ಶೀಘ್ರವೇ ಜಪಾನ್​ಗೆ ಹಾರಲಿದೆ ‘ಪುಷ್ಪ 2’ ತಂಡ? ವಿದೇಶದಲ್ಲೂ ಸಾಗಲಿದೆ ಕಥೆ

ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಸೇರಿ ಅನೇಕ ಪ್ರಮುಖರು ಶೀಘ್ರವೇ ಜಪಾನ್ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಕೆಲ ವಿದೇಶಿ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.

ಶೀಘ್ರವೇ ಜಪಾನ್​ಗೆ ಹಾರಲಿದೆ ‘ಪುಷ್ಪ 2’ ತಂಡ? ವಿದೇಶದಲ್ಲೂ ಸಾಗಲಿದೆ ಕಥೆ
ಅಲ್ಲು ಅರ್ಜುನ್
Edited By:

Updated on: Feb 03, 2024 | 9:50 AM

‘ಪುಷ್ಪ 2’ ಸಿನಿಮಾ (Pushpa 2 Movie) ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ. ಈ ಸಿನಿಮಾ ಕುರಿತು ದಿನ ಕಳೆದಂತೆ ಹೊಸ ಹೊಸ ಅಪ್​​ಡೇಟ್​ಗಳು ಸಿಗುತ್ತಲೇ ಇವೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಮುಂದಿನ ಹಂತದ ಶೂಟಿಂಗ್ ನಡೆಯೋದು ಜಪಾನ್​ನಲ್ಲಿ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

‘ಪುಷ್ಪ 2’ ಚಿತ್ರಕ್ಕೆ ‘ಪುಷ್ಪ: ದಿ ರೂಲ್ ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ (ಅಲ್ಲು ಅರ್ಜುನ್) ಈಗ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾನೆ. ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್​ಪಿನ್. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್​ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಸಾಗಲಿದೆ ಎನ್ನಲಾಗಿದೆ.

ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಸೇರಿ ಅನೇಕ ಪ್ರಮುಖರು ಶೀಘ್ರವೇ ಜಪಾನ್​ಗೆ ಪ್ರಯಾಣ ಬೆಳೆಸಲಿದ್ದಾರಂತೆ. ಅಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಕೆಲ ವಿದೇಶಿ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಮತ್ತಷ್ಟು ಸ್ಟ್ರಾಂಗ್ ಆಗಿ ತೋರಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ.

ಚಿತ್ರತಂಡದವರಿಗೆ ಆಗಿತ್ತು ಚಿಂತೆ

ಕಥಾ ನಾಯಕನ ಗೆಳೆಯನಾಗಿ ಜಗದೀಶ್ ಅವರು ನಟಿಸಿದ್ದರು. ಆದರೆ, ಅವರು ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಜೈಲು ಸೇರಿದ್ದರು. ಇದರಿಂದ ಅವರ ಭಾಗದ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಸುಮಾರು ಎರಡು ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ಜಗದೀಶ್ ಅವರು ಮರಳಿ ಬಂದಿದ್ದಾರೆ. ಜಾಮೀನು ಪಡೆದು ಇತ್ತೀಚೆಗೆ ಅವರು ಬಿಡುಗಡೆ ಆಗಿದ್ದಾರೆ. ಅವರ ಭಾಗದ ಶೂಟಿಂಗ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಅರೆಸ್ಟ್​ ಆಗಿದ್ದ ‘ಪುಷ್ಪ 2’ ಚಿತ್ರದ ನಟ ಜಗದೀಶ್​ ಮತ್ತೆ ಶೂಟಿಂಗ್​ ಸೆಟ್​ಗೆ ಹಾಜರಿ

‘ಪುಷ್ಪ’ ಯಶಸ್ಸು

‘ಪುಷ್ಪ’ ಸಿನಿಮಾಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಹೀಗಾಗಿ, ‘ಪುಷ್ಪ 2’ ಚಿತ್ರದ ಬಗ್ಗೆ ನಿರ್ದೇಶಕ ಸುಕುಮಾರ್ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ದೊಡ್ಡ ಪಾತ್ರವರ್ಗದೊಂದಿಗೆ ಈ ಚಿತ್ರವನ್ನು ಶೂಟ್ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ. ಕಾರಣಾಂತರಗಳಿಂದ ಸಿನಿಮಾ ಕೆಲಸಗಳು ವಿಳಂಬ ಆಗಿದ್ದವು. ಹೀಗಾಗಿ, ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಈ ಅನುಮಾನವನ್ನು ತಂಡ ಪರಿಹಾರ ಮಾಡಿತ್ತು. ಇತ್ತೀಚೆಗೆ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಯಿತು. ಈ ಪೋಸ್ಟರ್​ನಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಆಗಸ್ಟ್ 15 ಎಂದೇ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:53 am, Sat, 3 February 24