ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?

Yami Gautam Wedding: ಸೆಲೆಬ್ರಿಟಿಗಳ ಕಾಸ್ಟ್ಯೂಮ್​ ಎಂದರೆ ಅವುಗಳ ದುಬಾರಿ ಬೆಲೆಯ ಕಾರಣಕ್ಕಾಗಿ ಸುದ್ದಿ ಆಗುತ್ತವೆ. ಆದರೆ ಯಾಮಿ ಗೌತಮ್​ ಧರಿಸಿದ ಸೀರೆಯ ಬೆಲೆಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ.

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?
ಆದಿತ್ಯ ಧಾರ್ ಜೊತೆ ಹಸೆಮಣೆ ಏರಿದ ಯಾಮಿ ಗೌತಮ್​
Edited By:

Updated on: Jun 12, 2021 | 4:39 PM

ಸೆಲೆಬ್ರಿಟಿಗಳ ಮದುವೆ ಸಿಕ್ಕಾಪಟ್ಟೆ ಅದ್ದೂರಿಯಾಗಿ ನಡೆಯುವುದು ಕಾಮನ್​. ಆದರೆ ಈಗ ಎಲ್ಲೆಲ್ಲೂ ಲಾಕ್​ಡೌನ್​ ಇರುವುದರಿಂದ ಹಾಗೂ ಕೊರೊನಾ ವೈರಸ್​ ಹರಡುವ ಭಯದಿಂದ ಎಲ್ಲರೂ ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಯಾಮಿ ಗೌತಮ್​ ಅವರು ಗುಟ್ಟಾಗಿ ಮದುವೆಯಾದರು. ಮದುವೆ ಫೋಟೋ ಬಹಿರಂಗ ಆದ ಬಳಿಕವೇ ಈ ವಿಷಯ ಜಗತ್ತಿಗೆ ಗೊತ್ತಾಯಿತು. ಈ ಶುಭ ಸಮಾರಂಭದಲ್ಲಿ ಅವರು ಧರಿಸಿದ ಸೀರೆ ಈಗ ಟಾಕ್​ ಆಫ್​ ದಿ ಟೌನ್​ ಆಗಿದೆ.

ಬಾಲಿವುಡ್​ನ ಸೂಪರ್​ ಹಿಟ್​ ಸಿನಿಮಾ ‘ಉರಿ: ದಿ ಸರ್ಜಿಕಲ್​ ಸ್ಟ್ರೈಕ್​’ ಚಿತ್ರದ ನಿರ್ದೇಶಕ ಆದಿತ್ಯ ಧಾರ್​ ಜೊತೆ ಯಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಿತು. ಲಾಕ್​ಡೌನ್​ ಇರುವ ಕಾರಣ ಮದುವೆಗಾಗಿ ಅದ್ದೂರಿಯಾಗಿ ಶಾಪಿಂಗ್​ ಮಾಡಲು ಸಾಧ್ಯವಾಗಿಲ್ಲ. ವೃತ್ತಿಪರ ಮೇಕಪ್​ ಕಲಾವಿದರನ್ನೂ ಕರೆಸದೇ ಸ್ವತಃ ಯಾಮಿ ಗೌತಮ್​ ಅವರೇ ಮೇಕಪ್​ ಮಾಡಿಕೊಂಡರು. ಇದೆಲ್ಲದರ ನಡುವೆ ಯಾಮಿ ಧರಿಸಿದ ಸೀರೆ ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೆ ವಿಶೇಷ ಕಾರಣ ಕೂಡ ಇದೆ.

ಸೆಲೆಬ್ರಿಟಿಗಳ ಕಾಸ್ಟ್ಯೂಮ್​ ಎಂದರೆ ಅವುಗಳ ದುಬಾರಿ ಬೆಲೆಯ ಕಾರಣಕ್ಕಾಗಿ ಸುದ್ದಿ ಆಗುತ್ತವೆ. ಆದರೆ ಯಾಮಿ ಧರಿಸಿದ ಸೀರೆಯ ಬೆಲೆಯನ್ನು ದುಡ್ಡಿನಿಂದ ಅಳೆಯಲು ಸಾಧ್ಯವಿಲ್ಲ. ಯಾಕೆಂದರೆ ಅದು ಅವರ ತಾಯಿಯ ಸೀರೆ. ಅಚ್ಚರಿ ವಿಚಾರ ಏನೆಂದರೆ, ಅದು 33 ವರ್ಷಗಳಷ್ಟು ಹಳೆಯ ಸೀರೆ! ಅದರೂ ಈ ತಲೆಮಾರಿನ ಫ್ಯಾಷನ್​ಗೆ ಪೈಪೋಟಿ ನೀಡುವ ರೀತಿಯಲ್ಲಿ ಅದನ್ನು ಧರಿಸಿ ಯಾಮಿ ಮಿಂಚಿದ್ದಾರೆ. 33 ವರ್ಷಗಳ ಹಳೆಯ ಸೀರೆ ಎಂಬುದು ಗೊತ್ತಾದ ಬಳಿಕ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.


‘ಕುಟುಂಬದವರ ಆಶೀರ್ವಾದದೊಂದಿಗೆ ನಾವು ಇಂದು (ಜೂ.4) ಮದುವೆ ಆದೆವು. ಕೇವಲ ನಮ್ಮ ಆಪ್ತರ ಸಮ್ಮುಖದಲ್ಲಿ ಖಾಸಗಿಯಾಗಿ ಈ ವಿವಾಹ ಸಮಾರಂಭ ನೆರವೇರಿತು. ಪ್ರೀತಿ-ಸ್ನೇಹದ ನಮ್ಮ ಈ ಹೊಸ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಯಾಮಿ ಗೌತಮ್​ ಕೋರಿದ್ದರು.

ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾ ಮೂಲಕ ಯಾಮಿ ಗೌತಮ್​ ಅವರು ಬಣ್ಣದ ಬದುಕು ಆರಂಭಿಸಿದ್ದರು. ಆ ಚಿತ್ರದಲ್ಲಿ ನಟ ಗಣೇಶ್​ಗೆ ಅವರು ಜೋಡಿ ಆಗಿದ್ದರು. ಬಳಿಕ ಅವರು ಪರಭಾಷೆಯಲ್ಲಿ ಮಿಂಚಲು ಆರಂಭಿಸಿದರು. ಈಗ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ‘ಭೂತ್​ ಪೊಲೀಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಯಾಮಿ ಗೌತಮ್​ ಪೋಸ್ಟ್​ನಲ್ಲಿ ಕಂಗನಾ ಕಿರಿಕ್​; ಬಾಲಿವುಡ್​ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ

‘ನಮ್ಮನ್ನು ಕ್ಷಮಿಸಿ’; ಮದುವೆ ಬೆನ್ನಲ್ಲೇ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದ ಪ್ರಣಿತಾ ಮತ್ತು ನಿತಿನ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us