ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

Zomato CEO Deepinder Goyal as delivery boy: ಕಂಪನಿಯ ಅತ್ಯಂತ ತಳಮಟ್ಟದಲ್ಲಿ ಕೆಲಸ ಮಾಡುವ ಡೆಲಿವರಿ ಪಾರ್ಟ್ನರ್​ಗಳ ಕಷ್ಟಸುಖಗಳನ್ನು ಖುದ್ದಾಗಿ ಅರಿಯಲು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ತಮ್ಮ ಪತ್ನಿ ಜೊತೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ಧಾರೆ. ಈ ವೇಳೆ ದೆಹಲಿ ಸಮೀಪದ ಗುರುಗ್ರಾಮ್​ನ ಏಂಬಿಯನ್ಸ್ ಮಾಲ್​ನಲ್ಲಿ ಆದ ಅನುಭವವೊಂದನ್ನು ಅವರು ಹಂಚಿಕೊಂಡಿದ್ದಾರೆ.

ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ
ದೀಪಿಂದರ್ ಗೋಯಲ್

Updated on: Oct 07, 2024 | 12:58 PM

ನವದೆಹಲಿ, ಅಕ್ಟೋಬರ್ 7: ಹಿಂದೆಲ್ಲಾ ರಾಜ ಮಹಾರಾಜರು ಸಾಮಾನ್ಯ ಪ್ರಜೆಯ ಹಾಗೆ ಮಾರುವೇಷ ಹಾಕಿಕೊಂಡು ತಮ್ಮ ನಾಡಿನ ಸಮಸ್ಯೆಗಳನ್ನು ತಿಳಿಯಲು ಯತ್ನಿಸುತ್ತಿದ್ದರು. ಕಾರ್ಪೊರೇಟ್ ಕಂಪನಿಗಳಲ್ಲೂ ಕೆಲ ಎಕ್ಸಿಕ್ಯೂಟಿವ್​ಗಳು ಇಂಥ ಕೆಲಸ ಮಾಡುವುದು ಇದೆ. ಕೆಫೆ ಕಾಫಿ ಡೇ ಸಂಸ್ಥಾಪಕರಾಗಿದ್ದ ದಿವಂಗತ ಸಿದ್ಧಾರ್ಥ್ ಹೆಗ್ಡೆ ಸಾಮಾನ್ಯರ ಹಾಗೆ ಯಾವುದಾದರೂ ಕಾಫಿ ಡೇ ಯೂನಿಟ್​ಗೆ ಹೋಗಿ ಕಾಫಿ ಕುಡಿದು ಬರುತ್ತಿದ್ದರಂತೆ. ಇಂಥವರ ಪಟ್ಟಿಗೆ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರನ್ನೂ ಸೇರಿಸಬಹುದು. ಜೊಮಾಟೊ ಬಿಸಿನೆಸ್​ನ ಪ್ರಮುಖ ಭಾಗವಾಗಿರುವ ಡೆಲಿವರಿ ಬಾಯ್​ಗಳ ಕಷ್ಟ ಏನೆಂದು ಖುದ್ದಾಗಿ ತಿಳಿಯಲು ದೀಪಿಂದರ್ ಗೋಯಲ್ ತಾವೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾರೆ. ಈ ವೇಳೆ ಆದ ಕೆಲ ಅನುಭವಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಗುರುಗ್ರಾಮ್​ನ ಪ್ರತಿಷ್ಠಿತ ಏಂಬಿಯನ್ಸ್ ಮಾಲ್​ಗೆ ಹೋಗಿದ್ದಾಗಿನ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎರಡನೇ ಪತ್ನಿ ಗ್ರೇಷಿಯಾ ಮುನೋಜ್ ಜೊತೆ ಸೇರಿ ಡೆಲಿವರಿ ಬಾಯ್​ನಂತೆ ಏಂಬಿಯನ್ಸ್ ಮಾಲ್​ಗೆ ಹೋಗಿದ್ದರು. ಅಲ್ಲಿ ಹಲ್ದೀರಾಮ್ ಸ್ಟೋರ್​ನಿಂದ ಆರ್ಡರ್ ಕಲೆಕ್ಟ್ ಮಾಡಲು ಲಿಫ್ಟ್ ಅಥವಾ ಎಲಿವೇಟರ್ ಬಳಸಲು ಹೋಗುತ್ತಾರೆ. ಅಲ್ಲಿದ್ದ ಸೆಕ್ಯೂರಿಟಿಯವರು ತಡೆದು, ಮೆಟ್ಟಿಲುಗಳ ಮೂಲಕ ಹೋಗುವಂತೆ ಸೂಚಿಸುತ್ತಾರೆ.

ಇದನ್ನೂ ಓದಿ: ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್​​; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ

ದೀಪಿಂದರ್ ಗೋಯಲ್ ಸ್ಟೇರ್ ಕೇಸ್ ಬಳಸಿ ಹಲ್ದೀರಾಮ್ಸ್ ಇದ್ದ 3ನೇ ಫ್ಲೋರ್​ಗೆ ಹೋಗುತ್ತಾರೆ. ಡೆಲಿವರಿ ಹುಡುಗರು ಸ್ಟೇರ್​ಕೇಸ್​ಗೆ ಮಾತ್ರ ಸೀಮಿತ ಇರಬೇಕು. ಮಾಲ್​ನೊಳಗೆ ಪ್ರವೇಶ ಇಲ್ಲ ಎನ್ನುವ ವಿಚಾರ ಜೊಮಾಟೊ ಸಿಇಒಗೆ ತಿಳಿಯುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಸ್ಟೇರ್​ಕೇಸ್​ನಲ್ಲಿ ಕೂತು ಇತರ ಡೆಲಿವರಿ ಬಾಯ್​ಗಳೊಂದಿಗೆ ಮಾತನಾಡುತ್ತಿರುವುದನ್ನು ಕಾಣಬಹುದು.

ಮಾಲ್​ಗಳೊಂದಿಗೆ ಮಾತನಾಡಬೇಕು ಎಂದ ಸಿಇಒ

ಎಲ್ಲಾ ಡೆಲಿವರಿ ಪಾರ್ಟ್ನರ್​ಗಳ ಕೆಲಸವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮಾಲ್​ಗಳ ಜೊತೆ ನಿಕಟವಾಗಿ ಕೆಲಸ ಮಾಡುವ ಅಗತ್ಯತೆ ಇರುವುದು ಅರಿವಿಗೆ ಬಂತು. ಡೆಲಿವರಿ ಪಾರ್ಟ್ನರ್ಸ್ ವಿಚಾರದಲ್ಲಿ ಮಾಲ್​ಗಳೂ ಕೂಡ ಹೆಚ್ಚು ಮಾನವೀಯ ಕಾಳಜಿ ತೋರಬೇಕು ಎಂದು ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ‘ಭಾರತದಲ್ಲಿ ಶನಿವಾರ, ಭಾನುವಾರ ರಜೆಯ ಕಾನ್ಸೆಪ್ಟೇ ಇರಲಿಲ್ಲ, ಇದೆಲ್ಲಾ ಪಾಶ್ಚಿಮಾತ್ಯದ ಎರವಲು’: ಟ್ರೋಲ್ ಆದ ಒಲಾ ಸಿಇಒ


ಜೊಮಾಟೊ ಸಿಇಒ ಅವರ ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸಿಇಒವೊಬ್ಬರು ಡೆಲಿವರಿ ಬಾಯ್​ನಂತೆ ಕೆಲಸ ಮಾಡಿರುವುದಕ್ಕೆ ಬಹಳಷ್ಟು ಜನರು ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ಇದು ಬರೀ ಪಿಆರ್ ಸ್ಟಂಟ್ ಮಾತ್ರವೇ. ಡೆಲಿವರಿ ಬಾಯ್​ಗಳ ಬಗ್ಗೆ ಇವರಿಗೇನೂ ಕಾಳಜಿ ಇಲ್ಲ ಎಂದು ಟೀಕಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us