ಸಿದ್ಧಾರ್ಥ್-ಜೆನಿಲಿಯಾ ನಟನೆಯ ‘ಬೊಮ್ಮರಿಲ್ಲು’ ಸಿನಿಮಾ ತೆಲುಗು ಚಿತ್ರರಂಗದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲಿ ಒಂದು. ಇದು ಕೇವಲ ಪ್ರೇಮಕಥಾ ಸಿನಿಮಾ ಮಾತ್ರವಲ್ಲ, ಪ್ರೇಮಕತೆಯ ಮೂಲಕ ಅಪ್ಪ ಹಾಗೂ ಮಗನ ನಡುವಿನ ಬಾಂಧವ್ಯದ ಕತೆ, ಪ್ರತಿ ಅಪ್ಪ-ಮಗನ ನಡುವೆ ಇರುವ ಅಂತರದ ಬಗ್ಗೆ ಭಿನ್ನಾಭಿಪ್ರಾಯಗಳ ಕತೆ ಹೇಳಿತ್ತು. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದಿದ್ದರೂ ಭಾರಿ ಯಶಸ್ಸನ್ನು ಗಳಿಸಿದ ಸಿನಿಮಾ ಆಗಿತ್ತು ‘ಬೊಮ್ಮರಿಲ್ಲು’. ಈ ಬ್ಲಾಕ್ ಬಸ್ಟರ್ ಸಿನಿಮಾ ಇತ್ತಿಚೆಗೆ ಮರು ಬಿಡುಗಡೆ ಆಗಿದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿದೆ. ಆದರೆ ಈ ಸಿನಿಮಾದ ನಾಯಕ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಸಿಕ್ಕಿದ್ದು ಜೂ ಎನ್ಟಿಆರ್ಗೆ ಆದರೆ ಆ ಸಿನಿಮಾವನ್ನು ಬಹಳ ಬೇಸರದಿಂದ ಕೈಬಿಟ್ಟರು, ಅದಕ್ಕೆ ಕಾರಣವೂ ಇದೆ.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಜೂ ಎನ್ಟಿಆರ್, ‘ಯಾವುದಾದರೂ ಸಿನಿಮಾದಿಂದ ನನ್ನ ಇಮೇಜಿಗೆ ಸಮಸ್ಯೆಯಾದರೆ ನನಗೆ ಅದು ಬಹಳ ಬೇಸರ ಆಗುವುದಿಲ್ಲ, ಆದರೆ ನನ್ನ ಇಮೇಜಿನ ಭಾರದಿಂದ ಸಿನಿಮಾಕ್ಕೆ ಸಮಸ್ಯೆಯಾದರೆ, ಅದು ಕೊಡಬೇಕಾದ ಸಂದೇಶವನ್ನು ಕೊಡದೇ ಹೋದರೆ ನನಗೆ ಬಹಳ ಬೇಸರವಾಗುತ್ತದೆ. ಇದೇ ಕಾರಣದಿಂದ ನಾನು ‘ಬೊಮ್ಮರಿಲ್ಲು’ ಅನ್ನುವ ಸುಂದರವಾದ ಸಿನಿಮಾವನ್ನು ಕಳೆದುಕೊಳ್ಳಬೇಕಾಯ್ತು’ ಎಂದಿದ್ದಾರೆ ಜೂ ಎನ್ಟಿಆರ್.
ಇದನ್ನೂ ಓದಿ:ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?
‘ಬೊಮ್ಮರಿಲ್ಲು’ ಸಿನಿಮಾದ ಅವಕಾಶ ಮೊದಲಿಗೆ ಜೂ ಎನ್ಟಿಆರ್ಗೆ ನೀಡಲಾಯ್ತಂತೆ. ಅದಾಗಲೆ ದೊಡ್ಡ ಸ್ಟಾರ್ ನಟ, ಆಕ್ಷನ್ ಹೀರೋ ಎಂದೆಲ್ಲ ಅನಿಸಿಕೊಂಡಿದ್ದ ಜೂ ಎನ್ಟಿಆರ್ ಇಮೇಜಿಗೆ, ಅಪ್ಪ-ಮಗನ ಸಂಬಂಧದ ಸೂಕ್ಷ್ಮ ವಿಷಯ ಹೊಂದಿದ್ದು, ಮೆದು ಪ್ರೇಮಕತೆಯ, ಯಾವುದೇ ಆಕ್ಷನ್ ಇಲ್ಲದ ‘ಬೊಮ್ಮರಿಲ್ಲು’ ಸಿನಿಮಾ ಸೂಟ್ ಆಗುವುದಿಲ್ಲ. ಒಂದೊಮ್ಮೆ ಜೂ ಎನ್ಟಿಆರ್ ‘ಬೊಮ್ಮರಿಲ್ಲು’ ಸಿನಿಮಾದಲ್ಲಿ ನಟಿಸಿದರೆ ಅವರ ಇಮೇಜಿಗೆ ತಕ್ಕಂತೆ ಕತೆ ಬದಲಾವಣೆ ಮಾಡಿದರೆ ಕತೆಯ ಗುಣಮಟ್ಟ ಕೆಡುತ್ತದೆ, ನೀಡಬೇಕಾದ ಸಂದೇಶ ನೀಡುವುದಿಲ್ಲ ಎಂದು ನಿರ್ಧರಿಸಿ ಸಿನಿಮಾವನ್ನು ಜೂ ಎನ್ಟಿಆರ್ ಕೈಬಿಟ್ಟರಂತೆ. ಆ ಸಿನಿಮಾ ಸಿದ್ಧಾರ್ಥ್ ಕೈಗೆ ಹೋಗಿ ಬ್ಲಾಕ್ ಬಸ್ಟರ್ ಆಯ್ತು. ಸಿದ್ಧಾರ್ಥ್, ಜೆನಿಲಿಯಾ ಜೀವನದಲ್ಲಿ ಮಾತ್ರವೇ ತೆಲಗು ಚಿತ್ರರಂಗದಲ್ಲಿಯೇ ಅತ್ಯುತ್ತಮ ಸಿನಿಮಾ ಆಯ್ತು.
ಇತ್ತೀಚೆಗಷ್ಟೆ ‘ಬೊಮ್ಮರಿಲ್ಲು’ ಸಿನಿಮಾ ಮರು ಬಿಡುಗಡೆ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಮತ್ತೊಮ್ಮೆ ‘ಬೊಮ್ಮರಿಲ್ಲು’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಕುಣಿದಿದ್ದಾರೆ, ಡೈಲಾಗ್ಗಳಲ್ಲಿ ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಮರು ಬಿಡುಗಡೆಯಲ್ಲಿಯೂ ಸಿನಿಮಾ ಹಿಟ್ ಎನಿಸಿಕೊಂಡಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ