Pavithra Gowda Detained: ನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ

| Updated By: ಆಯೇಷಾ ಬಾನು

Updated on: Jun 11, 2024 | 11:39 AM

ಪವಿತ್ರ ಗೌಡ ಪೊಲೀಸ್​ ವಶಕ್ಕೆ: ಬೆಂಗಳೂರಿನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಆರ್​​.ಆರ್​.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರೆ.

Pavithra Gowda Detained: ನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ
ನಟ ದರ್ಶನ್, ಗೆಳತಿ ಪವಿತ್ರಾಗೌಡ
Follow us on

ಬೆಂಗಳೂರು, ಜೂನ್.11: ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್ (Darshan Thoogudeepa) ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆ ನಡೆದಿದೆ. ಬೆಂಗಳೂರಿನಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನು (Pavithra Gowda) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್​​.ಆರ್​.ನಗರ ಠಾಣೆಯ ಪೊಲೀಸರು ಪವಿತ್ರಾಗೌಡಳನ್ನು ವಶಕ್ಕೆ ಪಡೆದಿದ್ದಾರೆ.

ಪವಿತ್ರಾಗೌಡಳನ್ನು ಕಾಮಾಕ್ಷಿ ಪಾಳ್ಯ‌ ಸ್ಟೇಷನ್​ಗೆ ಕರೆ ತಂದ ಪೊಲೀಸ್

ಪವಿತ್ರಾಗೌಡಳನ್ನು ವಶಕ್ಕೆ ಪಡೆದ ಆರ್.ಆರ್. ನಗರ ಪೊಲೀಸ್ ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಅವರು ಕಾಮಾಕ್ಷಿ ಪಾಳ್ಯ‌ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಜೊತೆ ಅವರ ಅಕ್ಕ ಕೂಡ ಠಾಣೆಗೆ ಆಗಮಿಸಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ​​ ನಟ ದರ್ಶನ್​ ಸೇರಿದಂತೆ 10 ಜನರನ್ನು ವಿಜಯನಗರ ಎಸಿಪಿ ಚಂದನ್​ ತಂಡ ಬಂಧಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೈಸೂರಿನ ಱಡಿಸನ್​ ಹೋಟೆಲ್​ನಲ್ಲಿ ದರ್ಶನ್​ ಅರೆಸ್ಟ್ ಮಾಡಲಾಗಿದ್ದು ನಟ ದರ್ಶನ್ ಸೇರಿದಂತೆ ಪಟ್ಟಣಗೆರೆ ಜಯಣ್ಣ ಪುತ್ರ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 10 ಜನರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ: ಪೊಲೀಸ್ ಆಯುಕ್ತ ನೀಡಿದ ಮಾಹಿತಿ

ಮೈಸೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಗಿರೀಶ್, ಎಸಿಪಿ ಚಂದನ್​ರಿಂದ ನಟ ದರ್ಶನ್​ ವಿಚಾರಣೆ ನಡೆಯುತ್ತಿದೆ. ಅನ್ನಪೂರ್ಣೇಶ್ವರಿನಗರ ಠಾಣೆ ಬಳಿ ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ

ಇನ್ನು ಅಚ್ಚರಿ ಎಂದರೆ ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್, ವಿಜಯಲಕ್ಷ್ಮೀ ಸಂಸಾರ ಬಗ್ಗೆ ಯೋಚನೆ ಮಾಡ್ತಿದ್ದ ಸ್ವಾಮಿ, ದಂಪತಿ ಸಂಸಾರದಲ್ಲಿ ಪವಿತ್ರಾಗೌಡ ಬರುತ್ತಿದ್ದಾಳೆಂದು ತಿಳಿದು ಮೆಸೇಜ್ ಮಾಡಿದ್ದ. ಪವಿತ್ರಾಗೌಡಗೆ ಮೆಸೇಜ್ ಮಾಡುತ್ತಿರುವುದನ್ನು ತಿಳಿದ ಬಳಿಕ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:26 am, Tue, 11 June 24