PM Kisan 2022: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ, 12ನೇ ಕಂತಿನ ಹಣ ಬಿಡುಗಡೆ

ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು. ಜತೆಗೆ, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು.

PM Kisan 2022: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ, 12ನೇ ಕಂತಿನ ಹಣ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿ
Image Credit source: ANI
Edited By:

Updated on: Oct 17, 2022 | 1:01 PM

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ (PM Kisan Samman Sammelan) ಪ್ರಧಾನಿ ನರೇಂದ್ರ ಮೋದಿ (Narendra Modi) ದೆಹಲಿಯಲ್ಲಿ ಸೋಮವಾರ ಚಾಲನೆ ನೀಡಿದರು. ಜತೆಗೆ, ಕಿಸಾನ್ ಸಮ್ಮಾನ್ ಯೋಜನೆಯಡಿ (PM Kisan Samman)12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು. ಈ ಕಂತಿನಲ್ಲಿ ಸುಮಾರು 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿದೆ. ಬಳಿಕ, 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಮೋದಿ ಚಾಲನೆ ನೀಡಿದರು. ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್‍ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು. ಸಾವಿರಾರು ರೈತರು ಸಮಾರಂಭದ ಸ್ಥಳದಲ್ಲಿ ಹಾಜರಿದ್ದರೆ, ವಿವಿಧ ಸಂಘ-ಸಂಸ್ಥೆಗಳ ಒಂದು ಕೋಟಿಗೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗಿಯಾದರು.

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ್ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದರು. ದೇಶದ ಮೂಲೆ ಮೂಲೆಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ರೈತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರೈತರನ್ನು ಮತ್ತು ಕೃಷಿಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ನಾವು ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂದು ದೇಶದಲ್ಲಿ 600ಕ್ಕೂ ಹೆಚ್ಚು ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳು ಆರಂಭಗೊಂಡಿವೆ ಎಂದು ಪ್ರಧಾನಿ ಹೇಳಿದರು.

ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ರೂಪಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ರೈತರ ಜತೆಗಿರಲಿದೆ. ಅವರ ಎಲ್ಲ ಸವಾಲುಗಳಿಗೂ ಉತ್ತರ ನೀಡಲಿದೆ. ಇದೇ ಸಂದರ್ಭದಲ್ಲಿ 8 ಲಕ್ಷ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂಪಾಯಿಯನ್ನು ಜಮೆ ಮಾಡಲಾಗಿದೆ. ದಿಪಾವಳಿ ಹಬ್ಬಕ್ಕೂ ಮುನ್ನ ಕಂತನ್ನು ವರ್ಗಾವಣೆ ಮಾಡಲಾಗಿದೆ. ಎಲ್ಲ ರೈತರಿಗೂ ಅಭಿನಂದನೆಗಳು ಎಂದು ಮೋದಿ ಹೇಳಿದರು.

ಒಂದು ದೇಶ ಒಂದು ಗೊಬ್ಬರ ಯೋಜನೆಯಡಿ ಭಾರತವು ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಗ್ಗಲಿದೆ. ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸಲಾಗಿದೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ:  ರಸಗೊಬ್ಬರ ಸಬ್ಸಿಡಿ ಯೋಜನೆಗೆ ‘ಪ್ರಧಾನಮಂತ್ರಿ ಯೋಜನೆ’ ಎಂದು ಹೆಸರಿಡಲು ನಿರ್ಧರಿಸಿದ ಕೇಂದ್ರ ಸರ್ಕಾರ


ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದ ಅಂಗವಾಗಿ ದೆಹಲಿಯಲ್ಲಿ ಕೃಷಿ ಸ್ಟಾರ್ಟ್ಅಪ್ ಕಾನ್​ಕ್ಲೇವ್​ & ವಸ್ತು ಪ್ರದರ್ಶನ ನಡೆಯುತ್ತಿದ್ದು, 1,500 ಅಗ್ರಿ ಸ್ಟಾರ್ಟ್​ಅಪ್​​ಗಳು ಹಾಗೂ 13,500 ರೈತರು ಭಾಗಿಯಾಗಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೂ ಮುನ್ನ ಈ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದ ಮೋದಿ, ಅವಲೋಕನ ನಡೆಸಿದರು.

Published On - 12:25 pm, Mon, 17 October 22

Web contact

TV9 Kannada

Read More
Follow Us