ವಿವಾದದಿಂದ ತಪ್ಪಿಸಿಕೊಳ್ಳಲು ವಿಶೇಷ ಹುದ್ದೆ ಸ್ಥಾಪಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು 'ಪುಷ್ಪ 2' ಚಿತ್ರದ ಪ್ರೀಮಿಯರ್ನಲ್ಲಿ ಉಂಟಾದ ವಿವಾದ ಮತ್ತು ತಮ್ಮ ಮೇಲಿನ ತಪ್ಪು ಮಾಹಿತಿಯನ್ನು ತಡೆಯಲು ವಕ್ತಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವಕ್ತಾರರು ಅವರ ಮುಂದಿನ ಚಿತ್ರಗಳು ಮತ್ತು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ತ್ರಿವಿಕ್ರಂ ಶ್ರೀನಿವಾಸ್ ಜೊತೆಗಿನ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿಯನ್ನು ಮಾರ್ಚ್ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಅಲ್ಲು ಅರ್ಜುನ್ ಅವರು ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಪುಷ್ಪ 2’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕೊಟ್ಟಿತು ನಿಜ. ಅದೇ ರೀತಿ ಅವರು ಸಾಕಷ್ಟು ತೊಂದರೆ ಕೂಡ ಅನುಭವಿಸಿದರು. ಈ ಚಿತ್ರದ ಪ್ರೀಮಿಯರ್ ಶೋನಿಂದ ಆದ ವಿವಾದ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ‘ಪುಷ್ಪ 2’ ಪ್ರೀಮೀಯರ್ ವೇಳೆ ಆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟು ಅಲ್ಲು ಅರ್ಜುನ್ ಬಂಧನ ಕೂಡ ಆದರು. ಈ ಘಟನೆಯಿಂದ ಅಲ್ಲು ಅರ್ಜುನ್ ಅವರು ಎಚ್ಚೆತ್ತುಕೊಂಡಿದ್ದಾರೆ. ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ರವಾನೆ ಆಗಬಾರದು ಎನ್ನುವ ಕಾರಣಕ್ಕೆ ವಿಶೇಷ ಹುದ್ದೆ ಸ್ಥಾಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಪಕ್ಷಗಳಿಗೆ ಅಥವಾ ಸಂಘಗಳಿಗೆ ವಕ್ತಾರರು ಇರುತ್ತಾರೆ. ಮಾಧ್ಯಮಗಳ ಜೊತೆ ಈ ವಕ್ತಾರರೇ ಮಾತನಾಡುತ್ತಾರೆ. ಈಗ ಅಲ್ಲು ಅರ್ಜುನ್ ಕೂಡ ವಕ್ತಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈಗ ಅವರು ವಕ್ತಾರರನ್ನು ನೇಮಿಸಲಿದ್ದು, ಅಲ್ಲು ಅರ್ಜುನ್ ಬಗ್ಗೆ ಹಾಗೂ ಅವರ ಸಿನಿಮಾಗಳ ಬಗ್ಗೆ ವಕ್ತಾರರೇ ಮಾಹಿತಿ ನೀಡಲಿದ್ದಾರೆ.
ಅಲ್ಲು ಅರ್ಜುನ್ ವಕ್ತಾರರು ಅವರ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಾರೆ. ಅಲ್ಲು ಅರ್ಜುನ್ ಬಗ್ಗೆ ಯಾವುದೇ ವಿಚಾರ ಬಂದರೂ ಅವರೇ ಉತ್ತರ ನೀಡುತ್ತಾರೆ. ಈ ಮೂಲಕ ಅಲ್ಲು ಅರ್ಜುನ್ಗೆ ಮಾಧ್ಯಮದ ಎದುರು ಬರೋದು ಕೂಡ ತಪ್ಪಲಿದೆ. ಮಾರ್ಚ್ನಿಂದ ಇದು ಜಾರಿಗೆ ಬರೋ ಸಾಧ್ಯತೆ ಇದೆ. ‘ತಾಂಡೇಲ್’ ಚಿತ್ರದ ಪ್ರಚಾರದ ವೇಳೆ ಅಲ್ಲು ಅರ್ಜುನ್ ಆಪ್ತ, ನಿರ್ಮಾಪಕ ಬನ್ನಿ ವಾಸ್ ಈ ವಿಚಾರ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಅನ್ನೇ ಕಬ್ಜಾ ಮಾಡಿದ ಅಲ್ಲು ಅರ್ಜುನ್, ಭೇಷ್ ಎಂದ ಅಭಿಮಾನಿಗಳು
ಅಲ್ಲು ಅರ್ಜುನ್ ಅವರು ತ್ರಿವಿಕ್ರಂ ಶ್ರೀನಿವಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಮಾರ್ಚ್ನಲ್ಲಿ ಅಧಿಕೃತ ಘೋಷಣೆ ಆಗಲಿದೆ. ಇಷ್ಟು ವರ್ಷಗಳ ಕಾಲ ಅಲ್ಲು ಅರ್ಜುನ್ ಅವರು ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರಗಳಿಗೆ ಶ್ರಮಿಸಿದರು. ಈಗ ಹೊಸ ಚಿತ್ರಗಳನ್ನು ಅವರು ಒಪ್ಪಿ ನಟಿಸಬೇಕಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಣದ ಸಿನಿಮಾದಲ್ಲೂ ಅವರು ನಟಿಸಬೇಕಿದೆ. ಆ ಬಳಿಕ ಅವರು ‘ಪುಷ್ಪ 3’ ಕೆಲಸ ಆರಂಭ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Tue, 4 February 25