ಕೋಲಾರ ಕೊಲೆ ಪ್ರಕರಣ: ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​, ಬಂಧನ

| Updated By: ವಿವೇಕ ಬಿರಾದಾರ

Updated on: Apr 14, 2024 | 9:54 AM

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಟೇಕಲ್​ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೊಲೆ ನಡೆದಿತ್ತು. ಕೊಲೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಫೈರ್​ ಮಾಡಿದ್ದಾರೆ. ಅಷ್ಟಕ್ಕು ಕೊಲೆ ನಡೆದಿದ್ದು ಏಕೆ? ಈ ಸುದ್ದಿ ಓದಿ..

ಕೋಲಾರ ಕೊಲೆ ಪ್ರಕರಣ: ಆರೋಪಿಗಳ ಮೇಲೆ ಪೊಲೀಸ್​ ಫೈರಿಂಗ್​, ಬಂಧನ
ಮಾಸ್ತಿ ಪೊಲೀಸ್​ ಠಾಣೆ
Follow us on

ಕೋಲಾರ, ಏಪ್ರಿಲ್​ 14: ಮಾಲೂರು ತಾಲೂಕಿನ ಸಿಗೊಂಡಹಳ್ಳಿ ಬಳಿ ಕೊಲೆ ಆರೋಪಿಗಳ ಮೇಲೆ ಆತ್ಮರಕ್ಷಣೆಗೆ ಮಾಸ್ತಿ ಠಾಣೆ ಪೊಲೀಸ್ (Police)​ ಇನ್ಸ್​ಪೆಕ್ಟರ್ ರಾಮಪ್ಪ ಗುತ್ತೇರ್ ಫೈರಿಂಗ್ (Firing)ಮಾಡಿದ್ದಾರೆ. ಕೊಲೆ ಪ್ರಕರಣ ಆರೋಪಿಗಳಾದ ಅನಿಲ್ ಮತ್ತು ಪ್ರಮೋದ್​ ಅನ್ನು ಮಾಸ್ತಿ ಠಾಣೆ ಪೊಲೀಸ್ ಸಿಬ್ಬಂದಿ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳಾದ ಅನಿಲ್​ ಮತ್ತು ಪ್ರಮೋದ್​ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಆತ್ಮ ರಕ್ಷಣೆಗೆ ಇನ್ಸ್​ಪೆಕ್ಟರ್ ರಾಮಪ್ಪ ಗುತ್ತೇರ್ ಆರೋಪಿಗಳ ಕಾಲಿಗೆ ಗುಂಡು ಹೊಡೆದು, ಬಂಧಿಸಿದ್ದಾರೆ.

ಮೀನು ಹಿಡಿಯುವ ವಿಚಾರವಾಗಿ ನಡೆಯಿತು ಕೊಲೆ

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಟೇಕಲ್​ ಗ್ರಾಮದಲ್ಲಿ ಮೀನು ಹಿಡಿಯುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಈ ಗಲಾಟೆಯನ್ನು ಬಗೆಹರಿಸಲು ಊರಿನ ಮುಖಂಡರು ಪಂಚಾಯಿತಿ ಸೇರಿಸಿದ್ದರು. ಪಂಚಾಯಿತಿ ನಡೆಯುತ್ತಿರುವಾಗಲೇ, ಊರಿನ ಮುಖಂಡರ ಎದರಲ್ಲೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಶುಕ್ರವಾರ (ಏ.12) ರಂದು ಪ್ರಮೋದ್​ ಹಾಗೂ ಅನಿಲ್​ ಟೇಕಲ್ ಗ್ರಾಮದ ಈಶ್ವರ ಕೆರೆಯಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಟೇಕಲ್​ ಗ್ರಾಮದ ಕೆಲವು ಹುಡುಗರು ಯಾರು ನೀವು ಯಾಕೆ ಮೀನು ಹಿಡಿಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಪ್ರಮೋದ್​ ಎಂಬಾತ ಅಲ್ಲಿನ ಹುಡುಗರಿಗೆ ಅವಾಜ್​ ಹಾಕಿ ಕಳಿಸಿದ್ದಾನೆ. ಅಷ್ಟೇ ಅಲ್ಲದೆ ರಾತ್ರಿ ಗ್ರಾಮದಲ್ಲಿ ಇದೇ ವಿಚಾರವಾಗಿ ಗಲಾಟೆ ಮಾಡಿದ್ದಾನೆ. ಆಗ ಗ್ರಾಮಸ್ಥರು ಗಲಾಟೆ ಬೇಡ ಶನಿವಾರ (ಏ.13) ಮದ್ಯಾಹ್ನ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದಿದ್ದಾರೆ.

ಅದರಂತೆ ಶನಿವಾರ ಮದ್ಯಾಹ್ನ 2.30ರ ಸುಮಾರಿಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆಯುತ್ತಿರುವ ವೇಳೆ, ರಾಜಪ್ಪ ಹಾಗೂ ಜಯಮ್ಮ ಎಂಬುವರು ತಮ್ಮ ಮಕ್ಕಳಾದ ಪ್ರಮೋದ್ ಹಾಗೂ ಅನಿಲ್​ ಕೈಗೆ ಹರಿತವಾದ ಚಾಕುಗಳನ್ನು ತಂದು ಕೊಟ್ಟಿದ್ದಾರೆ. ಈ ವೇಳೆ ಪ್ರಮೋದ್, ಅನಿಲ್​,​ ಏಕಾಏಕಿ ಪಂಚಾಯಿತಿಯಲ್ಲಿ ನಿಂತಿದ್ದ ಲೋಕೇಶ್ ಮತ್ತು​ ದರ್ಶನ್​ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅಲ್ಲಿದ್ದ ಗ್ರಾಮಸ್ಥರು ಗಾಯಾಳುಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್​ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ದರ್ಶನ್​ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: ಪ್ರೀತಿಸಿದವಳನ್ನೇ ಕೊಲೆ ಮಾಡಿದ ಪ್ರಿಯತಮ; ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

ಗ್ರಾಮದ ಈಶ್ವರ ಕೆರೆ ಯಾರಿಗೂ ಟೆಂಡರ್ ಆಗಿಲ್ಲ, ಅಥವಾ ಇಂಥಹವರೇ ಮೀನು ಹಿಡಿಯಬೇಕು ಎಂದು ಕಾನೂನು ಇಲ್ಲ. ಅಲ್ಲಿ ಯಾರು ಬೇಕಾದರೂ ಹೋಗಿ ಮೀನು ಹಿಡಿಯುತ್ತಿದ್ದರು. ಆ ಕೆರೆಯ ಮೀನು ಗ್ರಾಮಸ್ಥರು ಮಾತ್ರ ಹಿಡಿದುಕೊಳ್ಳಲಿ ಎಂದು ಗ್ರಾಮದಲ್ಲಿ ಹೇಳಲಾಗಿತ್ತು. ಆದರೂ ಇಲ್ಲಿ ಮೀನು ಹಿಡಿಯುವ ವೇಳೆ ಪ್ರಮೋದ್​ ಜೊತೆಗೆ ಕೆಲವು ಹೊರ ಗ್ರಾಮದ ಜನರು ಇದ್ದಾಗ ಅದನ್ನು ಯಾರು ಎಂದು ಪ್ರಶ್ನೆ ಮಾಡಿದ್ದೇ ವಿಚಾರ ಇಟ್ಟುಕೊಂಡು ಈ ರೀತಿ ಕೃತ್ಯ ಎಸಗಲಾಗಿದೆ.

ಅಲ್ಲದೆ ಕೊಲೆ ಮಾಡಿರುವ ಕೊಲೆ ಆರೋಪಿಗಳಾದ ಪ್ರಮೋದ್​ ಹಾಗೂ ಅನಿಲ್​ ಅವರ ತಂದೆ ರಾಜಪ್ಪ ಹಾಗೂ ಜಯಮ್ಮ ಮೇಲೆ ಈಗಾಗಲೇ ಕ್ರಿಮಿನಲ್​ ಹಿನ್ನೆಲೆ ಇದೆ ಎನ್ನಲಾಗಿದೆ. ಅವರು ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುವುದು, ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು ಅನ್ನೋದು ಗ್ರಾಮದ ಮುಖಂಡರ ಆರೋಪ.

ಕೊಲೆ ಪ್ರಕರಣ ಸಂಬಂಧ ಪ್ರಮೋದ್ ತಂದೆ ರಾಜಪ್ಪ, ತಾಯಿ ಜಯಮ್ಮಳನ್ನು ಪೊಲೀಸರು ಈಗಾಗಲೆ ಬಂಧಿಸಿದ್ದರು. ಇಂದ (ಏ.14) ಪ್ರಮೋದ್ ಮತ್ತು ಈತನ​ ಸಹೋದರ ಅನಿಲ್​ನನ್ನು ಬಂಧಿಸಲು ತೆರಳಿದಾಗ, ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಆತ್ಮ ರಕ್ಷಣೆಗೆ​ ಇನ್ಸ್​ಪೆಕ್ಟರ್ ರಾಮಪ್ಪ ಗುತ್ತೇರ್ ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ, ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.