AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮೊದಲ ಟಿಕೆಟ್ ನೀಡಿದ ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ್

ಬಿಜೆಪಿ ಮೈತ್ರಿಕೂಟದಿಂದ ಹೈದರ್ ಖಾನ್ ಅವರ ಉಮೇದುವಾರಿಕೆ ಉತ್ತರ ಪ್ರದೇಶ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಅಪರೂಪದ ನಿದರ್ಶನಗಳಲ್ಲಿ ಒಂದಾಗಿದೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಮೊದಲ ಟಿಕೆಟ್ ನೀಡಿದ ಬಿಜೆಪಿಯ ಮಿತ್ರ ಪಕ್ಷ ಅಪ್ನಾದಳ್
ಹೈದರ್ ಅಲಿ ಖಾನ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 23, 2022 | 8:31 PM

Share

ಲಖನೌ: ಬಿಜೆಪಿಯ ಮಿತ್ರಪಕ್ಷ ಅಪ್ನಾ ದಳ್ (ಎಸ್) (Apna Dal (S)) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Polls) ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಅಭ್ಯರ್ಥಿ ಹೈದರ್ ಅಲಿ ಖಾನ್ (Haider Ali Khan) ಪಶ್ಚಿಮ ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ಸೂರ್‌ನವರಾಗಿದ್ದಾರೆ. ಇದೇ ಕ್ಷೇತ್ರದಲ್ಲಿ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಂ ಸ್ಪರ್ಧಿಸುವ ನಿರೀಕ್ಷೆಯಿದೆ. ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷವಾದ ಅನುಪ್ರಿಯಾ ಪಟೇಲ್‌ ಅವರ ಅಪ್ನಾ ದಳ್ (ಎಸ್) ಮತ್ತು ಸಂಜಯ್ ನಿಶಾದ್ ಅವರ ನಿಶಾದ್ ಪಕ್ಷದ ನಡುವಿನ ಸೀಟು ಹಂಚಿಕೆಯ ಬಗ್ಗೆ ಯಾವುದೇ ಅಧಿಕೃತ ಮಾತುಗಳಿಲ್ಲದಿದ್ದರೂ ಈ ಘೋಷಣೆ ಬಂದಿದೆ. ಬಿಜೆಪಿ ಮೈತ್ರಿಕೂಟದಿಂದ ಹೈದರ್ ಖಾನ್ ಅವರ ಉಮೇದುವಾರಿಕೆ ಉತ್ತರ ಪ್ರದೇಶ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಅಪರೂಪದ ನಿದರ್ಶನಗಳಲ್ಲಿ ಒಂದಾಗಿದೆ. ಖಾನ್ ಅವರು ರಾಂಪುರ ರಾಜಮನೆತನದಿಂದ ಬಂದವರು. ಅವರ ಅಜ್ಜ ಜುಲ್ಫಿಕರ್ ಅಲಿ ಖಾನ್ ಅವರು ರಾಂಪುರದಿಂದ ಐದು ಬಾರಿ ಕಾಂಗ್ರೆಸ್ ಸಂಸದರಾಗಿದ್ದರು. ಹೈದರ್ ಅವರ ತಂದೆ, ನವಾಬ್ ಕಾಜಿಮ್ ಅಲಿ ಖಾನ್, ನಾಲ್ಕು ಅವಧಿಯ ಶಾಸಕರಾಗಿದ್ದು, ಅವರು ಈಗ ಸೂರ್ ಪಕ್ಕದಲ್ಲಿರುವ ರಾಂಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಅಪ್ನಾ ದಳ (ಎಸ್) ಅಭ್ಯರ್ಥಿ ಯು-ಟರ್ನ್‌ಗಳಿಗಾಗಿ ಸುದ್ದಿಯಲ್ಲಿದ್ದಾರೆ. ಅವರನ್ನು ಮೊದಲು ಸೂರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೆಸರಿಸಲಾಯಿತು. ನಂತರ ಅವರು ದೆಹಲಿಗೆ ಹೋಗಿ ಅನುಪ್ರಿಯಾ ಪಟೇಲ್ ಅವರನ್ನು ಭೇಟಿಯಾದರು, ಅವರು ಈಗ ಅವರನ್ನು ಅಧಿಕೃತವಾಗಿ ಸೂರ್‌ನಿಂದ ತಮ್ಮ ಪಕ್ಷದ ಅಭ್ಯರ್ಥಿ ಎಂದು ಅಪ್ನಾ ದಳ್ ಘೋಷಿಸಿದೆ.

ಅಬ್ದುಲ್ಲಾ ಅಜಂ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸೂರ್ ನಿಂದ 2017 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. 2017 ರ ಚುನಾವಣೆಗೆ ನಾಮನಿರ್ದೇಶನವನ್ನು ಸಲ್ಲಿಸಿದಾಗ ಅವರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು ಎಂಬ ಕಾರಣಕ್ಕಾಗಿ 2019 ರ ಡಿಸೆಂಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ಅಬ್ದುಲ್ಲಾ ಅವರ ಚುನಾವಣಾ ವಿಜಯವನ್ನು ರದ್ದುಗೊಳಿಸಿತು.

ಫೆಬ್ರವರಿ 2020 ರಿಂದ ಅಬ್ದುಲ್ಲಾ ವಂಚನೆ ಸೇರಿದಂತೆ ಅನೇಕ ಆರೋಪಗಳ ಮೇಲೆ ಜೈಲಿನಲ್ಲಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಜಾಮೀನು ಸಿಕ್ಕಿದ್ದು, ಈ ಬಾರಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸೂರ್ ನಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಅಬ್ದುಲ್ಲಾ ಅವರ ತಂದೆ ಅಜಂ ಖಾನ್ ಅವರು ರಾಂಪುರದಿಂದ ಪ್ರಸ್ತುತ ಲೋಕಸಭಾ ಸಂಸದರಾಗಿದ್ದಾರೆ ಮತ್ತು ಫೆಬ್ರವರಿ 2020 ರಿಂದ ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ.  ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಮಧ್ಯಂತರ ಜಾಮೀನು ಕೋರಿ ಅಜಂ ಖಾನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಪಕ್ಷದ ಪರವಾಗಿ ಪ್ರಚಾರ ಮಾಡುವುದನ್ನು ತಡೆಯುವುದಕ್ಕಾಗಿ ಅವರು ಜೈಲಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಅವರ ಉಳಿದ ಮೂರು ಜಾಮೀನು ಅರ್ಜಿಗಳ ವಿಚಾರಣೆಯನ್ನು ವಿಳಂಬಗೊಳಿಸಲು ರಾಜ್ಯವು “ಲಭ್ಯವಿರುವ ಎಲ್ಲಾ ಮಾರ್ಗಗಳನ್ನು ಅಳವಡಿಸಿಕೊಂಡಿದೆ” ಎಂದು ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಹೊಲೋಗ್ರಾಮ್ ಪ್ರತಿಮೆ ಅನಾವರಣಗೊಳಿಸಿದ ಮೋದಿ