AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ನನ್ನ ಬಿಟ್ಟು ಹೋದರು’; ಅರ್ಜುನ್ ರಾಂಪಾಲ್ ಬದುಕಿನ ಕರಾಳ ಮುಖ

ನಟ ಅರ್ಜುನ್ ರಾಂಪಾಲ್ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಾಯಿ ಕ್ಯಾನ್ಸರ್‌ನಿಂದ ಹೋರಾಡುತ್ತಿದ್ದಾಗ, ಮೊದಲ ಪತ್ನಿಯೊಂದಿಗಿನ ವಿಚ್ಛೇದನ ಅವರನ್ನು ಕುಗ್ಗಿಸಿತ್ತು. ಈ ಕಷ್ಟದ ಪರಿಸ್ಥಿತಿಯಲ್ಲಿ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಕೈ ಹಿಡಿದು, ಮಗ ಅರಿಕ್‌ನ ಆಗಮನ ಅವರ ಬದುಕಿಗೆ ಹೊಸ ತಿರುವು ನೀಡಿತು. ಸ್ವಯಂ ಆತ್ಮಾವಲೋಕನದಿಂದ ಎದುರಾದ ಸವಾಲುಗಳನ್ನು ನಿವಾರಿಸಿಕೊಂಡು, ತಮ್ಮ ಡಿಜೆ ಕನಸನ್ನೂ ನನಸಾಗಿಸಿಕೊಂಡಿದ್ದಾರೆ.

‘ಎಲ್ಲರೂ ನನ್ನ ಬಿಟ್ಟು ಹೋದರು’; ಅರ್ಜುನ್ ರಾಂಪಾಲ್ ಬದುಕಿನ ಕರಾಳ ಮುಖ
ಅರ್ಜುನ್ ರಾಂಪಾಲ್
ರಾಜೇಶ್ ದುಗ್ಗುಮನೆ
|

Updated on: Jun 10, 2026 | 7:15 AM

Share

ನಟನೆಯ ಜೊತೆಗೆ ಅದ್ಭುತ ಡಿಜೆ ಆಗಿಯೂ ಗುರುತಿಸಿಕೊಂಡು ಮ್ಯೂಸಿಕ್ ಲೋಕದಲ್ಲೂ ಸಖತ್ ಆಕ್ಟಿವ್ ಆಗಿರುವ ಅರ್ಜುನ್ ರಾಂಪಾಲ್ (Arjun Rampal), ಇತ್ತೀಚೆಗೆ ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಏರಿಳಿತಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅರ್ಜುನ್ ರಾಂಪಾಲ್ ಅವರ ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಸಮಯದಲ್ಲೇ, ಅವರ ಮೊದಲ ಪತ್ನಿ ಮೆಹರ್ ಜೆಸಿಯಾ ಜೊತೆಗಿನ ದಾಂಪತ್ಯ ಜೀವನ ಕೂಡ ಮುರಿದುಬಿದ್ದಿತ್ತು. ಆ ದಿನಗಳಲ್ಲಿ ಅರ್ಜುನ್ ರಾಂಪಾಲ್ ಕುಗ್ಗಿ ಹೋದರು.

‘ಅದು ನನ್ನ ಜೀವನದ ಅತ್ಯಂತ ಕರಾಳ ಮತ್ತು ಒಂಟಿತನದ ಹಂತವಾಗಿತ್ತು. ಒಂದು ಕಡೆ ನನ್ನ ಸಂಸಾರ ಮುರಿದುಬೀಳುತ್ತಿತ್ತು. ಮತ್ತೊಂದೆಡೆ ತಾಯಿ ಕ್ಯಾನ್ಸರ್‌ನಿಂದಾಗಿ ಸಾವಿನ ದವಡೆಯಲ್ಲಿದ್ದರು. ನನಗಿಂತ ಮೂರು ವರ್ಷಗಳ ಮುನ್ನವೇ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ಆಪ್ತರು, ಸ್ನೇಹಿತರು ಹಾಗೂ ನಾನು ಕಷ್ಟಪಟ್ಟು ಗಳಿಸಿದ ಎಲ್ಲವೂ ನನ್ನಿಂದ ದೂರವಾಗುತ್ತಿತ್ತು’ ಎಂದು ಆ ದಿನಗಳ ನೋವನ್ನು ಹಂಚಿಕೊಂಡಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅರ್ಜುನ್ ರಾಂಪಾಲ್ ಕೈಹಿಡಿದಿದ್ದು ಅವರ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್. ಗೇಬ್ರಿಯೆಲಾ ಕೂಡ ಆ ಸಮಯದಲ್ಲಿ ಒಂದು ಕಷ್ಟದ ಹಂತದಲ್ಲಿದ್ದರಂತೆ. ಆ ಬಳಿಕ ಇಬ್ಬರೂ ಮದುವೆ ಆದರು. ‘ನಾವಿಬ್ಬರೂ ಒಂದೇ ರೀತಿಯ ಪರಿಸ್ಥಿತಿಯಲ್ಲಿ ಇದ್ದೆವು. ಆದರೆ ಆ ಪರಿಸ್ಥಿತಿಯನ್ನು ಜೊತೆಯಾಗಿ ಎದುರಿಸಿದೆವು. ನನ್ನ ತಾಯಿ ತೀರಿಕೊಂಡಾಗ ನಾನು ತೀವ್ರ ನೊಂದಿದ್ದೆ. ಆದರೆ ಆ ಬಳಿಕ ಮಗ ಅರಿಕ್ ನನ್ನ ಜೀವನಕ್ಕೆ ಬಂದಿದ್ದೇ ಒಂದು ದೊಡ್ಡ ಆಶೀರ್ವಾದ. ಅಲ್ಲಿಂದ ನನ್ನ ಜೀವನ ಸಂಪೂರ್ಣ 180 ಡಿಗ್ರಿ ಬದಲಾಯಿತು’ ಎಂದು ಅರ್ಜುನ್ ಹೇಳಿದ್ದಾರೆ.

‘ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಾಗ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಷ್ಟ ಬಂದಾಗ ಬೇರೆಯವರನ್ನು ದೂಷಿಸುತ್ತಾ ಕೂರಬಾರದು. ಹಾಗೆ ಮಾಡಿದರೆ ನಾವು ಮತ್ತಷ್ಟು ದುರ್ಬಲರಾಗುತ್ತೇವೆ. ನನ್ನಲ್ಲಿ ಏನು ತಪ್ಪುಗಳಿದ್ದವು, ನಾನು ಎಲ್ಲಿ ಅಸಡ್ಡೆ ತೋರಿದ್ದೆ ಎಂಬುದನ್ನು ಒಪ್ಪಿಕೊಂಡು, ಅದನ್ನು ತಿದ್ದಿಕೊಳ್ಳಲು ನಾನು ನಿರ್ಧರಿಸಿದೆ’ ಎಂದು ಅರ್ಜುನ್ ರಾಂಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

ಅರ್ಜುನ್ ರಾಂಪಾಲ್ ಅವರಿಗೆ ಡಿಜೆ ಆಗಬೇಕು ಎಂಬ ಕನಸು ಮೊದಲಿನಿಂದಲೂ ಇತ್ತು. ಸಿನಿಮಾ ಆಫರ್ ಕಡಿಮೆ ಆದ ಬಳಿಕ ಅವರು ತಮ್ಮ ಪ್ಯಾಷನ್ ಅನುಸರಿಸಿದರು. ಅವರು ಡಿಜೆ ಆಗಿಯೂ ಕೆಲಸ ಮಾಡುತ್ತಿದ್ದಾರೆ. ‘ಧುರಂಧರ್ 2’ ಸಿನಿಮಾದಲ್ಲಿ ಮೇಜರ್ ಇಕ್ಬಾಲ್ ಆಗಿ ಅವರು ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More