ನಾಗಾರ್ಜುನಗೆ ಸೇರಿದ ಕನ್ವೆಂಷನ್​ ಹಾಲ್ ಧ್ವಂಸ; ನಟ ಹೇಳೋದೇನು?

ಮಾದಾಪುರದ ತಮ್ಮಿಡಿಕುಂಟ ಕೆರೆ ದಂಡೆ ಮೇಲೆ ನಾಗಾರ್ಜುನ ಕನ್ವೆಂಷನ್ ಹಾಲ್ ನಿರ್ಮಾಣ ಮಾಡಿದ್ದರು. ಕೆರೆಗೆ ಸೇರಿದ 1.12 ಎಕರೆ ಜಾಗ ಒತ್ತುವರಿ ಮಾಡಿದ್ದ ಆರೋಪ ಇದೆ. ಕಟ್ಟಡ ತೆರವುಗೊಳಿಸಲಾಗಿದೆ. ಈ ಬಗ್ಗೆ ನಾಗಾರ್ಜುನ ಅವರು ಮಾತನಾಡಿದ್ದಾರೆ.

ನಾಗಾರ್ಜುನಗೆ ಸೇರಿದ ಕನ್ವೆಂಷನ್​ ಹಾಲ್ ಧ್ವಂಸ; ನಟ ಹೇಳೋದೇನು?
ನಾಗಾರ್ಜುನ

Updated on: Aug 24, 2024 | 2:07 PM

ಹೈದರಾಬಾದ್​ನಲ್ಲಿ ನಟ ನಾಗಾರ್ಜುನಗೆ ಸೇರಿದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಆರೋಪ ಇತ್ತು. ಹೀಗಾಗಿ ಇದನ್ನು ನೆಲಸಮ ಮಾಡಲಾಗಿದೆ. ಆದರೆ ಈ ಆರೋಪವನ್ನು ನಾಗಾರ್ಜುನ ಅವರು ಅಲ್ಲಗಳೆದಿದ್ದಾರೆ. ‘ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.

‘ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ ಏಜೆನ್ಸಿ (HYDRAA) ನಾಗಾರ್ಜುನ ಅವರಿಗೆ ಸೇರಿದ ಕನ್ವೆಂಷನ್ ಹಾಲ್​ನ ಒಡೆದು ಹಾಕಿದೆ. ಸರ್ಕಾರಿ ಜಮೀನು ಹಾಗೂ ಕೆರೆಗಳನ್ನು ಒತ್ತುವರಿ ಮಾಡಿದ್ದರ ವಿರುದ್ಧ HYDRAA ಕ್ರಮ ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈ ಕಟ್ಟಡ ಒಡೆಯಲಾಗಿದೆ.

ನಾಗಾರ್ಜುನ ಅವರಿಗೆ ಸೇರಿದ ‘ಎನ್ ಕನ್ವೆಂಷನ್ ಹಾಲ್’ 10 ಎಕರೆ ಜಾಗದಲ್ಲಿ ಇತ್ತು. ಈ ಕಟ್ಟಡ ನಿರ್ಮಾಣದ ವೇಳೆ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಮಾದಾಪುರದ ತಮ್ಮಿಡಿಕುಂಟ ಕೆರೆಯ 1.12 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದ ಎರಡು ಎಕರೆ ಕೆರೆ ಬಫರ್​ಜೋನ್​ನಲ್ಲಿ ಬರುತ್ತದೆ ಎನ್ನಲಾಗಿದೆ.

‘ಪಟ್ಟಾ ಭೂಮಿಯಲ್ಲೇ ಎನ್​​ ಕನ್ವೆನ್ಷಲ್ ಹಾಲ್ ನಿರ್ಮಾಣ ಮಾಡಿದ್ದೆವು. ಕೆರೆಯ ಒಂದು ಇಂಚು ಭೂಮಿ ಕೂಡ ನಾವು ಆಕ್ರಮಿಸಿಲ್ಲ. ಈ ಹಿಂದೆಯೂ ನೆಲಸಮ ಮಾಡಲು ನೋಟಿಸ್ ನೀಡಲಾಗಿತ್ತು, ನಾವು ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದೆವು. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕಟ್ಟಡ ನೆಲಸಮ ಮಾಡಿದ್ದಾರೆ’ ಎಂದು ನಾಗಾರ್ಜುನ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಸಮಂತಾ ಬಿಟ್ಟು ಹೋದಾಗ ಡಿಪ್ರೆಸ್​ ಆಗಿದ್ದ ಮಗ ಈಗ ಖುಷಿ ಆಗಿದ್ದಾನೆ’: ನಾಗಾರ್ಜುನ

‘ಒತ್ತುವರಿ ಆಗಿದ್ದರೆ ನಾನೇ ಮುಂದೆ ನಿಂತು ತೆರವು ಮಾಡಿಸುತ್ತಿದ್ದೆ. ಯಾವುದೇ ಮಾಹಿತಿ ನೀಡದೆ ಕಟ್ಟಡ ನೆಲಸಮ ಮಾಡಿದ್ದಾರೆ. ಇದರಿಂದ ನಮ್ಮ ಬಗ್ಗೆ ತಪ್ಪು ಸಂದೇಶ ಹೋಗುವಂತೆ ಆಗಿದೆ. ಅಧಿಕಾರಿಗಳ ಈ ಅಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us