Karnataka Election 2023: ಬೆಳಗಾವಿ ಕ್ಷೇತ್ರದಲ್ಲಿ ಭರ್ಜರಿ ಬಾಡೂಟ ಉಣಬಡಿಸಿದ ರಮೇಶ್ ಜಾರಕಿಹೊಳಿ!
Ramesh Jarkiholi Badoota: ಹೆಬ್ಬಾಳ್ಕರ್ ಎಷ್ಟು ಕೊಡ್ತಾರೆ ಅದರ ಡಬಲ್ ಕೊಡ್ತೇನಿ ಎಂದು ಈಗಾಗಲೇ ಘೋಷಿಸಿರುವ ರಮೇಶ್, ಇಂದು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಭರ್ಜರಿ ಬಾಡೂಟ ಹಾಕಿಸುವುದರ ಮೂಲಕ ಆರು ಸಾವಿರಕ್ಕೂ ಅಧಿಕ ಜನರಿಗೆ ಗಾಳ ಹಾಕುವ ಕೆಲಸ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ (Rural Belagavi) ಗಿಫ್ಟ್ ಪಾಲಿಟಿಕ್ಸ್ ಬೆನ್ನಲ್ಲೇ ಇದೀಗ ಮತದಾರರನ್ನ ಸೆಳೆಯಲು ಮತ್ತೊಂದು ತಂತ್ರವನ್ನ ರಾಜಕಾರಣಿಗಳು ಮಾಡಿದ್ದಾರೆ. ಭರ್ಜರಿ ಬಾಡೂಟ (Badoota) ಮಾಡಿಸಿ ತಮ್ಮತ್ತ ಸೆಳೆಯುವ ಕೆಲಸ ಮಾಡ್ತಿದ್ದಾರೆ. ರಮೇಶ್ ಜಾರಕಿಹೊಳಿಯ (Ramesh Jarkiholi) ಈ ಮಾಸ್ಟರ್ ಪ್ಲ್ಯಾನ್ ಇದೀಗ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೊಂದು ಬಗೆಯ ಪಾಲಿಟಿಕ್ಸ್ ಗೆ ನಾಂದಿ ಹಾಡಿದ್ದಾರೆ. ಜೊತೆಗೆ, ಇಂದು ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಡಿಕೆ ಶಿವಕುಮಾರ್ (DK Shivakumar) ವಿರುದ್ದ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮತ ಶಿಕಾರಿ ಮುಂದುವರೆಸಿರುವ ಸಾಹುಕಾರ್, ಮಹಾನಾಯಕಿಯನ್ನ ಮನೆಗೆ ಕಳುಹಿಸಲು ಶಪಥ ತೊಟ್ಟಂತಿದೆ (Karnataka Assembly Elections 2023).
ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರ ಚುನಾವಣೆ ನಿಗದಿಗೂ ಮುನ್ನವೇ ಕಾವು ಪಡೆದುಕೊಂಡಿದ್ದು ಪ್ರಧಾನ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಎಂಬಂತಾಗುವ ಬದಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಫೈಟ್ ಎಂಬಂತೆ ತಿರುವು ಪಡೆದುಕೊಂಡಿದೆ. ಇಬ್ಬರೂ ವೈಯಕ್ತಿಕ ಪ್ರತಿಷ್ಠೆ ಹಾಗೂ ಕ್ಷೇತ್ರವನ್ನ ಗೆಲ್ಲಲೇಬೇಕು ಅಂತಾ ಜಿದ್ದಿಗೆ ಬಿದ್ದಿದ್ದಾರೆ. ಮತದಾರರನ್ನ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಈಗಾಗಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಿಕ್ಸರ್ ಗಳನ್ನ ಮತದಾರರಿಗೆ ಗಿಫ್ಟ್ ರೂಪದಲ್ಲಿ ನೀಡಿ ತಮ್ಮತ್ತ ಸೆಳೆಯುವ ಕೆಲಸ ಮಾಡಿದ್ದರೇ, ಇತ್ತ ರಮೇಶ್ ಜಾರಕಿಹೊಳಿ ಕ್ಷೇತ್ರಕ್ಕೆ ಎಂಟ್ರಿಯಾಗಿ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಿಸುವ ಕೆಲಸ ಮಾಡುತ್ತಿದ್ದಾರೆ.
ಹೆಬ್ಬಾಳ್ಕರ್ ಎಷ್ಟು ಕೊಡ್ತಾರೆ ಅದರ ಡಬಲ್ ಕೊಡ್ತೇನಿ ಎಂದು ಈಗಾಗಲೇ ಘೋಷಿಸಿರುವ ರಮೇಶ್, ಇದೀಗ ಮತದಾರರನ್ನ ಸೆಳೆಯಲು ಗ್ರಾಮೀಣ ಕ್ಷೇತ್ರದ ಅತೀ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಬೃಹತ್ ಸಮಾವೇಶಗಳನ್ನ ಮಾಡುವ ಮೂಲಕ ತಮ್ಮತ್ತ ಜನರನ್ನ ಸೆಳೆಯುತ್ತಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳ ಬೃಹತ್ ಸಮಾವೇಶವನ್ನ ಇಂದು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭರ್ಜರಿ ಬಾಡೂಟ ಹಾಕಿಸುವುದರ ಮೂಲಕ ಆರು ಸಾವಿರಕ್ಕೂ ಅಧಿಕ ಜನರಿಗೆ ಗಾಳ ಹಾಕುವ ಕೆಲಸ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್ ಈ ಬಾಡೂಟದ ವ್ಯವಸ್ಥೆಯನ್ನ ಮಾಡಿದ್ದು ಮೊದಲು ಸಂವಾದ ಸಮಾವೇಶ ಮಾಡಿ ನಂತರ ಬಂದಿದ್ದ ಜನರಿಗೆ ಬಾಡೂಟ ನೀಡಿದ್ದಾರೆ. ಒಂದು ಸಾವಿರ ಕೆಜಿ ಮಟನ್, ಚಪಾತಿ, ಅನ್ನ ಸಾಂಬಾರ್ ವ್ಯವಸ್ಥೆ ಮಾಡಿದ್ದು ಜನರು ಊಟಕ್ಕಾಗಿ ಮುಗಿಬಿದ್ದಿದ್ದರು.
ಇನ್ನು ಸಮಾವೇಶದಲ್ಲಿ ಮತ್ತೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ವಿರುದ್ದ ಹರಿಹಾಯ್ದ ಸಾಹುಕಾರ್ ರಮೇಶ್ ಅವರು ಮಹಾನಾಯಕಿಯನ್ನ ಮನೆಗೆ ಕಳುಹಿಸುವುದಾಗಿ ಶಪಥ ಮಾಡಿದರು. ಕಳೆದ ಎರಡು ತಿಂಗಳಿಂದ ಗ್ರಾಮೀಣ ಭಾಗದಲ್ಲಿ ಪಕ್ಷದ ವರಿಷ್ಠರ ಜತೆಗೆ ಮಾತಾಡಿ ಖಾಸಗಿ ಸಭೆ, ಸಮಾರಂಭ ಮಾಡಿದ್ದೇನೆ. ಉಚಗಾಂವ ಖಾಸಗಿ ಸಮಾವೇಶದ ನಂತರ ಪಕ್ಷದ ವೇದಿಕೆಯಲ್ಲಿ ಸಮಾರಂಭ ಮಾಡುತ್ತೇವೆ. ನಿನ್ನೆ ನಡೆದ ನರೇಂದ್ರ ಮೋದಿಯವರ ಭವ್ಯ ಕಾರ್ಯಕ್ರಮ ಕರ್ನಾಟಕದ ಮೂಲೆ ಮೂಲೆಗೆ ಮುಟ್ಟಿ 2023ರಲ್ಲಿ ಬಿಜೆಪಿ ಬರುವುದು ನಿಶ್ಚಿತ ಆಗಿದೆ.
ನಾನು ಗ್ರಾಮೀಣ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುವ ಮೊದಲೇ ಕ್ಷೇತ್ರದ ಜನರಿಗೆ ಕುಕ್ಕರ್, ಮಿಕ್ಸರ್ ಕೊಡುವ ನಾಟಕ ಸ್ಟಾರ್ಟ್ ಮಾಡಿದ್ದರು. ಈ ಮೂಲಕ ಜನರನ್ನ ಹದ್ದು ಬಸ್ತಿನಲ್ಲಿಟ್ಟುಕೊಳ್ಳುವುದನ್ನ ಮಾಡ್ತಿದ್ದರು. ಮೊದಗಾ ಗ್ರಾಮದಲ್ಲಿ ಮಿಕ್ಸರ್ ಹಂಚಿದರೂ ಅದೇ ಗ್ರಾಮದಲ್ಲಿ ಗ್ರಾ. ಪಂ. ಚುನಾವಣೆಯಲ್ಲಿ ಅವರಿಗೆ ಸೋಲಾಗಿದೆ. ಗ್ರಾ.ಪಂ ಪಂಚಾಯಿತಿ ಬೈ ಎಲೆಕ್ಷನ್ ನಲ್ಲಿ ಇಂದು ಮೂರು ಸೀಟ್ ಗೆದ್ದು ಮುಂದಿನ ಚುನಾವಣೆಯಲ್ಲಿ ಗೆಲುವಿನ ದಿಕ್ಸೂಚಿ ತೋರಿಸಿದ್ದಾರೆ ಜನ. ಅವರು ಎಷ್ಟೇ ದುಡ್ಡು ಹಂಚಲಿ ಖರ್ಚು ಮಾಡಲಿ ನಾಟಕ ಮಾಡಲಿ ಜನ ಒಂದು ಬಾರಿ ಮೋಸ ಹೋಗ್ತಾರೆ. ಗಣಿ ಧಣಿಗಳು ಬಂದ್ರೂ, ರಿಯಲ್ ಎಸ್ಟೇಟ್ ಉದ್ಯಮಿಗಳು ಮತದಾರರ ಮನೆಗೆ ಬಂದು ಹೋದ್ರೂ ದುಡ್ಡಿನ ಮೇಲೆ ರಾಜಕಾರಣ ಒಂದು ಬಾರಿ ನಡೆಯುತ್ತೆ ಅಷ್ಟೆ. ಅವರು ಒಂದು ಹೈಸ್ಕೂಲ್ ಕೂಡ ಮಾಡಿಲ್ಲ. ಜನರಿಗೆ ಬರೀ ಮೋಸ ಮಾಡ್ತಿದ್ದಾರೆ.
ಗ್ರಾಮೀಣ ಶಾಸಕರು ಮೊದಲು ಕುಕ್ಕರ್ ಈ ಬಾರಿ ಮಿಕ್ಸರ್ ಕೊಟ್ಟರು. ಕುಕ್ಕರ್ ಫ್ಯಾಕ್ಟರಿ ಇರುವುದು ಕನಕಪುರದಲ್ಲಿ! ಇಲ್ಲೇ ಡೂಪ್ಲಿಕೇಟ್ ಮಾಡುವ ನಾಯಕನಿದ್ದಾನೆ. ಗ್ರಾಮೀಣ ಕ್ಷೇತ್ರದಲ್ಲಿ ಬಹಿರಂಗವಾಗಿ ಮಿಕ್ಸರ್ ಹಂಚಿದರು. ಆದ್ರೇ ತಾನು ಸತ್ಯ ಹರಿಶ್ಚಂದ್ರ ಅನ್ನೋ ಮಹಾನಾಯಕ ನಾನು ಮಾತಾಡಿದ್ದಕ್ಕೇ ದೂರು ಕೊಟ್ಟ. ಅವನ ದೃಷ್ಟಿಯಲ್ಲಿ ಬರೀ ಗ್ರಾಮೀಣ ಕ್ಷೇತ್ರ ಇದೆಯಷ್ಟೆ. ಹೀಗಾಗಿ ಅವರನ್ನ ನಾವೆಲ್ಲರೂ ಸೇರಿ ಸೋಲಿಸಬೇಕು. ಗ್ರಾಮೀಣ ಕ್ಷೇತ್ರವವನ್ನು ಕೆಡಿಸಿರುವ ಮಹಾನಾಯಕಿಯನ್ನ ಮನೆಗೆ ಕಳುಹಿಸಿ ಎಂದು ರಮೇಶ್ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಾರೆ ಗ್ರಾಮೀಣ ಕ್ಷೇತ್ರದಲ್ಲಿ ಈ ವರೆಗೂ ಗಿಫ್ಟ್ ಪಾಲಿಟಿಕ್ಸ್ ನಡೆದಿದ್ದು ಇದೀಗ ಬಾಡೂಟದ ಪಾಲಿಟಿಕ್ಸ್ ಶುರುವಾಗಿದೆ. ಮಗತದಾರರನ್ನ ಸೆಳೆಯಲು ದಿನಕ್ಕೊಂದು ತಂತ್ರಗಳನ್ನ ಮಾಡ್ತಿರುವ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಚುನಾವಣೆ ಬರುವವರೆಗೂ ಯಾವೆಲ್ಲಾ ಡ್ರಾಮಾ ಮಾಡ್ತಾರೆ. ಇವರ ಈ ತಂತ್ರಗಳಿಗೆ ಮತದಾರರು ಅದ್ಯಾವ ರೀತಿ ಉತ್ತರ ಕೊಡ್ತಾರೆ, ಯಾರಿಗೆ ಜೈ ಅಂತಾರೆ ಅನ್ನೋದು ಚುನಾವಣೆ ಫಲಿತಾಂಶದ ಬಳಿಕವಷ್ಟೇ ತಿಳಿದುಬರಬೇಕಿದೆ.
ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ
Published On - 5:37 pm, Tue, 28 February 23