RCB: ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ

No sale of RCB, clarifies United Spirits: ಆರ್​​ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಅಲ್ಲಗಳೆದಿದೆ. ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡುವ ಯಾವ ಆಲೋಚನೆಯೂ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಮದ್ಯದ ಜಾಹೀರಾತು ನಿರ್ಬಂಧಿಸುವ ಕಾರಣದಿಂದ ಆರ್​​ಸಿಬಿಯನ್ನು ಮಾರಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಕಾರಣಕ್ಕೆ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

RCB: ಆರ್​​ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ
ಆರ್​​​ಸಿಬಿ

Updated on: Jun 10, 2025 | 7:03 PM

ಬೆಂಗಳೂರು, ಜೂನ್ 10: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಫ್ರಾಂಚೈಸಿಯನ್ನು (Royal Challengers Bangalore) ಮಾರಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ (USL- United Spirits Ltd) ತಳ್ಳಿಹಾಕಿದೆ. ಆರ್​​ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು, ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್​​ಸಿಬಿಯ ಮಾಲಕಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.

ಆರ್​​ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ.

ಕೇಂದ್ರ ಸರ್ಕಾರವು ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್​​ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವಂತಹ ಸುದ್ದಿಯನ್ನು ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆ ಪ್ರಕಟಿಸಿತ್ತು.

ಇದನ್ನೂ ಓದಿ: ಆರ್​​ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?

ಆರ್​​​ಸಿಬಿಯ ಮಾಲೀಕನಾಗಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಅಂಗಸಂಸ್ಥೆಯಾಗಿದೆ.

ಬ್ಲೂಮ್​​ಬರ್ಗ್ ವರದಿ ಪ್ರಕಾರ, ಡಿಯಾಜಿಯೋ ಸಂಸ್ಥೆಯು ಆರ್​​ಸಿಬಿಗೆ 2 ಬಿಲಿಯನ್ ಡಾಲರ್ (17,000 ಕೋಟಿ ರೂ) ಮೊತ್ತದ ವ್ಯಾಲ್ಯುಯೇಶನ್ ನಿರೀಕ್ಷಿಸುತ್ತಿದೆ ಎನ್ನಲಾಗಿತ್ತು.

ಐಪಿಎಲ್​​ನ ಆರಂಭದಲ್ಲಿ ಇದ್ದ ಎಂಟು ತಂಡಗಳಲ್ಲಿ ಆರ್​ಸಿಬಿಯೂ ಒಂದು. ಮೊದಲಿಗೆ ವಿಜಯ್ ಮಲ್ಯ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತು. ಆ ಬಳಿಕ ಆರ್​​ಸಿಬಿ ಮಾಲಕತ್ವವು ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜ್ಸ್ ತಂಡ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದಿದೆ.

ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?

ಆದರೆ, ನಂತರ ನಡೆದ ಸಂಭ್ರಮಾಚರಣೆ ವೇಳೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಿ ನೂಕುನುಗ್ಗಲಾಗಿ 11 ಮಂದಿ ಕಾಲ್ತುಳಿತದಿಂದ ಬಲಿಯಾದ ದುರ್ಘಟನೆಯೂ ಸಂಭವಿಸಿ, ಆರ್​​ಸಿಬಿ ಗೆಲುವಿನಲ್ಲಿ ಕಪ್ಪುಚುಕ್ಕೆ ಎನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us