prada) 1.2 ಲಕ್ಷ ರೂ ಬೆಲೆಗೆ ಮಾರಾಟ ಮಾಡುತ್ತಿದೆ ಎನ್ನುವ ಸುದ್ದಿ ಇದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ದೊರೆಯುವ ಈ ಚಪ್ಪಲಿ ತಯಾರಿಕೆಯಲ್ಲಿ ಕರ್ನಾಟಕದವರ ಪಾತ್ರವೂ ದೊಡ್ಡದಿದೆ. ಗ್ರಾಮೀನಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಈ ಬಗ್ಗೆ ಎಕ್ಸ್​​ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದಾರೆ. ಕೊಲ್ಹಾಪುರಿ ಚಪ್ಪಲಿಗೆ ಕರ್ನಾಟಕದ ಕುಶಲಕರ್ಮಿಗಳಿಗೂ ಜಿಐ ಟ್ಯಾಗ್ ಪಡೆಯಲು ಹೇಗೆ ಹೋರಾಟ ಮಾಡಲಾಯಿತು ಎನ್ನುವುದನ್ನು ಖರ್ಗೆ ವಿವರಿಸಿದ್ದಾರೆ.

‘ಕೊಲ್ಹಾಪುರಿ ಚಪ್ಪಲಿಗಳನ್ನು ತಯಾರಿಸುವ ಹೆಚ್ಚಿನ ಕುಶಲಕರ್ಮಿಗಳು ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡದ ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಗ್ ಮತ್ತಿತರ ಭಾಗಗಲ್ಲಿ ವಾಸಿಸುತ್ತಾ ಇದ್ದಾರೆ. ತಲೆತಲೆಮಾರುಗಳಿಂದ ಇವರು ಈ ಚಪ್ಪಲಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಕೊಲ್ಹಾಪುರ ಸೇರಿದಂತೆ ಸಮೀಪದ ಪಟ್ಟಣಗಳಲ್ಲಿ ಈ ಚಪ್ಪಲಿಗಳನ್ನು ಮಾರುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಕೊಲ್ಹಾಪುರವು ಈ ಚಪ್ಪಲಿಗೆ ಮುಖ್ಯ ಮಾರುಕಟ್ಟೆ ಆಗಿ ಹೋಯಿತು’ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಎಕ್ಸ್ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kolhapuri Chappal: ಕೊಲ್ಹಾಪುರಿ ಚಪ್ಪಲಿ ಹಾಕಿದ್ದೀರಾ? ವಿದೇಶೀ ಕಂಪನಿ ಕೈಗೆ ಸಿಕ್ಕ ಈ ಚಪ್ಪಲಿಯ ಹೊಸ ಬೆಲೆ ಕೇಳಿದ್ರೆ ಶಾಕ್

ಕೊಲ್ಹಾಪುರಿ ಚಪ್ಪಲಿಯ ಜಿಐ ಟ್ಯಾಗ್​​ಗೆ ಹೋರಾಟ…

ಕೊಲ್ಹಾಪುರಿ ಚಪ್ಪಲಿಗೆ ಜಿಐ ಟ್ಯಾಗ್ ಪಡೆಯಲು ತಾನು ಹೇಗೆ ಹೋರಾಟ ಮಾಡಿದ್ದೆ ಎಂಬುದನ್ನು ಖರ್ಗೆ ಹಂಚಿಕೊಂಡಿದ್ದಾರೆ.

‘ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕೊಲ್ಹಾಪುರಿ ಚಪ್ಪಲಿಗೆ ತಾನೊಂದೇ ಜಿಐ ಟ್ಯಾಗ್ ಹಕ್ಕು ಪಡೆಯಲು ಮಹಾರಾಷ್ಟ್ರ ಪ್ರಯತ್ನಿಸುತ್ತಿರುವುದನ್ನು ಗಮನಿಸಿದೆ. ಲಿಡ್ಕರ್ (LIDKAR) ಮೂಲಕ ನಾವು ಇದನ್ನು ಪ್ರತಿರೋಧಿಸಿದೆವು. ಕರ್ನಾಟಕದ ಕುಶಲಕರ್ಮಿಗಳು ಈ ಜಿಐ ಟ್ಯಾಗ್ ಹಕ್ಕಿನಿಂದ ವಂಚಿತರಾಗಬಾರದೆಂದು ಹೋರಾಡಿದೆವು. ಅದರಲ್ಲಿ ಯಶಸ್ವಿಯಾದೆವು. ಕರ್ನಾಟಕ ಮತ್ತು ಮಹಾರಾಷ್ಟ್ರದ ತಲಾ ನಾಲ್ಕು ಜಿಲ್ಲೆಗಳಿಗೆ ಜಂಟಿಯಾಗಿ ಜಿಐ ಟ್ಯಾಗ್ ನೀಡಲಾಯಿತು’ ಎಂದು ಐಟಿ ಬಿಟಿ ಸಚಿವರೂ ಆದ ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಪ್ರಾದ ಸಂಸ್ಥೆಯು ಕೊಲ್ಹಾಪುರಿ ಚಪ್ಪಲಿಯನ್ನು ಬಳಸುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ, ‘ಪ್ರಾದ ಪ್ರಕರಣದಿಂದ ಒಂದನ್ನು ತಿಳಿಯಬೇಕು: ಜಿಐ ಟ್ಯಾಗ್ ಪಡೆದರೆ ಸಾಕಾಗುವುದಿಲ್ಲ. ಸಾಂಸ್ಕೃತಿಕ ಉದ್ಯಮಶೀಲತೆ ಅವಶ್ಯಕತೆ ಇರುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ನೌಕರರ ಭವಿಷ್ಯ ನಿಧಿ: ಹೈಯರ್ ಪೆನ್ಷನ್ ಸಮಸ್ಯೆಗೆ ಶೀಘ್ರ ಪರಿಹಾರ, ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ಈ ಕುಶಲಕರ್ಮಿಗಳಿಗೆ ಕೌಶಲ್ಯವೃದ್ಧಿ, ಬ್ರ್ಯಾಂಡಿಂಗ್, ವಿನ್ಯಾಸ ನಾವೀನ್ಯತೆ, ಜಾಗತಿಕ ಮಾರುಕಟ್ಟೆ ಅವಕಾಶ ಇತ್ಯಾದಿಯನ್ನು ನೀಡಬೇಕಿದೆ. ಇವರಿಗೆ ಕ್ರೆಡಿಟ್ ಕೊಡೋದಷ್ಟೇ ಅಲ್ಲ, ಉತ್ತಮ ಬೆಲೆ, ಹೆಚ್ಚಿನ ಮಾರುಕಟ್ಟೆ ಹಾಗೂ ಗೌರವಯುತ ಬದುಕು ಬೇಕಾಗಿದೆ… ಜಿಐ ಟ್ಯಾಗ್​​ನಿಂದ ಈ ಕರ್ಮಿಗಳಿಗೆ ಕಾನೂನು ಹಕ್ಕು ಸಿಗಬಹುದು. ಅದರೆ, ಅವರಿಗೆ ಜಾಗತಿಕ ಮಾರುಕಟ್ಟೆಗಳನ್ನು ಕೊಡುವ ಜವಾಬ್ದಾರಿ ನಮಗಿದೆ’ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ