ವಿಶ್ವದಾಖಲೆಯ ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ಅರ್ಹರು, ಯಾರು ಅರ್ಹರಲ್ಲ, ಇಲ್ಲಿದೆ ಡೀಟೇಲ್ಸ್

PM Kisan scheme eligibilities: ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ವರ್ಷಕ್ಕೆ 6,000 ರೂ ನೀಡುತ್ತದೆ. ನಿನ್ನೆ (ಅ. 5) ಪ್ರಧಾನಿ ನರೇಂದರ ಮೋದಿ 18ನೇ ಕಂತಿನ ಹಣ ಬಿಡುಗಡೆ ಮಾಡಿದರು. ಈ ಯೋಜನೆಯಲ್ಲಿ ಕೃಷಿ ಜಮೀನು ಹೊಂದಿರುವ ರೈತರು ಫಲಾನುಭವಿಗಳಾಗಬಹುದು. ರೈತರಾದರೂ ಯೋಜನೆಗೆ ಅರ್ಹರಾಗಲು ಇನ್ನೂ ಕೆಲ ಮಾನದಂಡಗಳಿವೆ. ಅವುಗಳ ವಿವರ ಇಲ್ಲಿದೆ...

ವಿಶ್ವದಾಖಲೆಯ ಪಿಎಂ ಕಿಸಾನ್ ಸ್ಕೀಮ್​ಗೆ ಯಾರು ಅರ್ಹರು, ಯಾರು ಅರ್ಹರಲ್ಲ, ಇಲ್ಲಿದೆ ಡೀಟೇಲ್ಸ್
ರೈತ

Updated on: Oct 06, 2024 | 12:02 PM

ನವದೆಹಲಿ, ಅಕ್ಟೋಬರ್ 6: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಸ್ಕೀಮ್ (PM Kisan Scheme) ​ನಲ್ಲಿ ನಿನ್ನೆ ಶನಿವಾರ 18ನೇ ಕಂತಿನ ಹಣ ಬಿಡುಗಡೆ ಆಗಿದೆ. 9,40,00,0000ಕ್ಕೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಿದೆ. ಪ್ರತೀ ರೈತರ ಖಾತೆಗಳಿಗೆ 2,000 ರೂ ಹಣ ಸಿಗುತ್ತಿದೆ. 2019ರ ಫೆಬ್ರುವರಿಯಲ್ಲಿ ಅರಂಭಗೊಂಡ ಈ ಯೋಜನೆಯಲ್ಲಿ ಇಲ್ಲಿಯವರೆಗೆ ಬಿಡುಗಡೆಯಾದ 18 ಕಂತುಗಳಲ್ಲಿ ಸರ್ಕಾರಕ್ಕೆ ಆದ ವೆಚ್ಚ ಬರೋಬ್ಬರಿ 3.45 ಲಕ್ಷ ಕೋಟಿ ರೂ. ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ (ಡಿಬಿಟಿ) ಆಗುತ್ತದೆ. ಈ ರೀತಿ ಅತಿಹೆಚ್ಚು ಮಂದಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗುವ ಸ್ಕೀಮ್ ಎನ್ನುವ ವಿಶ್ವದಾಖಲೆ ಈ ಸ್ಕೀಮ್​ನದ್ದು.

ಏನಿದು ಪಿಎಂ ಕಿಸಾನ್ ಯೋಜನೆ?

ರೈತರ ಬೇಸಾಯಕ್ಕೆ ನೆರವಾಗಲೆಂದು ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿದೆ. ವರ್ಷಕ್ಕೆ ಮೂರು ಬಾರಿ, ಅಂದರೆ ಪ್ರತೀ ನಾಲ್ಕು ತಿಂಗಳಿಗೆ ಸರ್ಕಾರವು ರೈತರಿಗೆ ಸಹಾಯಧನ ಒದಗಿಸುತ್ತದೆ. ಜಮೀನು ಮಾಲಕತ್ವದ ಹೊಂದಿರುವ ರೈತರು ಈ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ ಹೊಸ ದಾಖಲೆ; 700 ಬಿಲಿಯನ್ ಡಾಲರ್ ಮುಟ್ಟಿದ ನಾಲ್ಕನೇ ರಾಷ್ಟ್ರ

ಪಿಎಂ ಕಿಸಾನ್ ಸ್ಕೀಮ್​ನಲ್ಲಿ ರೈತರ ಅರ್ಹತಾ ಮಾನದಂಡಗಳಿವು

ಈ ಯೋಜನೆ ಪಡೆಯಬೇಕಾದರೆ ಕೃಷಿ ಭೂಮಿಯ ಮಾಲಕತ್ವ ಹೊಂದಿರಬೇಕು. ಇದು ಮೂಲಭೂತ ಅಂಶ. ಯಾರು ಅರ್ಹರಲ್ಲ ಎನ್ನುವುದಕ್ಕೆ ಹಲವು ನಿಬಂಧನೆಗಳಿವೆ. ಅವುಗಳ ಪಟ್ಟಿ ಕೆಳಗಿದೆ:

  • ಸಾಂಸ್ಥಿಕ ಭೂಮಾಲೀಕರು (Institutional land holders) ಆಗಿರುವಂತಿಲ್ಲ
  • ಕುಟುಂಬದಲ್ಲಿ ಹಾಲಿ ಅಥವಾ ಮಾಜಿ ಸಚಿವರು, ಲೋಕಸಭಾ ಸಂಸದರು, ರಾಜ್ಯಸಭಾ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾಪೌರರು (ಹಾಲಿ ಮೇಯರ್), ಜಿಲ್ಲಾ ಪಂಚಾಯತ್​ಗಳ ಮಾಜಿ ಮತ್ತು ಹಾಲಿ ಅಧ್ಯಕ್ಷರು ಇರುವಂತಿಲ್ಲ.
  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು, ಸಂಸ್ಥೆಗಳ ಹಾಲಿ ಮತ್ತು ನಿವೃತ್ತ ಉದ್ಯೋಗಿಗಳು ಕುಟುಂಬದಲ್ಲಿ ಇರಬಾರದು.
  • ಸ್ಥಳೀಯ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳೂ ಕುಟುಂಬದಲ್ಲಿ ಇರುವಂತಿಲ್ಲ. ಆದರೆ, ನಾಲ್ಕನೇ ದರ್ಜೆ ಅಥವಾ ಡಿ ಗ್ರೂಪ್ ಉದ್ಯೋಗಿಗಳಿದ್ದರೆ ಸಮಸ್ಯೆ ಇಲ್ಲ.
  • ತಿಂಗಳಿಗೆ 10,000 ರೂಗೂ ಹೆಚ್ಚು ಮೊತ್ತದ ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಕುಟುಂಬದಲ್ಲಿ ಇರುವಂತಿಲ್ಲ.
  • ಹಿಂದಿನ ಅಸೆಸ್ಮೆಂಟ್ ವರ್ಷದಲ್ಲಿ (ಮೌಲ್ಯಮಾಪನ ವರ್ಷ) ಆದಾಯ ತೆರಿಗೆ ಪಾವತಿಸಿದ ವ್ಯಕ್ತಿ ಕುಟುಂಬ ಸದಸ್ಯರಾಗಿರುವಂತಿಲ್ಲ.
  • ವೈದ್ಯ, ಎಂಜಿನಿಯರ್, ವಕೀಲ, ಸಿಎ, ಆರ್ಕಿಟೆಕ್ಟ್ ಇತ್ಯಾದಿ ವೃತ್ತಿಪರರು ಕುಟುಂಬದಲ್ಲಿ ಇರುವಂತಿಲ್ಲ.

ಇದನ್ನೂ ಓದಿ: ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us