WAVES Summit: ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ; ಆರೆಂಜ್ ಆರ್ಥಿಕತೆಗೆ ಪ್ರಧಾನಿ ಒತ್ತು
PM Narendra Modi inaugurates WAVES Summit 2025: ದೇಶದ ಆರ್ಥಿಕತೆಗೆ ಕ್ರಿಯೇಟರ್ ಎಕನಾಮಿಯ ಕೊಡುಗೆಯೂ ಸೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬೈನಲ್ಲಿ ಮೊದಲ ವೇವ್ಸ್ ಸಮಿಟ್ ಅನ್ನು ಪ್ರಧಾನಿಗಳು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದಲ್ಲಿ ಸೃಷ್ಟಿಸಿ, ವಿಶ್ವಕ್ಕೆ ಸೃಷ್ಟಿಸಿ ಎಂದು ವಿಶ್ವದ ಕಂಟೆಂಟ್ ಕ್ರಿಯೇಟರ್ಸ್ಗೆ ಪ್ರಧಾನಿ ಕರೆ ನೀಡಿದ್ದಾರೆ.

ಮುಂಬೈ, ಮೇ 1: ದೇಶದ ವಾಣಿಜ್ಯ ನಗರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ವಿಶ್ವ ಆಡಿಯೋ ವಿಶುವಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆಯನ್ನು (WAVES Summit 2025) ಉದ್ಘಾಟಿಸಿದರು. ತಮ್ಮ ಹಿಂದಿನ ಕೆಲ ಭಾಷಣಗಳಲ್ಲಿ ಪ್ರಧಾನಿಗಳು ಕ್ರಿಯೇಟರ್ಸ್ ಎಕನಾಮಿ (Creators economy) ಅಥವಾ ಆರೆಂಜ್ ಎಕನಾಮಿ ಸೃಷ್ಟಿಸುವ ಬಗ್ಗೆ ಮಾತನಾಡಿದ್ದರು. ಆ ನಿಟ್ಟಿನಲ್ಲಿ ವೇವ್ಸ್ ಸಮಿಟ್ ಆಯೋಜನೆಯಾಗಿದೆ. ಈ ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಕ್ರಿಯೇಟರ್ ಎಕನಾಮಿ ಅಥವಾ ಸೃಜಕ ಆರ್ಥಿಕತೆಯ (creator economy) ಕೊಡುಗೆಯೂ ಇರಲಿದೆ ಎಂದಿದ್ದಾರೆ.
‘ಸೃಜಕರಿಗೆ ಕೊಂಡಿ, ದೇಶಗಳಿಗೆ ಕೊಂಡಿ’ (ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರೀಸ್) ಟ್ಯಾಗ್ಲೈನ್ ಇರುವ 2025ರ ವೇವ್ಸ್ ಸಮಿಟ್ನಲ್ಲಿ 90ಕ್ಕೂ ಹೆಚ್ಚು ದೇಶಗಳಿಂದ 10,000ಕ್ಕೂ ಅಧಿಕ ನಿಯೋಗಗಳು, 1,000ಕ್ಕೂ ಅಧಿಕ ಸೃಜಕರು, 300ಕ್ಕೂ ಹೆಚ್ಚು ಕಂಪನಿಗಳು, 350ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಪಾಲ್ಗೊಳ್ಳುತ್ತಿವೆ. ಈ ವೇವ್ಸ್ ಸಮಿಟ್ ಇದೇ ಪ್ರಪ್ರಥಮ ಬಾರಿಗೆ ಆಯೋಜನೆಯಾಗುತ್ತಿದೆ.
ಇದನ್ನೂ ಓದಿ: ಉಗ್ರರ ಹುಟ್ಟಡಗಿಸಲು ಸಶಸ್ತ್ರ ಪಡೆಗಳಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ
WAVES ಎಂಬುದು ಸುಮ್ಮನೆ ಅಲ್ಲ, ನಿಜವಾಗಿಯೂ ಅದು ಅಲೆ ಎಂದ ಮೋದಿ
ವೇವ್ಸ್ ಸಮಿಟ್ನ ಮಹತ್ವವನ್ನು ಪ್ರಧಾನಿ ಮೋದಿ ಈ ವೇಳೆ ಒತ್ತಿ ಹೇಳಿದರು. ವೇವ್ಸ್ ಎಂಬುದು ವರ್ಲ್ಡ್ ಆಡಿಯೋ ವಿಶುವಲ್ ಅಂಡ್ ಎಂಟರ್ಟೈನ್ಮೆಂಟ್ ಪದಗಳಿಗೆ ಇರುವ ಕಿರುಪದ. ಆದರೆ, ಪ್ರಧಾನಿ ಮೋದಿ ಅವರು ಈ ವೇವ್ಸ್ ಅನ್ನು ನಿಜಾರ್ಥಕ್ಕೆ ಹೋಲಿಸಿದರು. ವೇವ್ಸ್ ಎಂದರೆ ನಿಜವಾಗಿಯೂ ಇದೊಂದು ಅಲೆ ಎಂದು ಬಣ್ಣಿಸಿದರು.
‘ವೇವ್ಸ್ ಹೊಸ ಎತ್ತರಕ್ಕೆ ಹೋಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಮುಂಬರುವ ದಿನಗಳಲ್ಲಿ ಹಲವಾರು ಸುಂದರ ಅಲೆಗಳಿಗೆ ವೇವ್ಸ್ ಕಾರಣವಾಗಬಹುದು. ಭವಿಷ್ಯದಲ್ಲಿ ವೇವ್ಸ್ ಪ್ರಶಸ್ತಿಯನ್ನೂ ಆರಂಭಿಸಲಾಗುವುದು. ಕಲೆ ಮತ್ತು ಸೃಜನಶೀಲತೆ ಕ್ಷೇತ್ರದಲ್ಲಿ ವೇವ್ಸ್ ಅತಿ ಪ್ರತಿಷ್ಠಿತ ಪ್ರಶಸ್ತಿಯಾಗಬಹುದು’ ಎಂದು ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ: ಮನ್ ಕಿ ಬಾತ್ನಲ್ಲಿ ಬಾಗಲಕೋಟೆ ವ್ಯಕ್ತಿಯನ್ನ ನೆನೆದ ಮೋದಿ: ಅಷ್ಟಕ್ಕೂ ಶ್ರೀಶೈಲ್ ಮಾಡಿದ ಸಾಧನೆ ಏನು?
ಭಾರತದಲ್ಲಿ ಸೃಜಿಸಿ, ವಿಶ್ವಕ್ಕೆ ಸೃಜಿಸಿ: ಮೋದಿ ಕರೆ
‘ಹೊಸ ರೀತಿಯಲ್ಲಿ ಕಥೆ ಸೃಷ್ಟಿಗೆ ವಿಶ್ವವು ಎದುರುನೋಡುತ್ತಿದೆ. ಭಾರತದಲ್ಲಿ ಸೃಜಿಸಲು, ಮತ್ತು ವಿಶ್ವಕ್ಕೆ ಸೃಜಿಸಲು ಇದು ಸರಿಯಾದ ಕಾಲವಾಗಿದೆ. ಭಾರತದಲ್ಲಿ ನೂರು ಕೋಟಿಗೂ ಅಧಿಕ ಜನಸಂಖ್ಯೆಯ ಇದೆ. ಹಾಗೆಯೇ, ನೂರು ಕೋಟಿಗೂ ಅಧಿಕ ಕಥೆಗಳಿರುವ ನಾಡು ಆಗಿದೆ’ ಎಂದು ವೇವ್ಸ್ ಸಮಿಟ್ ಉದ್ಘಾಟನಾ ಭಾಷಣದಲ್ಲಿ ಮೋದಿ ತಿಳಿಸಿದರು.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜನೆಯಾಗಿರುವ ವೇವ್ಸ್ ಶೃಂಗಸಭೆ ನಾಲ್ಕು ದಿನ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿವೆ.
ಮನರಂಜನಾ ಕ್ಷೇತ್ರದ ದಿಗ್ಗರು ಈ ಸಮಿಟ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ