ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

US-Iran Peace Deal: ಅಮೆರಿಕ-ಇರಾನ್ ಶಾಂತಿ ಒಪ್ಪಂದ ಭಾರತಕ್ಕೆ ಕಳವಳಕಾರಿಯಾಗಿದೆ ಎಂದು ಇಸ್ರೇಲ್ ಮಾಜಿ ವಕ್ತಾರ ಐಲಾನ್ ಲೆವಿ ಎಚ್ಚರಿಸಿದ್ದಾರೆ. ಈ ಒಪ್ಪಂದವು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಸ್ಥಾನಮಾನ ಹೆಚ್ಚಿಸಿ, ಭಾರತದ ಭಯೋತ್ಪಾದನೆ ವಿರೋಧಿ ನಿಲುವಿಗೆ ಹಿನ್ನಡೆ ತರುತ್ತದೆ. ಅಲ್ಲದೆ, IMEC ಯೋಜನೆಯ ಅಪಾಯ, ಗಲ್ಫ್‌ನಲ್ಲಿರುವ ಭಾರತೀಯರ ಭದ್ರತೆ ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದಿಂದ ಭಾರತದ ರಾಷ್ಟ್ರೀಯ ಭದ್ರತೆಗೆ ದೀರ್ಘಕಾಲಿಕ ಬೆದರಿಕೆ ಇದೆ ಎಂದೂ ಅವರು ವಿಶ್ಲೇಷಿಸಿದ್ದಾರೆ.

ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ
ಡೊನಾಲ್ಡ್ ಟ್ರಂಪ್
Image Credit source: PTI

Updated on: Jun 15, 2026 | 8:38 PM

ನವದೆಹಲಿ, ಜೂನ್ 15: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಏರ್ಪಟ್ಟಿರುವುದು ಭಾರತಕ್ಕೆ ಖುಷಿ ಸುದ್ದಿಯಲ್ಲ. ಭಾರತ ಕಳವಳಪಡಬೇಕಾದ ಸಂಗತಿ ಎಂದು ಇಸ್ರೇಲ್​ನ ಮಾಜಿ ವಕ್ತಾರರಾದ ಐಲಾನ್ ಲೆವಿ (Eylon Levy) ಎಚ್ಚರಿಸಿದ್ದಾರೆ. ಭಾರತ ಈ ಒಪ್ಪಂದವನ್ನು ಜಾಗರೂಕತೆಯಿಂದ ಸ್ವಾಗತಿಸಿದೆ. ಆದರೆ, ಭಾರತಕ್ಕೆ ಇದು ದುರಂತ ತರುತ್ತದೆ ಎಂದು ಲೆವಿ ವಾದಿಸಿದ್ಧಾರೆ. ಈ ಶಾಂತಿ ಒಪ್ಪಂದವು ಭಾರತಕ್ಕೆ ಹೇಗೆ ಹಿನ್ನಡೆ ತರಬಲ್ಲುದು ಎಂದು ಅವರು ಕೆಲ ನಿದರ್ಶನಗಳನ್ನು ನೀಡಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಸ್ಥಾನಮಾನ ಹೆಚ್ಚಳ

ಈ ಒಪ್ಪಂದದ ಸಂಧಾನ ಮಾತುಕತೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರಮುಖ ಪಾತ್ರ ವಹಿಸಿದ್ದಾರೆ. ಐಲಾನ್ ಲೆವಿ ಅವರ ಪ್ರಕಾರ, “ಈ ಒಪ್ಪಂದವು ಭಾರತದ ಪರಮ ವೈರಿಯಾದ ಪಾಕಿಸ್ತಾನವನ್ನು ಜಾಗತಿಕ ಶಾಂತಿ ಸಂರಕ್ಷಕನ ಸ್ಥಾನಕ್ಕೆ ಏರಿಸಿದೆ”. ಪಾಕಿಸ್ತಾನದ ಭಯೋತ್ಪಾದನಾ ಪರ ನೀತಿಯನ್ನು ಜಗತ್ತಿನೆದುರು ಬಯಲು ಮಾಡಲು ಭಾರತ ನಡೆಸುತ್ತಿದ್ದ ಪ್ರಯತ್ನಗಳಿಗೆ ಇದು ಹಿನ್ನಡೆ ತರಲಿದ್ದು, ಇಸ್ಲಾಮಾಬಾದ್ ಅನ್ನು ಗ್ಲೋಬಲ್ ಸೌತ್​ನ (Global South) ನಾಯಕನನ್ನಾಗಿ ಬಿಂಬಿಸಲು ಸಹಾಯ ಮಾಡುತ್ತದೆ ಎಂಬುದು ಅವರ ವಾದ.

ಇದನ್ನೂ ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಭಾರತದ ವ್ಯಾಪಾರ ಮಾರ್ಗಕ್ಕೆ ಕುತ್ತು

ಭಾರತವು ಪಶ್ಚಿಮ ಏಷ್ಯಾದ ಮೂಲಕ ಯುರೋಪ್ ತಲುಪಲು ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಈ ಒಪ್ಪಂದದಿಂದ ಧಕ್ಕೆಯಾಗಬಹುದು. ನಿರ್ಬಂಧಗಳಿಂದ ಮುಕ್ತಿ ಪಡೆದು ಆರ್ಥಿಕವಾಗಿ ಬಲಗೊಳ್ಳುವ ಇರಾನ್, ಬ್ಯಾಲಿಸ್ಟಿಕ್ ಕ್ಷಿಪಣಿಗಳ ನೆರವಿನಿಂದ ಭಾರತದ ಪಶ್ಚಿಮದ ವ್ಯಾಪಾರ ಹೆಬ್ಬಾಗಿಲನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬಹುದು. ಇದರಿಂದಾಗಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಮುಕ್ತವಾಗಿ ಓಡಾಡುವಂತಾಗಿ, ಹಿಂದೂ ಮಹಾಸಾಗರ ಮತ್ತು ಕೆಂಪು ಸಮುದ್ರದ ಹಡಗು ಮಾರ್ಗಗಳಿಗೆ ಹೊಸ ಭದ್ರತಾ ಆತಂಕ ಎದುರಾಗಲಿದೆ ಎಂದು ಐಲಾನ್ ಲೆವಿ ಎಚ್ಚರಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿರುವ 1 ಕೋಟಿ ಭಾರತೀಯರ ಭದ್ರತೆಗೆ ಅಪಾಯ

ಮಧ್ಯಪ್ರಾಚ್ಯ ಅಥವಾ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 10 ಮಿಲಿಯನ್ (1 ಕೋಟಿ) ಭಾರತೀಯ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಈ ಒಪ್ಪಂದವು ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಭೀತಿಯನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ. ಈ ಪ್ರದೇಶದಲ್ಲಿ ಇರಾನ್‌ನ ಬೆದರಿಕೆಗಳು ಸಂಪೂರ್ಣವಾಗಿ ಶಾಂತವಾಗದ ಹೊರತು, ಅಲ್ಲಿರುವ ಭಾರತೀಯ ಕಾರ್ಮಿಕರ ರಕ್ಷಣೆ ಮತ್ತು ಅವರು ಭಾರತಕ್ಕೆ ಕಳುಹಿಸುವ ಹಣದ (Remittances) ಭದ್ರತೆಗೆ ಆತಂಕ ಮುಂದುವರಿಯಲಿದೆ ಎಂದು ಇಸ್ರೇಲ್​ನ ಮಾಜಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್ ಪರಮಾಣು ಸಮಸ್ಯೆಗೆ ಪರಿಹಾರ ಸಿಗದಿರುವುದು

ಈ ಒಪ್ಪಂದದಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಕ್ಷಿಪಣಿ ಸಾಮರ್ಥ್ಯಗಳನ್ನು ತಡೆಯುವ ಯಾವುದೇ ಕಟ್ಟುನಿಟ್ಟಿನ ನಿಯಮಗಳಿಲ್ಲ. ಅಮೆರಿಕ ತನ್ನ ಸಂಪೂರ್ಣ ಹಿಡಿತವನ್ನು ಬಿಟ್ಟುಕೊಟ್ಟು ಶರಣಾಗಿರುವುದರಿಂದ, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇರಾನ್ ಭವಿಷ್ಯದಲ್ಲಿ ಪರಮಾಣು ಅಸ್ತ್ರಗಳನ್ನು ಹೊಂದಬಹುದು. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ದೀರ್ಘಕಾಲದ ದೊಡ್ಡ ಬೆದರಿಕೆಯಾಗಲಿದೆ ಎಂದೂ ಲೆವಿ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ಭೌಗೋಳಿಕ ರಾಜಕೀಯ ವಿಶ್ಲೇಷಕರಾದ ಇಯಾನ್ ಬ್ರೆಮ್ಮರ್ ಕೂಡ ಇದನ್ನು ಬೆಂಬಲಿಸಿದ್ದು, “ವಿಶ್ವಕ್ಕೆ ಹಾರ್ಮುಜ್ ಜಲಮಾರ್ಗ ಮುಕ್ತವಾಗಬೇಕಿರುವುದು ಅನಿವಾರ್ಯವಾಗಿತ್ತು. ಆದರೆ ಪರಮಾಣು ಮತ್ತು ಕ್ಷಿಪಣಿ ನಿಯಂತ್ರಣದ ಬಗ್ಗೆ ಒಪ್ಪಂದದಲ್ಲಿ ಯಾವುದೇ ಉಲ್ಲೇಖವಿಲ್ಲದಿರುವುದು ಟ್ರಂಪ್ ಆಡಳಿತದ ಬಹುದೊಡ್ಡ ವಿದೇಶಾಂಗ ನೀತಿಯ ವಿಫಲತೆ” ಎಂದು ಕರೆದಿದ್ದಾರೆ.

ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಭಾರತವು ಹೊಂದಿರುವ ‘ತಟಸ್ಥ ನೀತಿ’ಯನ್ನು (Neutrality) ಇನ್ನು ಮುಂದೆ ಕಾಪಾಡಿಕೊಳ್ಳುವುದು ಕಷ್ಟವಾಗಬಹುದು ಮತ್ತು ಭಾರತವು ಇಸ್ರೇಲ್‌ನೊಂದಿಗೆ ಮತ್ತಷ್ಟು ಹತ್ತಿರದ ಕಾರ್ಯತಂತ್ರದ ಸಂಬಂಧವನ್ನು ಹೊಂದುವುದು ಅನಿವಾರ್ಯವಾಗಲಿದೆ ಎಂದು ಲೆವಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us