ಭಾರತದ ಕಾನೂನು ಅನುಸರಿಸಲು ಆಗಲ್ಲವೆಂದರೆ ಇಲ್ಲಿಂದ ನಿರ್ಗಮಿಸಿ: ವಾಟ್ಸಾಪ್ ವಿರುದ್ಧ ಸುಪ್ರೀಂ ಎಚ್ಚರಿಕೆ
Supreme Court asks WhatsApp and Meta to exit India if they can't obey Indian laws: ಬಳಕೆದಾರರ ದತ್ತಾಂಶವನ್ನು ಕಮರ್ಷಿಯಲ್ ಆಗಿ ಬಳಸುತ್ತಿರುವ ಆರೋಪ ಎದುರಿಸುತ್ತಿರುವ ವಾಟ್ಸಾಪ್ ಮೇಲೆ ಸುಪ್ರೀಂಕೋರ್ಟ್ ಹರಿಹಾಯ್ದಿದೆ. ಭಾರತೀಯರ ಪ್ರೈವೆಸಿ ಜೊತೆ ಚೆಲ್ಲಾಟ ಬೇಡ. ಸ್ವಲ್ಪವೂ ಡಾಟಾ ಪಡೆಯಲು ನಿಮಗೆ ಅನುಮತಿಸಲ್ಲ ಎಂದು ಎಚ್ಚರಿಕೆ ನೀಡಿದೆ. ಭಾರತೀಯ ಕಾನೂನುಗಳಿಗೆ ಬದ್ಧವಿರಲು ಆಗಲ್ಲ ಎಂದರೆ ಇಲ್ಲಿಂದ ನಿರ್ಗಮಿಸಿ ಎಂದು ವಾಟ್ಸಾಪ್ಗೆ ಸಿಜೆಐ ಸೂರ್ಯಕಾಂತ್ ವಾರ್ನಿಂಗ್ ನೀಡಿದ್ದಾರೆ.

ನವದೆಹಲಿ, ಫೆಬ್ರುವರಿ 3: ವಾಟ್ಸಾಪ್ನ ಗೌಪ್ಯತಾ ನೀತಿ (WhasApp Privacy Policy) ವಿಚಾರವಾಗಿ ಮೆಟಾ ಸಂಸ್ಥೆಯನ್ನು ಭಾರತದ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ‘ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ. ನಮ್ಮ ಒಂದು ಡಿಜಿಟ್ ಡಾಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆ ಉಳಿಸೋದಕ್ಕೆ ಆಗಲ್ಲ ಅಂದರೆ ಭಾರತದಿಂದ ನಿರ್ಗಮಿಸಿ’ ಎಂದು ವಾಟ್ಸಾಪ್ನ ಮಾತೃ ಸಂಸ್ಥೆಯಾದ ಮೆಟಾಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ (ಫೆ. 3) ತಪರಾಕಿ ಹಾಕಿದೆ.
ಭಾರತೀಯ ಸ್ಪರ್ಧಾ ಆಯೋಗವು ಒಟಿಟಿ ಮೆಸೇಜಿಂಗ್ ಮಾರುಕಟ್ಟೆಯ ಪ್ರಾಬಲ್ಯವನ್ನು ವಾಟ್ಸಾಪ್ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಕಾರಣಕ್ಕೆ ಭಾರತೀಯ ಸ್ಪರ್ಧಾ ಆಯೋಗವು ವಾಟ್ಸಾಪ್ ಮತ್ತು ಮೆಟಾಗೆ 213 ಕೋಟಿ ರೂ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ ಈ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಮೆಟಾ ಸಂಸ್ಥೆಗಳು ಸುಪ್ರೀಂ ಮೆಟ್ಟಿಲೇರಿದ್ದವು. ಇದರ ವಿಚಾರಣೆಯನ್ನು ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಕೈಗೆತ್ತಿಕೊಂಡಿದೆ. ಈ ವೇಳೆ ವಾಟ್ಸಾಪ್ ನೀತಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ವಾಟ್ಸಾಪ್ ತನ್ನ ಗೌಪ್ಯತಾ ನೀತಿಯನ್ನು ಬಳಸಿಕೊಂಡು ಬಳಕೆದಾರರ ದತ್ತಾಂಶವನ್ನು ವಾಣಿಜ್ಯಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಪ್ರಮುಖ ಆರೋಪ. ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ, ಮೆಟಾಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…
‘ನಿಮಗೆ ನಮ್ಮ ಸಂವಿಧಾನವನ್ನು ಅನುಸರಿಸಲು ಆಗುವುದಿಲ್ಲವೆಂದರೆ ಭಾರತದಿಂದ ನಿರ್ಗಮಿಸಿ. ಯಾವುದೇ ಭಾರತಯ ಪ್ರಜೆಯ ಗೌಪ್ಯತೆ ರಾಜಿಯಾಗಲು ನಾವು ಅವಕಾಶ ಕೊಡುವುದಿಲ್ಲ’ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದ್ದಾರೆ.
ವಾಟ್ಸಾಪ್ನ ಗೌಪ್ಯತಾ ನೀತಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆಯೇ ಇಲ್ಲ ಎಂಬುದು ನ್ಯಾಯಾಲಯದ ಮತ್ತೊಂದು ಅಸಮಾಧಾನ. ‘ದೇಶದಲ್ಲಿರುವ ಕೋಟ್ಯಂತ ಅನಕ್ಷರಸ್ಥ ಮತ್ತು ಬಡವರಿಗೆ ಈ ಗೌಪ್ಯತಾ ನೀತಿ ಎಷ್ಟು ಅರ್ಥ ಆಗುತ್ತದೆ? ರಸ್ತೆಬದಿ ಅಂಗಡಿ ಇಟ್ಟುಕೊಂಡಿರುವವರೋ, ಬಡ ಮಹಿಳೆಯೋ, ಬಿಹಾರದ ಗ್ರಾಮೀಣ ಭಾಗದಲ್ಲಿರುವ ಜನರೋ, ತಮಿಳುನಾಡಿನಲ್ಲಿ ತಮಿಳಷ್ಟೇ ಮಾತನಾಡುವವ ವ್ಯಕ್ತಿಗಳೋ, ಇವರಲ್ಲೆಷ್ಟು ಜನರಿಗೆ ನಿಮ್ಮ ಗೌಪ್ಯತಾ ನೀತಿ ಅರ್ಥ ಆಗುತ್ತದೆ?’ ಎಂದು ಸಿಜೆಐ ಸೂರ್ಯಕಾಂತ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸಿಗರೇಟ್ ಮೇಲೆ ಹೊಸ ಅಬಕಾರಿ ಸುಂಕ; ಧೂಮಪಾನಿಗಳಿಗೆ ಮತ್ತಷ್ಟು ದುಬಾರಿ ಜೀವನ
‘ನಿಮ್ಮ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ನಮಗೆಯೇ ಕೆಲವೊಮ್ಮೆ ಕಷ್ಟವಾಗುತ್ತದೆ. ಬಿಹಾರದ ಕುಗ್ರಾಮದಲ್ಲಿರುವವರೆಗೆ ಅದು ಹೇಗೆ ಅರ್ಥವಾಗುತ್ತದೆ?’ ಎಂದಿದೆ ಸರ್ವೋಚ್ಚ ನ್ಯಾಯಪೀಠ.
‘ವಾಟ್ಸಾಪ್ನಲ್ಲಿ ಒಬ್ಬ ವೈದ್ಯರು ಮೂರು ಔಷಧಗಳನ್ನು ಕಳುಹಿಸುತ್ತಾರೆ. ಐದೇ ನಿಮಿಷದಲ್ಲಿ ಅದೇ ಔಷಧಗಳಿಗೆ ಸಂಬಂಧಿಸಿದ ಜಾಹೀರಾತುಗಳ ಪ್ರವಾಹವೇ ಬಂದುಬಿಡುತ್ತದೆ’ ಎಂದು ವಾಟ್ಸಾಪ್ನ ದತ್ತಾಂಶ ದುರ್ಬಳಕೆ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Tue, 3 February 26




