ಬೆಂಗಳೂರು: ರೌಡಿ ನಾಗನ ಗೆಳೆಯನ ಕೊಲೆಯ ಪ್ರತೀಕಾರವಾಗಿ ರೌಡಿ ಮಹೇಶನ ಹತ್ಯೆ! ಹೇಗಿತ್ತು ಗೊತ್ತಾ ಕೊಲೆ ಸ್ಕೆಚ್?

| Updated By: Rakesh Nayak Manchi

Updated on: Aug 08, 2023 | 5:40 PM

ಎರಡು ವರ್ಷಗಳ ಹಿಂದೆ ಬನಶಂಕರಿ ದೇವಾಲಯ ಮುಂದೆ ಮಚ್ಚು ಬೀಸಿ ಕೊಲೆ ಮಾಡಿದ್ದ ರೌಡಿಯೊಬ್ಬನ್ನು ಕಳೆದ ರಾತ್ರಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಹಾಕಿ ಲಾಂಗ್​ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ಬೆಂಗಳೂರು: ರೌಡಿ ನಾಗನ ಗೆಳೆಯನ ಕೊಲೆಯ ಪ್ರತೀಕಾರವಾಗಿ ರೌಡಿ ಮಹೇಶನ ಹತ್ಯೆ! ಹೇಗಿತ್ತು ಗೊತ್ತಾ ಕೊಲೆ ಸ್ಕೆಚ್?
ರೌಡಿ ನಾಗನ ಗೆಳೆಯನ ಕೊಲೆಯ ಪ್ರತೀಕಾರವಾಗಿ ರೌಡಿ ಮಹೇಶನ ಹತ್ಯೆ
Follow us on

ಬೆಂಗಳೂರು, ಆಗಸ್ಟ್ 8: ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ (Bengaluru) ಭೂಗತ ಪಾತಕಿಗಳು ನಡು ರಸ್ತೆಯಲ್ಲಿ ಮಚ್ಚು ಬೀಸಿ ಮೆರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬನಶಂಕರಿ ದೇವಾಲಯ ಮುಂದೆ ಮಚ್ಚು ಬೀಸಿ ಕೊಲೆ ಮಾಡಿದ್ದ ರೌಡಿಯೊಬ್ಬನ್ನು ರಾತ್ರಿ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ರೌಡಿಯೊಬ್ಬ ಕೈಯಲ್ಲಿ ಮಚ್ಚು ಹಿಡಿದು ಕೊಲೆ ಮಾಡಿದ್ದ ಮೇಲೆ ಅವನು ಒಂದು ದಿನ ಮಚ್ಚಿನೇಟಿಗೆ ಕೊಲೆ ಆಗುತ್ತಾನೆ ಅನ್ನೊದು ಭೂಗತ ಲೋಕದ ಅಲಿಖಿತ ನಿಯಮ. ಅದರಂತೆ ಕೊಲೆ ಕೊಲೆಯತ್ನ, ಸುಫಾರಿಯಂತಹ ಹಲವರು ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ ಕಳೆದ ರಾತ್ರಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಕಾರಿನಲ್ಲಿ ಗುತ್ತಿದ್ದಾಗ ಅಡ್ಡಗಟ್ಟಿ ಲಾಂಗ್​​ನಿಂದ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

ರಾತ್ರಿ 9:20ರ ಸಮಯದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ರೌಡಿ ಶೀಟರ್ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್ ಬೇಲ್ ಮೇಲೆ ರಿಲೀಸ್ ಆಗಿ ಮನೆ ಕಡೆ ಹೊರಟಿದ್ದನಂತೆ. ಕೆಂಪು ಬಣ್ಣದ ಇಯಿಟೋಸ್ ಕಾರಿನಲ್ಲಿ ಜೈಲಿನಿಂದ ಮನೆ ಕಡೆ ಹೊರಟಿದ್ದವನು 9:45ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಿದ್ದಾನೆ. ಈ ವೇಳೆ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಜನರು ಮಚ್ಚು ಬೀಸಿದ್ದಾರೆ. ಈ ವೇಳೆ ಮಹೇಶ ಕಾರಿನಿಂದ ಕೆಳಗೆ ಇಳಿದು ವಾಪಸ್ಸು ಹಿಂದಕ್ಕೆ ಓಡಲು ಪ್ರಯತ್ನ ಪಟ್ಟಿದ್ದಾನೆ. ಈ ವೇಳೆ ಸುಮಾರು ನೂರು ಮೀಟರ್ ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಲಾಗಿದೆ.

2021 ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಮದನ್ ಅಲಿಯಾಸ್ ಪಿಟೀಲ್​ನನ್ನು ಇದೇ ಸಿದ್ದಾಪುರ ಮಹೇಶ ಮತ್ತು ತಂಡ ಬನಶಂಕರಿ ದೇವಾಲಯದ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದ. ಹೀಗಾಗಿ ನಾಗನಿಗೆ ಈ ಮಹೇಶನನ್ನು ಮುಗಿಸುವ ಪ್ಲಾನ್ ಇತ್ತಂತೆ. ಈ ವಿಚಾರ ತಿಳಿದ ಮಹೇಶ ಕೂಡ ನಾಗನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದನಂತೆ. ಈ ನಡುವೆ ಜೂನ್​ನಲ್ಲಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಮಹೇಶ ಲವ್ ಮಾಡುತ್ತಿದ್ದ ಯುವತಿಯನ್ನು ಜೂನ್​ನಲ್ಲಿ ಮದುವೆಯಾಗಿದ್ದ.

ನಂತರ ಮತ್ತೆ ತನಗೆ ನಾಗನಿಂದ ಜೀವ ಭಯ ಇದೆ ಎಂದು ತಿಳಿದು ಹಳೆ ಕೇಸ್​​ನಲ್ಲಿ ವಾಪಸ್ಸು ಜೈಲು ಸೇರಿದ್ದ. ನಿನ್ನೆ ಬೇಲ್ ಪಡೆದಿದ್ದ ಮಹೇಶ ರಾತ್ರಿ ಒಂಬತ್ತು ಇಪತ್ತಕ್ಕೆ ಜೈಲಿನಿಂದ ಹೊರ ಬಂದಿದ್ದ. ಕಾರಿನಲ್ಲಿ ಮಹೇಶ ಹಾಗೂ ಹಿಂಬದಿ ಸ್ಕೂಟರ್​ನಲ್ಲಿ ಆತನ ಪತ್ನಿ ಬರುತ್ತಿದ್ದಾಗಲೇ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ಸಂಭಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: 1984ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಜಗದೀಶ್ ಟೈಟ್ಲರ್‌ ವಿರುದ್ಧ ಕೊಲೆ ಆರೋಪ ಹೊರಿಸಿದ ಸಿಬಿಐ

ಪೊಲೀಸರು ಅರೋಪಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಂಧರ್ಭದಲ್ಲಿ ಹಲವು ಮಾಹಿತಿಗಳು ಬಹಿರಂಗ ಆಗಿದೆ. ರೌಡಿ ಶೀಟರ್ ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಆರಂಭದಲ್ಲಿ 11 ಅರೋಪಿಗಳನ್ನು ತಮಿಳುನಾಡಿನ ಹೊಸೂರು ಬಳಿ ವಶಕ್ಕೆ ಪಡೆದಿದ್ದರು. ನಂತರ ಪ್ರಕರಣವೊಂದರಲ್ಲಿ ಸಿಸಿಬಿ ಅಧಿಕಾರಿಗಳಿಗೆ ಬೇಕಿದ್ದ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ಟಾರೆ ಹದಿನಾಲ್ಕು ಜನರನ್ನು ಬಂಧಿಸಿದ್ದಾರೆ.

ಪೊಲೀಸರಿಗೆ ಈ ಮಹೇಶನ ಕೊಲೆಯನ್ನು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ಮಾಡಿದೆ ಅನ್ನೊದು ಬೆಳಕಿಗೆ ಬಂದಿದೆ. ಈ ಕೊಲೆ ನಗರದಲ್ಲಿ ಇತ್ತೀಚೆಗೆ ನಡೆದ ರೌಡಿಗಳ ಗ್ಯಾಂಗ್ ವಾರ್ ಮತ್ತು ರಿವೇಂಜ್​ಗಾಗಿ ನಡೆದಿರುವ ಕೊಲೆ ಅನ್ನೊದು ಬಯಲಾಗಿದೆ. ಪ್ರಮುಖವಾಗಿ ಸಿದ್ದಾಪುರ ಮಹೇಶ ಹಾಗೂ ವಿಲ್ಸನ್ ಗಾರ್ಡನ್ ನಾಗ ಗ್ಯಾಂಗ್ ರೈವಲ್ವರಿ ಇತ್ತು. ಒಂದು ಕಾಲದಲ್ಲಿ ಒಟ್ಟಿಗೆ ಇದ್ದ ನಾಗ, ಮಹೇಶ್, ಶಾಂತಿನಗರ ಲಿಂಗ ಎಲ್ಲರ ನಡುವೆ ಒಂದು ವ್ಯವಹಾರದಲ್ಲಿ ಬಿರುಕು ಬಂದು ದ್ವೇಷಕ್ಕೆ ತಿರುಗಿತ್ತು.

ಈ ಹಿಂದೆ 2020 ರಲ್ಲಿ ಶಾಂತಿನಗರ ಲಿಂಗನನ್ನು ನಾಗನ ಗ್ಯಾಂಗ್ ಹಾಸನದ ಹಿರಿಸೇವೆ ಬಳಿ ಬರ್ಬರವಾಗಿ ಕೊಲೆ ಮಾಡಿತ್ತು. ಈ ಕೊಲೆಗೆ ಪ್ರತೀಕಾರವಾಗಿ ನಾಗನ ಗೆಳೆಯ ಮದನ್​ನನ್ನು ಬನಶಂಕರಿ ದೇವಾಲಯದ ಮುಂದೆ 2021ರಲ್ಲಿ ನಡುರಸ್ತೆಯಲ್ಲಿ ಮಹೇಶ ಮತ್ತು ತಂಡ ಕೊಲೆ ಮಾಡಿತ್ತು.

ಈಗ ಮದನ್ ಕೊಲೆಗೆ ಪ್ರತಿಕಾರವಾಗಿ ಈ ಮಹೇಶನ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಲ್ಸನ್ ಗಾರ್ಡನ್ ನಾಗನ ಕೊಲೆ ಮಾಡಲು ಸುಮಾರು ಮೂವತ್ತು ರೌಡಿಗಳ ಗ್ಯಾಂಗ್ ಮಾಡಿಕೊಂಡು ಹತ್ಯೆಗೆ ಪ್ಲಾನ್ ಮಾಡುತ್ತಿದ್ದರಂತೆ. ಇದರ ಮಾಹಿತಿ ಪಡೆದು ಮಹೇಶನನ್ನೇ ಮುಗಿಸಿದ್ದಾರೆ ಎನ್ನಲಾಗಿದೆ.

ಸದ್ಯ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸಿದ್ದಾಪುರ ಸುನೀಲ್,‌ ಕಣ್ಣನ್ ವೇಲ, ಪ್ರದೀಪ್, ಮನು, ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್ ಪಾಪ, ಗೋಕುಲ್, ಸುರೇಶ, ಕಾರ್ತಿಕ್, ವಾಲೆ ಪ್ರವೀಣ, ಕಾರ್ತಿಕ್ ಬಂಧಿಸಿದ್ದಾರೆ.

ಕೊಲೆ ಪ್ರಕರಣದ ಸಂಚು

ಮಹೇಶ ಜೈಲಿನಿಂದ ಹೊರಬಂದು ಮಾಡಿದ್ದ ಪ್ಲಾನ್ ಕರೆಕ್ಟ್ ಆಗಿ ಕಾರ್ಯ ರೂಪಕ್ಕೆ ಬಂದಿದ್ದರೆ ವಿಲ್ಸನ್ ಗಾರ್ಡನ್ ನಾಗ ಕೊಲೆಯಾಗುತ್ತಿದ್ದ. ಅದೇ ಕಾರಣಕ್ಕೆ ನಾಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದ. ಜೈಲಿನ ಒಳಗೆ ವಿಲ್ಸನ್ ಗಾರ್ಡನ್ ನಾಗನ ಹುಡುಗರು ಸಿದ್ದಾಪುರ ಮಹೇಶನಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಮಾಹಿತಿ ಪ್ರಕಾರ ಜೈಲಿನಲ್ಲಿ ಇರುವ ಪೊಲೀಸರಿಗೆ ಹಣ ನೀಡಿ ಮಹೇಶನನ್ನು ಜೈಲಿನಲ್ಲಿ ಕ್ವಾರಂಟೈನ್ ಸೆಲ್​ಗೆ ಹಾಕಿಸಿದ್ದಾನೆ.

ಹೀಗಾಗಿ ಜೈಲಿನಲ್ಲಿ ಇರಲು ಸಾಧ್ಯವಾಗದ ಮಹೇಶ ಬೇಲ್ ಪಡೆಯಲು ಮುಂದಾಗಿದ್ದ. ಹೀಗಾಗಿ ಮಹೇಶನ ಬಿಡುಗಡೆಯ ಮಾಹಿತಿ ಪಡೆಯಲು ಮುಂದಾಗಿದ್ದ. ಜೈಲಿನಿಂದ ಯಾವತ್ತು ಹೊರಗೆ ಬರುತ್ತಾನೆ? ಯಾವಾಗ ಬೇಲ್ ಸಿಗತ್ತದೆ? ಎಂಬುದನ್ನು ತಿಳಿದುಕೊಳ್ಳಲು ಕೊಲೆ ನಡೆಯುವ ಕೆಲವು ದಿನಗಳ ಹಿಂದೆಯೇ ನ್ಯಾಯಾಲಯದಿಂದ ವ್ಯಕ್ತಿಯೊಬ್ಬರ ಮೂಲಕ ಮಾಹಿತಿ ಪಡೆದಿದ್ದಾನೆ. ಅದರಂತೆ ಆಗಸ್ಟ್ 4 ರ ಸಂಜೆ ಮಹೇಶನಿಗೆ ಜಾಮೀನು ಸಿಕ್ಕಿದೆ ಅನ್ನೊ ಮಾಹಿತಿ ಸಿಕ್ಕಿದೆ.

ಕಳೆದ ಐದು ದಿನಗಳಿಂದ ಜೈಲಿನ ಸುತ್ತಮುತ್ತಲೂ ಸಹ ಹಂತರಕರನ್ನು ನಿಲ್ಲಿಸಿದ್ದರು. ಮಹೇಶನ ಹೆಂಡತಿ ಹಾಗೂ ಹುಡುಗರು ಸಂಜೆ ಆರೂವರೆ ವೇಳೆಗೆ ಜೈಲಿನ ಬಳಿಗೆ ಬಂದಿದ್ದಾರೆ. ಆಗ ಅಲ್ಲಿಯೇ ಇದ್ದ ಹಂತಕರಿಗೆ ಮಹೇಶ ಹೊರ ಬರುತ್ತಾನೆ ಅನ್ನೊದು ಪಕ್ಕಾ ಆಗಿದೆ. ಹೀಗಾಗಿ ಜೈಲಿನಿಂದ ಹೊರ ಬರಲು ಒಂದೇ ದಾರಿ ಇದೆ ಅಲ್ಲಿಂದ ಮುಂದೆ ಬೆಳ್ಳಂದೂರು ಕಡೆಗೆ ಒಂದು ಹೊಸೂರು ರಸ್ತೆಗೆ ಒಂದು ರೋಡ್ ಡಿವೈಡ್ ಆಗತ್ತದೆ. ಹೀಗಾಗಿ ಅದೇ ಜಂಕ್ಷನ್​ನಲ್ಲಿ ಕಾರು ಬರುತ್ತಿದ್ದಂತೆ ಬೈಕ್ ಮತ್ತು ಕಾರಿನಲ್ಲಿ ಫಾಲೋ ಮಾಡಿದ್ದಾರೆ. ಮಹೇಶನ ಕಾರು ಹೊಸೂರ್ ರೋಡ್ ಸಿಗ್ನಲ್ ಬಳಿ ಬರುತ್ತಿದ್ದಂತೆ ಏಕಾಏಕಿ ಒಂದು ಇನ್ನೋವಾ ಕಾರು ಅಡ್ಡಬಂದಿದೆ. ನಂತರ ಬೈಕ್​ನಲ್ಲಿ ಇದ್ದ ಹುಡುಗರು ಮಚ್ಚು ಬೀಸಿದ್ದಾರೆ.

ಆಗ ಮಹೇಶನ ಜೊತೆಗೆ ಸುತ್ತಮುತ್ತ 15 ಹುಗುಗರು ಇದ್ದರು. ಆದರೂ ಸಹ ನುಗ್ಗಿ ಹೊಡೆದಿದ್ದಾರೆ. ಆದರೆ ಈ ಸಮಯದಲ್ಲಿ ಮಹೇಶನ ಹುಡುಗರಿಗೆ ಅಟ್ಯಾಕ್ ಮಾಡಲು ಸಮಯ ನೀಡದೆ ಹೊಡೆದು ಮುಗಿಸಿದ್ದಾರೆ. ಲಾಂಗ್ ಮಚ್ಚು ಇದ್ದರೂ ದಾಳಿ ಮಾಡಲು ಸಾಧ್ಯವಾಗದೆ ತಪ್ಪಿಸಿಕೊಂಡು ಓಡಿದ್ದ. ಈ ವೇಳೆ ಸಿಗ್ನಲ್ ಬಳಿಯಿಂದ ವಾಪಸ್ಸು ತಿರುಗಿ ಓಡಿದ್ದ ಮಹೇಶನ್ನು ಸುಮಾರು ಆರೇಳು ಜನ ಅರೋಪಿಗಳು ಬೆನ್ನಟ್ಟಿ ಅಟ್ಟಾಡಿಸಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಇನ್ನು ವಿಚಾರಣೆ ವೇಳೆ ಬಾಯಿಬಿಟ್ಟ ಆರೋಪಿಗಳು, ಮದನ್ ಕೊಲೆ ಇದು ಪ್ರತೀಕಾರ. ಮದನ್ ರೌಡಿ ಆಗಿರಲಿಲ್ಲ, ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಅನ್ನೊ ಕಾರಣಕ್ಕೆ ಬನಶಂಕರಿ ದೇವಾಲಯ ಬಳಿ ಕಾರು ಅಡ್ಡಹಾಕಿ ಕೊಲೆ ಮಾಡಿದ್ದರು. ಜೊತೆಗೆ ಪ್ರಕರಣ ನಡೆದು ಮೂರು ವರ್ಷ ಆಗಿದೆ, ರಿವೇಂಜ್ ಅಂದರೆ ಇದು ಎಂದಿದ್ದಾರೆ. ಮಹೇಶ ಜೈಲಿನಿಂದ ಹೊರಬಂದರೆ ವಾಪಸ್ಸು ನಮಗೆ ಸ್ಕೆಚ್ ಹಾಕಿ ಮುಗಿಸುತ್ತಾನೆ. ಹೀಗಾಗಿ ಜೈಲಿನಿಂದ ಮನೆ ಸೇರುವಷ್ಟರಲ್ಲಿ ಇವನನ್ನು ಹೊಡೆಯಲೇ ಬೇಕು ಎಂದು ಪ್ಲಾನ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಯಾವ ರೀತಿ ಮದನ್​ನನ್ನು ನಡುರಸ್ತೆಯಲ್ಲಿ ಬಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರೋ ಅದೇ ರೀತಿಯಲ್ಲಿ ಮಹೇಶನ ಹೆಣಾ ಬೀಳಿಸಬೇಕು ಎಂದು ತೀರ್ಮಾನ ಮಾಡಿದ್ದೆವು. ಅದರಂತೆ ನಡು ರಸ್ತೆಯಲ್ಲಿ ಹೊಡೆದು ಹಾಕಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ.

ಆದರೆ ಅರೋಪಿಗಳು ನಾಗ ಹಾಗೂ ಮೋಹನ್ ಹೆಸರು ಮಾತ್ರ ಬಾಯಿ ಬಿಡುತ್ತಿಲ್ಲವಂತೆ. ನಮಗೆ ದ್ವೇಷ ಇತ್ತು ಮತ್ತು ನಮ್ಮನ್ನೆ ಮುಗಿಸುತ್ತಾನೆ ಅನ್ನೊ ದ್ವೇಷ ಇತ್ತು. ಅದಕ್ಕೆ ಹೀಗೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಇದು ಹಲವರು ವರ್ಷಗಳ ಕಾಲದ ದ್ವೇಷ. ಜೊತೆಗೆ ಈಗಾಗಲೇ ಮೂರು ಹೆಣ ಬಿದ್ದಿದೆ‌. ಇದೆಲ್ಲದಕ್ಕು ನಾಗ ಮತ್ತು ಮೋಹನ ಕಾರಣ. ಯಾಕಂದರೆ ಈ ಗುಂಪಿನ ನಾಯಕರುಗಳೇ ಇವರಿಬ್ಬರು ಅನ್ನೊದು ಬಹಿರಂಗ ಸತ್ಯ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Tue, 8 August 23