ಬೆಂಗಳೂರು: ಹಲ್ಲೆ ಮಾಡಲು ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು, ಬಂಧನ
ಬೆಂಗಳೂರಿನ ಆರ್.ಆರ್.ನಗರದಲ್ಲಿ ಕೊಲೆ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ದೀಪು ಮತ್ತು ಅರುಣ್ ಕೊಲೆ ಆರೋಪಿಗಳು. ಆರೋಪಿಗಳು ಹಲ್ಲೆ ನಡೆಸಲು ಯತ್ನಿಸಿದ್ದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಹಳೇ ದ್ವೇಷದಿಂದ ಯುವಕ ವಿಜಯ್ ಅವರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಗಾಯಗೊಂಡ ಪೊಲೀಸರು ಮತ್ತು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು, ಜೂನ್ 15: ಹಲ್ಲೆ ಮಾಡಲು ಮುಂದಾಗಿದ್ದ ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಆರ್.ಆರ್.ನಗರದ (RR Nagar) ಷಣ್ಮುಕ ದೇವಸ್ಥಾನದ ಸಮೀಪ ನಡೆದಿದೆ. ಆರೋಪಿಗಳಾದ ದೀಪು (28), ಅರುಣ್ (27) ನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಎಎಸ್ಐ ಕುಮಾರ್, ಕಾನ್ಸ್ಟೇಬಲ್ ಕರೀಂಸಾಬ್ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಜೆಜೆ ನಗರ ಪೊಲೀಸ್ ಠಾಣೆ ಪಿಐ ಕೆಂಪೇಗೌಡ, ಪಿಎಸ್ಐ ಪದ್ಮನಾಭ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.
ಹಳೇ ದ್ವೇಷಕ್ಕೆ ಯುವಕನನ್ನು ಕೊಲೆ ಮಾಡಿದ್ದ ಆರೋಪಿಗಳು
ಆರೋಪಿಗಳು ಯುವಕ ವಿಜಯ್ (26) ಎಂಬುವರನ್ನು ಮಾತುಕತೆಗೆ ಅಂತ ಜೆ.ಜೆ.ನಗರದ ಜನತಾ ಕಾಲೋನಿಗೆ ಕರೆಸಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜೆ.ಜೆ.ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನು, ವಿಜಯ್ ಶನಿವಾರ (ಜೂ.14) ಜೈಲಿನಿಂದ ಹೊರಬಂದಿದ್ದನು.
ಶನಿವಾರ ರಾತ್ರಿ ವಿಜಯ್ನನ್ನು ಮಾತುಕತೆಗೆ ಅಂತ ಕರೆಸಿ ಆರೋಪಿಗಳು ಏರಿಯಾದಲ್ಲಿ ಅಟ್ಟಾಡಿಸಿ ಹತ್ಯೆಗೈದಿದ್ದರು. ಕೇಸ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿಗಳು ಆರ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ಅವಿತು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು: ಮುಂದೇನಾಯ್ತು?
ಆಗ, ಇನ್ಸ್ಪೆಕ್ಟರ್ ಕೆಂಪೇಗೌಡ ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದರು. ಆದರೂ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡು ಹೊಡೆದು ಬಂಧಿಸಿದರು. ಗಾಯಾಳು ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ಸಂಬಂಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾತನಾಡಿ, ಜೆ.ಜೆ.ನಗರದ ಜನತಾ ಕಾಲೋನಿಯಲ್ಲಿ ಪೂಣೇಕಣ್ಣು ವಿಜಯ್ನನ್ನು ಕೊಲೆ ಮಾಡಿದ್ದ ಆರೋಪಿಗಳು ರಾಜರಾಜೇಶ್ವರಿನಗರದಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾದರು. ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡುಹಾರಿಸಿ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದರು.
ಆದರೂ ಪೊಲೀಸರ ಮೇಲೆ ದಾಳಿ ಮಾಡಿದಾಗ ಗುಂಡು ಹಾರಿಸಿ, ಬಂಧಿಸಲಾಗಿದೆ. ಹತ್ಯೆಯಾದ ವಿಜಯ್ ಈ ಹಿಂದೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದನು. ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು. ಗಾಯಗೊಂಡಿರುವ ಪೊಲೀಸರು ಮತ್ತು ಆರೋಪಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Sun, 15 June 25







