ಬೆಂಗಳೂರು ಗಡಿಭಾಗದ ಹೊಸೂರಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ

International Airport at Hosur: ತಮಿಳುನಾಡಿನ ಗಡಿಭಾಗದಲ್ಲಿರುವ ಹೊಸೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಎರಡು ಸಾವಿರ ಎಕರೆ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಿಸುವ ಉದ್ದೇಶ ಇದೆ. ವರ್ಷಕ್ಕೆ ಮೂರು ಕೋಟಿ ಪ್ರಯಾಣಿಕರ ಸೇವೆಯ ಸಾಮರ್ಥ್ಯ ಇದಕ್ಕಿರಲಿದೆ. ವಾಹನ ತಯಾರಕ ಸಂಸ್ಥೆಗಳು ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳನ್ನು ಹೊಂದಿರುವ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಜನರಿಗೆ ಅನುಕೂಲವಾಗಬಹುದು.

ಬೆಂಗಳೂರು ಗಡಿಭಾಗದ ಹೊಸೂರಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ
ಏರ್​ಪೋರ್ಟ್

Updated on: Jun 27, 2024 | 11:43 AM

ಬೆಂಗಳೂರು, ಜೂನ್ 27: ಕರ್ನಾಟಕ ಗಡಿಭಾಗ ಸಮೀಪದಲ್ಲಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ನಿರ್ಧಾರ ಮಾಡಿದೆ. ಚೆನ್ನೈ ಬಳಿಕ ತಮಿಳುನಾಡಿಗೆ ಉತ್ತಮ ಆದಾಯ ತಂದುಕೊಡುವ ಪ್ರದೇಶಗಳಲ್ಲಿ ಹೊಸೂರು ಕೂಡ ಒಂದು. ಬಹಳಷ್ಟು ಕೈಗಾರಿಕೆಗಳು ಇಲ್ಲಿವೆ. ಕೆಲವಾರು ವರ್ಷಗಳಿಂದ ಇಲ್ಲಿನ ಜನರು ಏರ್​ಪೋರ್ಟ್​ಗಾಗಿ ಮನವಿ ಮಾಡುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಥವಾ ಚೆನ್ನೈ ವಿಮಾನ ನಿಲ್ದಾಣದಿಂದ ಹೊಸೂರಿಗೆ ಬರಲು ಬಹಳಷ್ಟು ಸಮಯ ಹಿಡಿಯುವುದರಿಂದ ಹೊಸೂರಿನಲ್ಲೇ ವಿಮಾನ ನಿಲ್ದಾಣ ಬೇಕೆಂಬ ಕೂಗು ಇತ್ತು. ಇದೀಗ ಸರ್ಕಾರ ಈ ಬೇಡಿಕೆಗೆ ಅಸ್ತು ಎಂದಿರುವುದು ಗೊತ್ತಾಗಿದೆ.

ಒಂದು ಏರ್​ಪೋರ್ಟ್​ನಿಂದ ಮತ್ತೊಂದಕ್ಕೆ ಕನಿಷ್ಟ 150 ಕಿಮೀ ಅಂತರ ಇರಬೇಕು… ಆದರೆ…

ಕೇಂದ್ರ ಸರ್ಕಾರ ಮಾಡಿರುವ ನಾಗರಿಕ ವಿಮಾನಯಾನ ನಿಯಮಾವಳಿಯೊಂದರ ಪ್ರಕಾರ ಒಂದು ಏರ್​ಪೋರ್ಟ್​ನಿಂದ ಮತ್ತೊಂದು ಏರ್​ಪೋರ್ಟ್​ಗೆ ಕನಿಷ್ಠ 150 ಕಿಮೀ ಅಂತರ ಇರಬೇಕು ಎಂದಿದೆ. ಈ ಹಿನ್ನೆಲೆಯಲ್ಲಿ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣದ ಪ್ರಯತ್ನಕ್ಕೆ ಅಷ್ಟಾಗಿ ಜೀವ ಮೂಡಿರಲಿಲ್ಲ. ಆದರೆ, ಬೆಂಗಳೂರಿನಿಂದ ಸಮೀಪದಲ್ಲೇ ಇರುವ ಮೈಸೂರು ಮತ್ತು ಹಾಸನ ವಿಮಾನ ನಿಲ್ದಾಣಗಳಿಗೆ ಅನುಮತಿ ಸಿಕ್ಕಿರುವಾಗ ಹೊಸೂರಿಗೂ ಒಂದು ಏರ್​ಪೋರ್ಟ್ ಬೇಕೆಂಬ ಕೂಗು ಇತ್ತೀಚೆಗೆ ಬಲವಾಗಿ ಕೇಳಿಬಂದಿತ್ತು. ಅಲ್ಲದೇ ತುಮಕೂರು ಬಳಿ ಕರ್ನಾಟಕ ಹೊಸ ಏರ್ಪೋರ್ಟ್ ನಿರ್ಮಾಣ ಮಾಡಲು ಪ್ರಸ್ತಾಪಿಸಿದ ಬಳಿಕ ತಮಿಳುನಾಡು ಕೂಡ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಿಸಲು ನಿರ್ಧರಿಸಿರಬಹುದು.

ಇದನ್ನೂ ಓದಿ: ಎಸ್​ಬಿಐ ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗೆ ಭರ್ಜರಿ ಬೇಡಿಕೆ; ಶೇ. 7.36 ಕೂಪನ್ ರೇಟ್​ಗೆ 10,000 ಕೋಟಿ ರೂ ಸ್ವೀಕರಿಸಿದ ಬ್ಯಾಂಕ್

ಆದರೆ, ಮೈಸೂರು ಮತ್ತು ಹಾಸನ ಬೆಂಗಳೂರಿನಿಂದ 150 ಕಿಮೀ ದೂರದಲ್ಲಿವೆ. ಹೊಸೂರು ಬೆಂಗಳೂರಿನ ಗಡಿ ಪಕ್ಕದಲ್ಲೇ ಇರುವುದು. ಇಲ್ಲಿಯ ಏರ್​ಪೋರ್ಟ್​ನಿಂದ ಅದು ಕೇವಲ 70ರಿಂದ 90 ಕಿಮೀ ದೂರದಲ್ಲಿದೆ. ಹೀಗಾಗಿ, ಅಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಕೇಂದ್ರದಿಂದ ಅನುಮತಿ ಸಿಕ್ಕಿದೆಯಾ ಎನ್ನುವ ಅನುಮಾನ ಇದೆ. ಈ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ.

ಹೊಸೂರು ಬಹಳ ಹೆಚ್ಚಿನ ಕೈಗಾರಿಕೆಗಳಿರುವ ಪ್ರದೇಶ. ಬಹಳಷ್ಟು ಬೆಂಗಳೂರಿಗರು ಅಲ್ಲಿ ಕೆಲಸಕ್ಕೆ ಹೋಗಿ ಬರುವುದುಂಟು. ಎಲೆಕ್ಟ್ರಾನಿಕ್ ಸಿಟಿ, ಎಚ್​ಎಸ್​ಆರ್ ಲೇಔಟ್ ಇತ್ಯಾದಿ ಪ್ರತಿಷ್ಠಿತ ಪ್ರದೇಶಗಳ ನಿವಾಸಿಗಳಿಗೆ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಅನುಕೂಲವಾಗಬಹುದು. ಬೆಂಗಳೂರು ಮತ್ತು ಹೊಸೂರು ಅವಳಿ ನಗರಗಳಾಗಿ ಬೆಳೆಯಲು ಅವಕಾಶ ಇದೆ. ಬೆಂಗಳೂರು ಮೆಟ್ರೋವನ್ನು ಹೊಸೂರಿನವರೆಗೂ ವಿಸ್ತರಿಸಬೇಕು ಎಂದು ತಮಿಳುನಾಡು ಸರ್ಕಾರ ಈ ಹಿಂದೆ ಮನವಿ ಮಾಡಿಕೊಂಡಿದ್ದಿದೆ. ಈಗ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಹೊಸೂರಿನವರೆಗೂ ಮೆಟ್ರೋ ಕನೆಕ್ಟಿವಿಟಿ ವಿಸ್ತರಿಸುವ ಎಲ್ಲಾ ಸಾಧ್ಯತೆ ಇದೆ.

ಇದನ್ನೂ ಓದಿ: ಸೊಳ್ಳೆ ಕಾಟ ಬಿಟ್ರೆ… ಬೆಂಗಳೂರನ್ನು ಅಮೆರಿಕದ ಸಿಲಿಕಾನ್ ವ್ಯಾಲಿಗೆ ಹೋಲಿಸಿದ ಯುಎಸ್ ರಿಟರ್ನ್ಡ್ ಉದ್ಯಮಿ

ವರದಿಗಳ ಪ್ರಕಾರ ಹೊಸೂರಿನಲ್ಲಿ 2,000 ಎಕರೆ ಪ್ರದೇಶದಲ್ಲಿ ಏರ್ಪೋರ್ಟ್ ನಿರ್ಮಾಣವಾಗಲಿದೆ. ವರ್ಷಕ್ಕೆ 3 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುವ ಸಾಮರ್ಥ್ಯದ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us