ಲತಾಜೀ ಮೃತದೇಹಕ್ಕೆ ಶಾರುಖ್​ ಉಗಿದರು ಎಂಬ ಆರೋಪ; ವೈರಲ್​ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?

| Updated By: ಮದನ್​ ಕುಮಾರ್​

Updated on: Feb 07, 2022 | 11:53 AM

ಹರಿಯಾಣದ ಬಿಜೆಪಿ ಮುಖಂಡ ಅರುಣ್​ ಯಾದವ್​ ಮಾಡಿದ ಒಂದು ಟ್ವೀಟ್​ನಿಂದಾಗಿ ವಿವಾದ ಹುಟ್ಟಿಕೊಂಡಿದೆ. ಶಾರುಖ್​ ಖಾನ್​ ಪ್ರಾರ್ಥನೆ (ದುವಾ) ಮಾಡಿ, ಮಾಸ್ಕ್​ ತೆಗೆದು ಗಾಳಿ ಊದಿದ ವಿಡಿಯೋ ವೈರಲ್​ ಆಗಿದೆ.

ಲತಾಜೀ ಮೃತದೇಹಕ್ಕೆ ಶಾರುಖ್​ ಉಗಿದರು ಎಂಬ ಆರೋಪ; ವೈರಲ್​ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?
ಲತಾ ಮಂಗೇಶ್ಕರ್​ ಅಂತ್ಯ ಸಂಸ್ಕಾರದಲ್ಲಿ ಶಾರುಖ್​ ಖಾನ್​
Follow us on

ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ (Lata Mangeshkar)​ ಅವರ ನಿಧನದ ಸುದ್ದಿ ಕೇಳಿ ಎಲ್ಲರಿಗೂ ನೋವಾಗಿದೆ. ಬಾಲಿವುಡ್​ ಸೆಲೆಬ್ರಿಟಿಗಳು ಜೊತೆಗೆ ಲತಾಜೀ ಅವರಿಗೆ ಹೆಚ್ಚು ಒಡನಾಟ ಇತ್ತು. ಹಾಗಾಗಿ ಅವರ ಅಂತ್ಯಕ್ರಿಯೆಯಲ್ಲಿ (, Lata Mangeshkar Funeral) ಅನೇಕ ಮಂದಿ ಸ್ಟಾರ್​ ಕಲಾವಿದರು ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಶಾರುಖ್​ ಖಾನ್​, ಆಮಿರ್​ ಖಾನ್​, ರಣಬೀರ್​ ಕಪೂರ್​, ಸಚಿನ್​ ತೆಂಡುಲ್ಕರ್​ ಸೇರಿದಂತೆ ಹಲವರು ಲತಾ ಮಂಗೇಶ್ಕರ್​ಗೆ ಅಂತಿಮ ನಮನ ಸಲ್ಲಿಸಿದರು. ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಭಾನುವಾರ (ಫೆ.6) ಸಂಜೆ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ನಟ ಶಾರುಖ್​ ಖಾನ್​ (Shah Rukh Khan) ನಡೆದುಕೊಂಡ ರೀತಿ ಕೆಲವರಿಗೆ ಅಚ್ಚರಿ ಮೂಡಿಸಿದೆ. ಮ್ಯಾನೇಜರ್​ ಪೂಜಾ ದದ್ಲಾನಿ​ ಜೊತೆ ಬಂದ ಅವರು ಲತಾಜೀ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಅದರ ವಿಡಿಯೋ ಕೂಡ ವೈರಲ್​ ಆಗಿದೆ. ಅಂತಿಮ ನಮನ ಸಲ್ಲಿಸುವ ವೇಳೆ ಲತಾ ಮಂಗೇಶ್ಕರ್​ ಅವರ ಪಾರ್ಥಿವ ಶರೀರದ ಮೇಲೆ ಶಾರುಖ್​ ಉಗಿದರು ಎಂಬ ಆರೋಪವನ್ನು ಕೆಲವರು ಹೊರಿಸಿದ್ದಾರೆ. ಈ ಕುರಿತಂತೆ ಚರ್ಚೆ ಶುರುವಾಗಿದೆ.

ಲತಾ ಮಂಗೇಶ್ಕರ್​ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರುಖ್​ ಖಾನ್​ ಅವರು ಮಾಸ್ಕ್​ ಧರಿಸಿದ್ದರು. ಲೆಜೆಂಡರಿ ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ (ದುವಾ) ಮಾಡಿದರು. ಬಳಿಕ ಮಾಸ್ಕ್​ ತೆಗೆದು  ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರುಖ್​ ಖಾನ್​ ಉಗಿದರು ಎಂದು ಕೆಲವರು ಆರೋಪಿಸಿದ್ದಾರೆ.

ಹರಿಯಾಣದ ಬಿಜೆಪಿ ಮುಖಂಡ ಅರುಣ್​ ಯಾದವ್​ ಮಾಡಿದ ಒಂದು ಟ್ವೀಟ್​ನಿಂದಾಗಿ ವಿವಾದ ಹುಟ್ಟಿಕೊಂಡಿದೆ. ಶಾರುಖ್​ ಪ್ರಾರ್ಥನೆ (ದುವಾ) ಮಾಡಿ, ಮಾಸ್ಕ್​ ತೆಗೆದು ಗಾಳಿ ಊದಿದ ವಿಡಿಯೋವನ್ನು ಅರುಣ್​ ಯಾದವ್​ ​ಶೇರ್​ ಮಾಡಿಕೊಂಡಿದ್ದಾರೆ. ‘ಅವರು ಉಗಿದ್ರಾ’ ಎಂದು ಆ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ. ಇದನ್ನು ನೋಡಿದ ಅನೇಕರು ಶಾರುಖ್​ ವಿರುದ್ಧ ಕಿಡಿ ಕಾರಿದ್ದಾರೆ. ಲೆಜೆಂಡರಿ ಗಾಯಕಿಗೆ ಶಾರುಖ್​ ಅಗೌರವ ತೋರಿದ್ದಾರೆ ಎಂದು ಕೆಲವರು ಗರಂ ಆಗಿದ್ದಾರೆ. ಆದರೆ ಗಾಳಿ ಊದಿದ್ದನ್ನು ತಪ್ಪಾಗಿ ಅರ್ಥೈಸಿ, ವಿವಾದಕ್ಕೆ ಕಾರಣ ಆಗುವಂತೆ ಮಾಡಿದ ಅರುಣ್​ ಯಾದವ್​ ಅವರನ್ನು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಲತಾ ಮಂಗೇಶ್ಕರ್​ ನಿಧನಕ್ಕೆ ಕಾರಣವೇನು?

ಕೊವಿಡ್​ ಮತ್ತು ನ್ಯೂಮೋನಿಯ ಕಾರಣದಿಂದ ಇತ್ತೀಚೆಗೆ ಲತಾ ಮಂಗೇಶ್ಕರ್​ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್​ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:

‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ

ಲತಾ ಮಂಗೇಶ್ಕರ್ ಜತೆ ಬಾಲಿವುಡ್​ ತಾರೆಯರ ಸವಿ ನೆನಪು; ಆ ಕ್ಷಣಗಳನ್ನು ನೆನಪಿಸಿದ ಫೋಟೋಗಳು

Published On - 11:51 am, Mon, 7 February 22