ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ

|

Updated on: Oct 14, 2024 | 2:24 PM

No toll for cars near Mumbai: ವಾಣಿಜ್ಯ ನಗರಿ ಮುಂಬೈಗೆ ಸಂಪರ್ಕಿಸುವ ರಸ್ತೆಗಳಲ್ಲಿ ಕಾರು ಇತ್ಯಾದಿ ಸಣ್ಣ ವಾಹನಗಳು ಟೋಲ್ ಕಟ್ಟುವ ಅಗತ್ಯ ಇಲ್ಲ. ಈ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ, ಮುಲುಂದ್​ನಲ್ಲಿರುವ ಟೋಲ್​ಗಳಲ್ಲಿ ಈ ವಿನಾಯಿತಿ ನೀಡಲಾಗಿದೆ. ಈ ಟೋಲ್ ಮೂಲಕ 3.5 ಲಕ್ಷ ವಾಹನಗಳು ಸಂಚರಿಸುತ್ತವೆ. ಸುಮಾರು 2.8 ಲಕ್ಷ ವಾಹನ ಸವಾರರಿಗೆ ಅನುಕೂಲವಾಗುತ್ತದೆ.

ಮುಂಬೈನಲ್ಲಿ ಟೋಲ್ ಇಲ್ಲ; ಮಹಾರಾಷ್ಟ್ರ ಸರ್ಕಾರದಿಂದ ಘೋಷಣೆ; ಲಕ್ಷಾಂತರ ವಾಹನ ಸವಾರರಿಗೆ ಅನುಕೂಲ
ಟೋಲ್ ಬೂತ್
Follow us on

ಮುಂಬೈ, ಅಕ್ಟೋಬರ್ 14: ಮಹಾರಾಷ್ಟ್ರದ ರಾಜಧಾನಿಯಾದ ವಾಣಿಜ್ಯ ನಗರಿ ಮುಂಬೈಗೆ ಹೋಗುವ ಕಾರುಗಳು ಇನ್ಮುಂದೆ ಟೋಲ್ ಕಟ್ಟಬೇಕಿಲ್ಲ. ಎಲ್ಲಾ ಹಗುರ ಮೋಟಾರು ವಾಹನಗಳಿಗೆ ಟೋಲ್​ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದರ ಹೊಸ್ತಿಲಲ್ಲೇ ಸರ್ಕಾರ ತೆಗೆದುಕೊಂಡಿರುವ ಈ ಟೋಲ್ ವಿನಾಯಿತಿ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ.

ಮುಂಬೈ ನಗರವನ್ನು ಪ್ರವೇಶಿಸಲು ಇರುವ ಆರು ರಸ್ತೆಗಳಲ್ಲಿ ಟೋಲ್ ಬೂತ್​ಗಳಿವೆ. ದಹಿಸಾರ್, ಆನಂದ್ ನಗರ್, ವೈಶಾಲಿ, ಐರೋಲಿ ಮತ್ತು ಮುಲುಂದ್​ನಲ್ಲಿರುವ ಟೋಲ್​ಗಳಲ್ಲಿ ನಾಳೆಯಿಂದ ಲೈಟ್ ಮೋಟಾರು ವಾಹನಗಳು ಟೋಲ್ ಕಟ್ಟುವ ಅಗತ್ಯ ಇರುವುದಿಲ್ಲ. ಮುಕ್ತವಾಗಿ ಸಂಚರಿಸಬಹುದಾಗಿದೆ.

ಇದನ್ನೂ ಓದಿ: ಭಾರತದಿಂದ ಹೊಸ ಮೈಲಿಗಲ್ಲು; 200 ಗಿಗಾವ್ಯಾಟ್ ಗಡಿದಾಟಿದ ಮರುಬಳಕೆ ಇಂಧನ ಸಾಮರ್ಥ್ಯ

2002ರಿಂದಲೂ ಈ ಸ್ಥಳಗಳಲ್ಲಿರುವ ಟೋಲ್​ಗಳಲ್ಲಿ 45 ರೂನಿಂದ 75 ರೂವರೆಗೆ ಟೋಲ್ ವಸೂಲಿ ಮಾಡಲಾಗುತ್ತಿದೆ. 2026ರವರೆಗೂ ಈ ಟೋಲ್ ಜಾರಿಯಲ್ಲಿರುತ್ತದೆ. ಈಗ ಭಾರೀ ತೂಕದ ವಾಹನಗಳು ಮಾತ್ರವೇ ಟೋಲ್ ಕಟ್ಟಬೇಕಾಗುತ್ತದೆ. ಮುಂಬೈಗೆ ಸಾಗುವ ಈ ರಸ್ತೆಗಳಲ್ಲಿ ಒಟ್ಟು 3.5 ಲಕ್ಷ ವಾಹನಗಳು ಟೋಲ್ ಬಳಸುತ್ತವೆ. ಇವುಗಳಲ್ಲಿ 2.80 ಲಕ್ಷ ವಾಹನಗಳು ಎಲ್​ಎಂವಿಗಳಾಗಿವೆ.

ತಾಂತ್ರಿಕವಾಗಿ 3,500 ಕಿಲೋಗಿಂತ ಕಡಿಮೆ ತೂಕ ಇರುವ ವಾಹನಗಳನ್ನು ಹಗುರ ಮೋಟಾರು ವಾಹನಗಳೆಂದು ಪರಿಗಣಿಸಲಾಗುತ್ತದೆ. ಕಾರುಗಳಿಂದ ಹಿಡಿದು ಸಣ್ಣ ಟ್ರಕ್​ಗಳವರೆಗೆ ಎಲ್ಲಾ ರೀತಿಯ ವಾಹನಗಳು ಎಲ್​ಎಂವಿಗಳಾಗಿವೆ.

ಈ ಟೋಲ್ ಬೂತ್​ಗಳಲ್ಲಿ ವಾಹನಗಳು ಟೋಲ್ ಪಾವತಿಸಲು ಸರದಿಯಲ್ಲಿ ನಿಲ್ಲುತ್ತವೆ. ಕೆಲ ನಿಮಿಷಗಳ ವ್ಯಯವಾಗುತ್ತದೆ. ಈಗ ಟೋಲ್ ಅನ್ನೇ ರದ್ದು ಮಾಡಲಾಗಿರುವುದರಿಂದ ವಾಹನಗಳು ಅಡೆತಡೆಯಿಲ್ಲದೆ ಸಂಚರಿಸಬಹುದು.

ಇದನ್ನೂ ಓದಿ: ಗ್ರಾಮೀಣ ಕುಟುಂಬಗಳ ಆದಾಯ ಮತ್ತು ಉಳಿತಾಯ ಐದು ವರ್ಷದಲ್ಲಿ ಎಷ್ಟು ಬದಲಾಗಿದೆ? ಇಲ್ಲಿದೆ ನಬಾರ್ಡ್ ಸಮೀಕ್ಷೆ ವಿವರ

ಆದರೆ, ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರವನ್ನು ಎಲೆಕ್ಷನ್ ಗಿಮಿಕ್ ಎಂದು ವಿಪಕ್ಷಗಳು ಟೀಕಿಸಿವೆ. ಈ ಕ್ರಮವನ್ನು ವರ್ಷಗಳ ಹಿಂದೆಯೇ ತೆಗೆದುಕೊಳ್ಳಬಹುದಿತ್ತು. ಚುನಾವಣೆ ಹೊಸ್ತಿಲಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು? ಹಾಗೆಯೇ, ದೊಡ್ಡ ವಾಹನಗಳಿಗೆ ಟೋಲ್ ವಿನಾಯಿತಿ ಯಾಕೆ ಕೊಟ್ಟಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಹರಿಹಾಯ್ದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ