ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ಅಕ್ಷಯ್​ ಕುಮಾರ್​

|

Updated on: Feb 15, 2024 | 2:39 PM

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ಅಪಾರ ದೈವ ಭಕ್ತಿ ಇದೆ. ಅಬು ಧಾಬಿಯಲ್ಲಿ ಉದ್ಘಾಟನೆಯಾದ ಮೊದಲ ಹಿಂದೂ ದೇವಾಲಯಕ್ಕೆ ಅವರು ಭೇಟಿ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ಅವರು ಅಲ್ಲಿನ ಫೋಟೋವನ್ನು ಕಂಚಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಈ ದೇವಾಲಯದ ಉದ್ಘಾಟನೆ ಮಾಡಿದ್ದಾರೆ.

ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​, ಅಬು ಧಾಬಿಯಲ್ಲಿ ಹಿಂದೂ ದೇವಸ್ಥಾನ
Follow us on

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿ ಕೆಲವೇ ದಿನಗಳ ಕಳೆದಿವೆ. ಅದರ ಬೆನ್ನಲ್ಲೇ ಇನ್ನೊಂದು ಐತಿಹಾಸಿಕ ಘಟನೆ ನಡೆದಿದೆ. ಅಬು ಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ (Hindu Temple in Abu Dhabi) ನಿರ್ಮಾಣ ಆಗಿದೆ. ಇದನ್ನು ಬುಧವಾರ (ಫೆಬ್ರವರಿ 14) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಿದ್ದಾರೆ. ನಟ ಅಕ್ಷಯ್​ ಕುಮಾರ್​ ಅವರು ಈ ದೇವಾಲಯಕ್ಕೆ ಅತಿಥಿಯಾಗಿ ತೆರಳಿದ್ದಾರೆ. ಯುನೈಟೆಡ್​ ಅರಬ್​ ಎಮಿರೈಟ್ಸ್​ನ ರಾಜಧಾನಿಯಾದ ಅಬು ಧಾಬಿಯಲ್ಲಿ ಮೊದಲ ಬಾರಿಗೆ ಹಿಂದೂ ದೇವಾಲಯ ನಿರ್ಮಾಣ ಆಗಿದ್ದಕ್ಕೆ ಅಕ್ಷಯ್​ ಕುಮಾರ್ (Akshay Kumar)​ ಸಂತಸ ವ್ಯಕ್ತಪಡಿಸಿದ್ದಾರೆ. ಈ ದೇವಸ್ಥಾನದ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್​ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಅಬು ಧಾಬಿಯ ಸ್ವಾಮಿನಾರಾಯಣ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಕ್ಕೆ ನಾನು ಧನ್ಯ. ಎಂಥ ಐತಿಹಾಸಿಕ ಕ್ಷಣ’ ಎಂದು ಅಕ್ಷಯ್​ ಕುಮಾರ್​ ಅವರು ಬರೆದುಕೊಂಡಿದ್ದಾರೆ. ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನರು ಫೋಟೋವನ್ನು ಲೈಕ್​ ಮಾಡಿದ್ದಾರೆ. ಈ ಫೋಟೋದ ಗಾಜಿನಲ್ಲಿ ಅಕ್ಷಯ್​ ಕುಮಾರ್​ ಅವರ ಪ್ರತಿಬಿಂಬ ಕಾಣಿಸಿದೆ. ಅದನ್ನು ನೋಡಿ ಫ್ಯಾನ್ಸ್​ ಕಮೆಂಟ್​ ಮಾಡಿದ್ದಾರೆ. ಅಬು ಧಾಬಿಗೆ ಅಕ್ಷಯ್​ ಕುಮಾರ್​ ಭೇಟಿ ನೀಡಿದ ಸಂದರ್ಭದ ವಿಡಿಯೋ ಕೂಡ ವೈರಲ್​ ಆಗಿವೆ.

ಅಕ್ಷಯ್​ ಕುಮಾರ್ ಇನ್​ಸ್ಟಾಗ್ರಾಮ್​ ಪೋಸ್ಟ್​:

ಅಕ್ಷಯ್​ ಕುಮಾರ್​ ಜೊತೆ ನಿರ್ದೇಶಕ ಮಧುರ್​ ಬಂಡಾರ್ಕರ್​, ಗಾಯಕ ಶಂಕರ್​ ಮಹದೇವನ್​, ನಟ ವಿವೇಕ್​ ಒಬೆರಾಯ್​ ಕೂಡ ಈ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ‘ಇದನ್ನು ನಾನು ಕನಸಿನಲ್ಲಷ್ಟೇ ಕಾಣಬಹುದು. ಆ ಕನಸು ಈಗ ನನಸಾಗಿದೆ. ಇಲ್ಲಿ ಒಂದು ಸುಂದರವಾದ ಮಂದಿರ ನಿರ್ಮಾಣ ಆಗಿದೆ. ಅದು ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ ಆಗಿದೆ. ನಮ್ಮ ಸಂಸ್ಕೃತಿಯ ಜೊತೆ ಯುಎಇ ಸರ್ಕಾರ ಕೈ ಜೋಡಿಸಿರುವುದು ಗ್ರೇಟ್​’ ಎಂದು ಶಂಕರ್​ ಮಹದೇವನ್​ ಹೇಳಿದ್ದಾರೆ.

ಇದನ್ನೂ ಓದಿ: 2024ರಲ್ಲಿ 102 ದಿನ ರಜೆ ಪಡೆಯಲಿರುವ ಅಕ್ಷಯ್​ ಕುಮಾರ್​; ಇಲ್ಲಿದೆ ನೋಡಿ ಪ್ಲ್ಯಾನ್​

ದೇವಾಲಯದ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?
‘ಇಲ್ಲಿಯವರೆಗೆ ಯುಎಇ ಎಂದರೆ ಬುರ್ಜ್​ ಖಲೀಫಾ, ಫ್ಯೂಚರ್​ ಮ್ಯೂಸಿಯಂ, ಹೈಟೆಕ್​ ಬಿಲ್ಡಿಂಗ್​ಗಳಿಗೆ ಹೆಸರುವಾಸಿ ಆಗಿತ್ತು. ಈಗ ಅದರ ಅಸ್ಮಿತೆಗೆ ಒಂದು ಹೊಸ ಸಾಂಸ್ಕೃತಿಕ ಅಧ್ಯಾಯ ಆರಂಭ ಆಗಿದೆ. ಮುಂದಿನ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಯುಎಇಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಲಿದೆ. ವಿಶ್ವಾದ್ಯಂತ ಇರುವ ಭಾರತೀಯರ ಪರವಾಗಿ, ಯುಎಇ ಅಧ್ಯಕ್ಷರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ದೇವಸ್ಥಾನದ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:36 pm, Thu, 15 February 24