AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh Elections 2022: ಉತ್ತರ ಪ್ರದೇಶದಲ್ಲಿ ಮತ್ತೆ ಜಾತಿ ಆಧಾರಿತ ಜನಗಣತಿಯ ಕಿಡಿ ಹತ್ತಿಸಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆದ್ದರೆ ರಾಜ್ಯದಲ್ಲಿ ಮೂರು ತಿಂಗಳೊಳಗೆ ಜಾತಿವಾರು ಜನಗಣತಿ ನಡೆಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದ್ದಾರೆ.

Uttar Pradesh Elections 2022: ಉತ್ತರ ಪ್ರದೇಶದಲ್ಲಿ ಮತ್ತೆ ಜಾತಿ ಆಧಾರಿತ ಜನಗಣತಿಯ ಕಿಡಿ ಹತ್ತಿಸಿದ ಅಖಿಲೇಶ್ ಯಾದವ್
ಅಖಿಲೇಶ್ ಯಾದವ್​
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jan 17, 2022 | 8:20 PM

ನವದೆಹಲಿ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅವರು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕಿದರೆ ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸುವ ಭರವಸೆಯನ್ನು ಭಾನುವಾರ ಪುನರುಚ್ಚರಿಸಿದ್ದಾರೆ. ಈಗಿನ ಸರ್ಕಾರ ಮರಗಳನ್ನು ಎಣಿಸುತ್ತಿದೆ, ಪ್ರಾಣಿಗಳನ್ನು ಎಣಿಸುತ್ತಿದೆ. ಆದರೆ ಜನಸಂಖ್ಯೆಯಲ್ಲಿ ಹಿಂದುಳಿದವರನ್ನು ಮಾತ್ರ ಯಾಕೆ ಎಣಿಕೆ ಮಾಡುತ್ತಿಲ್ಲ? ಜನಸಂಖ್ಯೆಯಲ್ಲಿ ಹಿಂದುಳಿದವರ ಜನಗಣತಿ ಮಾಡಿ ಅವರ ಪಾಲಿನ ಲಾಭವನ್ನು ಪಡೆಯುವಂತೆ ಮಾಡಬೇಕು ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳ ಅಲೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಗೆದ್ದರೆ ರಾಜ್ಯದಲ್ಲಿ ಮೂರು ತಿಂಗಳೊಳಗೆ ಜಾತಿವಾರು ಜನಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಸರ್ಕಾರ ಮರ, ಪ್ರಾಣಿಗಳ ಲೆಕ್ಕ ಹಾಕುತ್ತಿದೆ. ಆದರೆ ಜನಸಂಖ್ಯೆಯಲ್ಲಿ ಹಿಂದುಳಿದವರನ್ನು ಏಕೆ ಲೆಕ್ಕ ಹಾಕಿಲ್ಲ ಎಂದು ಯಾದವ್ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಇತರ ಐದು ರಾಜ್ಯಗಳಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ವಿವಿಧ ಪಕ್ಷಗಳ ಮುಖಂಡರು ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಅಲ್ಲದೆ, ಮತದಾರರನ್ನು ಸೆಳೆಯಲು ನಾನಾ ಭರವಸೆಗಳನ್ನು ನೀಡಲಾಗುತ್ತಿದೆ. ಉತ್ತರ ಪ್ರದೇಶದ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಭರವಸೆಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿವೆ.

ಇತ್ತೀಚೆಗೆ ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ದಾರಾ ಸಿಂಗ್ ಚೌಹಾಣ್ ಅವರಿಗೆ ಪಕ್ಷದ ಸದಸ್ಯತ್ವವನ್ನು ನೀಡಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಅವರ ಪಕ್ಷ ಮತ್ತು ಮಿತ್ರಪಕ್ಷಗಳು ದೀರ್ಘಕಾಲದವರೆಗೆ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸುತ್ತಿವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಸರ್ಕಾರ ರಚನೆಯಾದರೆ 3 ತಿಂಗಳಲ್ಲಿ ಜಾತಿವಾರು ಜನಗಣತಿ ಆರಂಭವಾಗಲಿದೆ ಎಂದಿದ್ದಾರೆ.

ಸಮಾಜವಾದಿ ಪಕ್ಷ ಮಾತ್ರವಲ್ಲ ನೆರೆಯ ಬಿಹಾರದಲ್ಲಿ ವಿರೋಧ ಪಕ್ಷದಲ್ಲಿರುವ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೂಡ ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿಗೆ ಬಹುಕಾಲದಿಂದ ಬೇಡಿಕೆ ಇಡುತ್ತಿದೆ. ಆದರೆ, ಈ ಬಗ್ಗೆ ಬಿಜೆಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಸಮಾಜವಾದಿ ಪಕ್ಷದ ಮೇಲೆ ಕ್ರಮಕೈಗೊಳ್ಳುತ್ತೀರಿ ಆದರೆ ಬಿಜೆಪಿ ಅಭ್ಯರ್ಥಿ ವಿರುದ್ಧ ಯಾಕಿಲ್ಲ?: ಅಖಿಲೇಶ್ ಯಾದವ್ 

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಹಸ್ತಿನಾಪುರ ಕದನಕ್ಕೆ ಸಿದ್ಧ ಎಂದ ಕಾಂಗ್ರೆಸ್‌ನ ಅರ್ಚನಾ ಗೌತಮ್

Published On - 8:19 pm, Mon, 17 January 22