
ನೀಮ್ ಕರೌಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕೇವಲ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಭಕ್ತಿ ಪ್ರಧಾನ ಸಿನಿಮಾ ಈಗ ಬರೋಬ್ಬರಿ 268 ಕೋಟಿ ರೂಪಾಯಿ ಗಳಿಸಿದೆ. ಹಾಕಿದ ಬಂಡವಾಳಕ್ಕಿಂತ 134 ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆ. ಈ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಸಿನಿಮಾಗೆ ‘ರಾಮ್ಬೋಲ’ ಎಂದು ಹೆಸರಿಟ್ಟಿದ್ದಾರೆ. ಇದು ಮಹಾನ್ ಕವಿ ಮತ್ತು ಸಂತ ಗೋಸ್ವಾಮಿ ತುಳಸಿದಾಸರ ಜೀವನ ಆಧಾರಿತ ಚಿತ್ರವಾಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಹಾವೀರ್ ಜೈನ್, ವಿಶಾಲ್ ಚತುರ್ವೇದಿ, ಅಮಿತ್ ಉಪಾಧ್ಯಾಯ ಹಾಗೂ ರಘುವೇಂದ್ರ ಸಿಂಗ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಗೋಸ್ವಾಮಿ ತುಳಸಿದಾಸರು 16ನೇ ಶತಮಾನದ ಅತ್ಯಂತ ಪ್ರಸಿದ್ಧ ಸಂತ ಮತ್ತು ಕವಿಯಾಗಿದ್ದರು. ಅವರು ಮಹಾಕಾವ್ಯ ರಾಮಾಯಣವನ್ನು ‘ರಾಮಚರಿತಮಾನಸ’ ಹೆಸರಿನಲ್ಲಿ ರಚಿಸಿದರು. ಇದರ ಜೊತೆಗೆ ವಿನಯ ಪತ್ರಿಕಾ, ಕವಿತಾವಳಿ, ಗೀತಾವಳಿ ಹಾಗೂ ದೋಹಾವಳಿ ಮುಂತಾದ ಶ್ರೇಷ್ಠ ಕೃತಿಗಳನ್ನು ಬರೆದಿದ್ದಾರೆ. ಇಂದಿಗೂ ಅವರ ಭಕ್ತಿ ಸಾಹಿತ್ಯ ಪ್ರತಿಯೊಬ್ಬ ಭಾರತೀಯನ ಮನದಲ್ಲಿದೆ.
ಇನ್ನು ‘ಹನುಮಾನ್ ಅಂಶ್’ ಸಿನಿಮಾದಲ್ಲಿ ಶೋಭಿನವ್ ಸತ್ಯ ಮತ್ತು ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೀಮ್ ಕರೌಲಿ ಬಾಬಾ ಅವರನ್ನು ಭಕ್ತರು ಭಗವಾನ್ ಹನುಮಂತನ ಅವತಾರ ಎಂದು ಪೂಜಿಸುತ್ತಾರೆ. ಅವರ ಪ್ರೀತಿ, ಭಕ್ತಿ ಮತ್ತು ಸೇವೆಯ ಸಂದೇಶಗಳು ವಿಶ್ವಪ್ರಸಿದ್ಧವಾಗಿವೆ. 1960 ಮತ್ತು 70ರ ದಶಕದಲ್ಲಿ ಅನೇಕ ವಿದೇಶಿಯರು ಅವರ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು.
ಇದನ್ನೂ ಓದಿ: 200 ಕೋಟಿ ರೂ. ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾಗೆ 21ರ ಪ್ರಾಯದ ನಿರ್ಮಾಪಕಿ
ಆರಂಭದಲ್ಲಿ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಂದಗತಿಯ ಪ್ರದರ್ಶನ ಕಂಡಿತ್ತು. ಆದರೆ ಮೂರನೇ ವಾರದಿಂದ ಚಿತ್ರ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿತು. ಭಾರತದಲ್ಲೇ ಈ ಸಿನಿಮಾ 214.63 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಪ್ರಪಂಚದಾದ್ಯಂತ ಒಟ್ಟು 268 ಕೋಟಿ ರೂಪಾಯಿ ಸಂಗ್ರಹಿಸಿ ಹೊಸ ದಾಖಲೆ ಬರೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.