ರಾಯ್ ಬರೇಲಿಗೆ ದಿನೇಶ್ ಪ್ರತಾಪ್ ಬಿಜೆಪಿ ಅಭ್ಯರ್ಥಿ; ಕಾಂಗ್ರೆಸ್ ಭದ್ರಕೋಟೆಯಾಗುವ ಮುನ್ನ ಇಂದಿರಾ ಗಾಂಧಿ ಸೋತ ಕ್ಷೇತ್ರ ಇದು
Rae bareli BJP candidate Dinesh Pratap Singh: ಮೇ 20ರಂದು ಚುನಾವಣೆ ನಡೆಯಲಿರುವ ರಾಯ್ ಬರೇಲಿ ಕ್ಷೇತ್ರಕ್ಕೆ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಇಲ್ಲಿ ಸತತ ಐದು ಬಾರಿ ಗೆದ್ದಿದೆ. ಸೋನಿಯಾ ಗಾಂಧಿ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿ ಅವರು ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ಅವರೇ ಸ್ಪರ್ಧೆ ಮಾಡಿ ಉತ್ತಮ ಪೈಪೋಟಿ ನೀಡಿದ್ದರು. ಈ ಬಾರಿ ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್ ಗೆಲುವಿನ ಸಾಧ್ಯತೆ ಹೆಚ್ಚಿದಂತಿದೆ.

ನವದೆಹಲಿ, ಮೇ 2: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿರುವ ಏಕೈಕ ಲೋಕಸಭಾ ಕ್ಷೇತ್ರವೆನಿಸಿರುವ ರಾಯ್ ಬರೇಲಿಯಲ್ಲಿ ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ (Dinesh Pratap Singh) ಅವರಿಗೆ ಟಿಕೆಟ್ ನೀಡಿದೆ. ಹಲವು ದಶಕಗಳ ಕಾಲ ಉತ್ತರಪ್ರದೇಶದ ಕಾಂಗ್ರೆಸ್ ಭದ್ರಕೋಟೆಗಳಲ್ಲಿ ರಾಯ್ ಬರೇಲಿಯೂ (Rae Bareli) ಒಂದಾಗಿದೆ. ಅಮೇಥಿ ಸೇರಿದಂತೆ ಹಲವು ಕೈ ಕೋಟೆ ಪತನಗೊಂಡಿದೆ. ಈಗ ರಾಯ್ ಬರೇಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸೋನಿಯಾ ಗಾಂಧಿ ಇಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿ ಚುನಾವಣೆಗೆ ಇಳಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿಯಾಗಿದೆ. ಕಾಂಗ್ರೆಸ್ನಿಂದ ಯಾರು ಅಭ್ಯರ್ಥಿ ಎಂಬುದು ಇನ್ನೂ ಗೊತ್ತಾಗಿಲ್ಲ. ಬಿಜೆಪಿ ಈ ಮಧ್ಯೆ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಅಖಾಡಕ್ಕೆ ಇಳಿಸಿದೆ.
ಯಾರು ಈ ದಿನೇಶ್ ಪ್ರತಾಪ್ ಸಿಂಗ್?
ಇವರು ಮೂಲತಃ ಕಾಂಗ್ರೆಸ್ಸಿಗರು. ಈಗ ಬಿಜೆಪಿಯಲ್ಲಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದಾರೆ. 2019ರಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ನಿಂದ ಇವರು ಸೋನಿಯಾ ಗಾಂಧಿ ಎದುರಾಗಿ ಸ್ಪರ್ಧೆ ಮಾಡಿ ಉತ್ತಮ ಪೈಪೋಟಿ ನೀಡುವಲ್ಲಿ ಸಫಲರಾಗಿದ್ದರು. ಆ ಚುನಾವಣೆಯಲ್ಲಿ ದಿನೇಶ್ ಅವರು ಶೇ. 38ರಷ್ಟು ಮತ ಪಡೆದಿದ್ದರು.
ಇದನ್ನೂ ಓದಿ: ಚುನಾವಣೋತ್ತರ ಯೋಜನೆಗಳಿಗೆ ಮತದಾರರ ಸೇರ್ಪಡೆ ನಿಲ್ಲಿಸಿ; ಎಲ್ಲ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ
ಇಂದಿರಾ ಗಾಂಧಿಯನ್ನೇ ಸೋಲಿಸಿದ್ದ ಕ್ಷೇತ್ರ ಇದು…
ರಾಯ್ ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗಾಂಧಿ 1977ರಲ್ಲಿ ಸ್ಪರ್ಧಿಸಿ ಸೋತಿದ್ದರು. 1996, 1998ರ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಿಂದ ಗೆದ್ದಿತ್ತು. ಆದರೆ, 1999ರ ಚುನಾವಣೆಯಲ್ಲಿ ಕೈ ವಶವಾದ ಈ ಕ್ಷೇತ್ರ ಮತ್ತೆ ಕೈ ಪಾಳಯವನ್ನು ದೂರ ಮಾಡಲಿಲ್ಲ. 2004ರಿಂದ ಸೋನಿಯಾ ಗಾಂಧಿ ಅವರು ಸತತವಾಗಿ ನಾಲ್ಕು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಈ ಬಾರಿ ರಾಯ್ ಬರೇಲಿ ಕೈ ಟಿಕೆಟ್ ಯಾರಿಗೆ?
ಸೋನಿಯಾ ಗಾಂಧಿ ಸ್ಪರ್ಧಿಸದೇ ಇರುವುದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದು ಕುತೂಹಲ. ಅಮೇಥಿಯಲ್ಲಿ ರಾಹುಲ್ ಗಾಂಧಿ ಕಳೆದ ಬಾರಿ ಸೋತು ದಕ್ಷಿಣಕ್ಕೆ ಹೋಗಿದ್ದಾರೆ. ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎನ್ನುವ ಮಾತಿದೆ. ಆದರೆ, ಅವರು ಸ್ಪರ್ಧಿಸಲ್ಲ ಎನ್ನುವ ಸುದ್ದಿಯೂ ಇದೆ.
ಇದನ್ನೂ ಓದಿ: Lok Sabha Election 2024: ಬ್ರಿಜ್ ಭೂಷಣ್ ಶರಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ನೀಡಿದ ಬಿಜೆಪಿ
ಗಾಂಧಿ ಕುಟುಂಬಕ್ಕೆ ಸೇರಿದವರೇ ಆದ ಮತ್ತು ಜವಾಹರಲಾಲ್ ನೆಹರೂ ಅವರ ನಾದಿನಿಯವರಾದ ಶೀಲಾ ಕೌಲ್ ಅವರ ಮೊಮ್ಮಗನನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿರುವುದು ಗೊತ್ತಾಗಿದೆ. 5ನೇ ಹಂತದ ಚುನಾವಣೆ ಇರುವ ಮೇ 20ರಂದು ಅಮೇಥಿ, ರಾಯ್ ಬರೇಲಿ ಮೊದಲಾದ ಕ್ಷೇತ್ರಗಳಲ್ಲಿ ಮತದಾನ ಆಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ