ಅಕ್ಷಯ್ ಕುಮಾರ್ ಶಿವಲಿಂಗ ತಬ್ಬಿಕೊಂಡಿದ್ದಕ್ಕೆ ಕಿರಿಕ್; ಸ್ಪಷ್ಟನೆ ನೀಡಿದ ನಟ
ಅಕ್ಷಯ್ ಕುಮಾರ್ ಅವರು ‘ಮಹಾಕಾಲ್ ಚಲೋ’ ಹಾಡಿನಲ್ಲಿ ಶಿವಲಿಂಗವನ್ನು ತಬ್ಬಿಕೊಂಡಿದ್ದಾರೆ. ಆ ದೃಶ್ಯಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆ ವಿವಾದದ ಬಗ್ಗೆ ಅಕ್ಷಯ್ ಕುಮಾರ್ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ‘ಕಣ್ಣಪ್ಪ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ನಟ ಅಕ್ಷಯ್ ಕುಮಾರ್ (Akshay Kumar) ಅವರು ಮಾಡಿದ ಯಾವ ಸಿನಿಮಾಗಳೂ ಇತ್ತೀಚೆಗೆ ಕೈ ಹಿಡಿದಿಲ್ಲ. ಸದ್ಯಕ್ಕೆ ಅವರ ಟೈಮ್ ಚೆನ್ನಾಗಿಲ್ಲ ಎನಿಸುತ್ತದೆ. ಸಿನಿಮಾ ಮಾತ್ರವಲ್ಲದೇ ಭಕ್ತಿಗೀತೆಯಲ್ಲಿ ನಟಿಸಿದರೆ ಅದು ಕೂಡ ವಿವಾದಕ್ಕೆ ಕಾರಣ ಆಗಿದೆ. ಕೆಲವೇ ದಿನಗಳ ಹಿಂದೆ ಅಕ್ಷಯ್ ಕುಮಾರ್ ಅವರು ‘ಮಹಾಕಾಲ್ ಚಲೋ’ ಹಾಡನ್ನು ಬಿಡುಗಡೆ ಮಾಡಿದರು. ಈ ಸಾಂಗ್ ನೋಡಿದ ಕೆಲವರು ತಕರಾರು ತೆಗೆದರು. ಆ ವಿವಾದದ ಬಗ್ಗೆ ಈಗ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಶಿವಲಿಂಗವನ್ನು ತಬ್ಬಿಕೊಂಡಿದ್ದರಲ್ಲಿ ತಮ್ಮ ತಪ್ಪು ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
‘ಮಹಾಕಾಲ್ ಚಲೋ’ ಹಾಡಿನಲ್ಲಿ ಅಕ್ಷಯ್ ಕುಮಾರ್ ಅವರು ಶಿವಲಿಂಗವನ್ನು ತಬ್ಬಿಕೊಂಡಿದ್ದಾರೆ. ಈ ಹಾಡು ನೋಡಿದ ಅರ್ಚಕರ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸಿದೆ. ಹಾಡು ಚೆನ್ನಾಗಿದೆ, ಆದರೆ ಅಕ್ಷಯ್ ಕುಮಾರ್ ಅವರು ಶಿವಲಿಂಗವನ್ನು ತಬ್ಬಿಕೊಂಡಿದ್ದು ಸರಿಯಲ್ಲ ಎಂದು ಕಿರಿಕ್ ಮಾಡಲಾಯಿತು. ಅಲ್ಲದೇ ಈ ಹಾಡಿನಲ್ಲಿ ಭಸ್ಮವನ್ನು ಬಳಸಿದ ವಿಧಾನ ಕೂಡ ತಪ್ಪಾಗಿದೆ ಎಂದು ಹೇಳಲಾಯಿತು.
ಇದಕ್ಕೆಲ್ಲ ಅಕ್ಷಯ್ ಕುಮಾರ್ ಅವರು ಉತ್ತರ ನೀಡಿದ್ದಾರೆ. ಇತ್ತೀಚೆಗೆ ಅವರು ‘ಕಣ್ಣಪ್ಪ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದರು. ಈ ಚಿತ್ರದಲ್ಲಿ ಕೂಡ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ‘ಬಾಲ್ಯದಿಂದಲೂ ದೇವರೇ ನಮ್ಮ ತಂದೆ-ತಾಯಿ ಎಂಬುದನ್ನು ಪೋಷಕರು ನಮಗೆ ಹೇಳಿಕೊಟ್ಟಿದ್ದಾರೆ. ನಿಮ್ಮ ಪೋಷಕರನ್ನು ನೀವು ತಬ್ಬಿಕೊಂಡರೆ ಅದರಲ್ಲಿ ತಪ್ಪೇನಿದೆ’ ಎಂದು ಅಕ್ಷಯ್ ಕುಮಾರ್ ಅವರು ಮರುಪ್ರಶ್ನೆ ಹಾಕಿದ್ದಾರೆ.
ಇದನ್ನೂ ಓದಿ: ‘ನಾನು ಬೆಳಿಗ್ಗೆ ಬೇಗ ಏಳೋದೇ ಸಮಸ್ಯೆನಾ’; ಅಕ್ಷಯ್ ಕುಮಾರ್ ನೇರ ಪ್ರಶ್ನೆ
‘ನನಗೆ ದೇವರಿಂದ ಶಕ್ತಿ ಬರುತ್ತದೆ. ಯಾರಾದರೂ ನನ್ನ ಭಕ್ತಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದರಲ್ಲಿ ನನ್ನ ತಪ್ಪು ಏನೂ ಇಲ್ಲ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ದೇವರ ಬಗ್ಗೆ ಅವರಿಗೆ ಅಪಾರವಾದ ಭಕ್ತಿ ಇದೆ. ಇತ್ತೀಚೆಗೆ ಅವರು ಮಹಾಕುಂಭಮೇಳಕ್ಕೆ ಭೇಟಿ ನೀಡಿದರು. ಅಲ್ಲಿನ ವ್ಯವಸ್ಥೆ ನೋಡಿ ಮೆಚ್ಚಿಕೊಂಡರು. 45 ದಿನಗಳಲ್ಲಿ 60 ಕೋಟಿ ಜನರನ್ನು ಹ್ಯಾಂಡಲ್ ಮಾಡಬಲ್ಲ ದೇಶ ಬೇರೆ ಯಾವುದೂ ಇಲ್ಲ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಮಹಾಕುಂಭಮೇಳದ ನನ್ನ ಅನುಭವ ಚೆನ್ನಾಗಿತ್ತು’ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.