ಗೆಲುವಿಗಾಗಿ ಮತ್ತೊಬ್ಬ ತಮಿಳು ನಿರ್ದೇಶಕನ ಕೈ ಹಿಡಿದ ಸಲ್ಮಾನ್ ಖಾನ್

Salman Khan: ಒಂದು ದೊಡ್ಡ ಹಿಟ್ ಸಿನಿಮಾದ ಹುಡುಕಾಟದಲ್ಲಿರುವ ಸಲ್ಮಾನ್ ಖಾನ್, ಈಗಾಗಲೇ ಒಬ್ಬ ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಮುಂದಿನ ಸಿನಿಮಾ ಸಹ ತಮಿಳು ನಿರ್ದೇಶಕರ ಜೊತೆಗೆ ಕೆಲಸ ಮಾಡಲಿದ್ದಾರೆ.

ಗೆಲುವಿಗಾಗಿ ಮತ್ತೊಬ್ಬ ತಮಿಳು ನಿರ್ದೇಶಕನ ಕೈ ಹಿಡಿದ ಸಲ್ಮಾನ್ ಖಾನ್

Updated on: Nov 28, 2024 | 10:40 AM

ಸತತ ಸೋಲು ಕಾಣುತ್ತಿದ್ದ ಶಾರುಖ್ ಖಾನ್, 2023 ರಲ್ಲಿ ಬರೋಬ್ಬರಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಮುಳುಗುತ್ತಿದ್ದ ಬಾಲಿವುಡ್ ಅನ್ನು ಒಬ್ಬರೇ ಮೇಲಕ್ಕೆತ್ತಿದ್ದಾರೆ. ಆದರೆ ಶಾರುಖ್ ಹೊರತಾಗಿ ಇನ್ನಿಬ್ಬರು ಖಾನ್​ಗಳಿಗೆ ಗೆಲುವು ಇನ್ನೂ ಮರೀಚಿಕೆಯಾಗಿದೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡ’ ಸಿನಿಮಾ ಧಾರುಣ ಸೋಲು ಕಂಡಿದೆ. ಸಲ್ಮಾನ್ ಖಾನ್ ನಟನೆಯ ಸಾಲು-ಸಾಲು ಸಿನಿಮಾಗಳು ಸಾಧಾರಣ ಹಿಟ್ ಎನಿಸಿಕೊಂಡಿವೆ ಅಷ್ಟೆ. ಇದೀಗ ಮತ್ತೆ ಗೆಲುವು ಸಾಧಿಸಲು ಸಲ್ಮಾನ್ ಖಾನ್ ಈಗಾಗಲೇ ಒಬ್ಬ ತಮಿಳು ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ಆ ಸಿನಿಮಾದ ಬಳಿಕ ಮತ್ತೊಂದು ಸಿನಿಮಾವನ್ನೂ ಸಹ ತಮಿಳು ನಿರ್ದೇಶಕನ ಜೊತೆಗೆ ಮಾಡಲಿದ್ದಾರೆ.

ಸಲ್ಮಾನ್ ಖಾನ್ ಪ್ರಸ್ತುತ ‘ಸಿಖಂಧರ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ತಮಿಳಿನಲ್ಲಿ ‘ಗಜಿನಿ’, ‘ತುಪ್ಪಾಕಿ’, ‘ಕತ್ತಿ’, ‘ದರ್ಬಾರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಎಆರ್ ಮುರುಗದಾಸ್ ಅವರು ‘ಸಿಖಂಧರ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇದರ ನಡುವೆ ಇದೀಗ ಮತ್ತೊಬ್ಬ ತಮಿಳು ನಿರ್ದೇಶಕನ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಸಲ್ಮಾನ್ ಖಾನ್.

ಶಾರುಖ್ ಖಾನ್​ಗೆ ಕಳೆದ ವರ್ಷ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ಅಟ್ಲಿಯ ಹೊಸ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಶಾರುಖ್ ಖಾನ್​ಗಾಗಿ ‘ಜವಾನ್’ ಸಿನಿಮಾ ನಿರ್ದೇಶಿಸಿದ್ದ ಅಟ್ಲಿ ಈಗ ಸಲ್ಮಾನ್ ಖಾನ್​ಗಾಗಿ ಭಿನ್ನ ಆಕ್ಷನ್ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ. ಸಿನಿಮಾದ ಕತೆ ಪುನರ್ಜನ್ಮದ ಕತೆಯನ್ನು ಒಳಗೊಂಡಿದೆಯಂತೆ. ಸಿನಿಮಾದಲ್ಲಿ ಭರಪೂರ ಆಕ್ಷನ್ ಸಹ ಇರಲಿದೆ. ಸಿನಿಮಾದ ಕತೆ ಈಗಾಗಲೇ ಸಲ್ಮಾನ್ ಖಾನ್​ಗೆ ಇಷ್ಟವಾಗಿದ್ದು, ‘ಸೀಖಂಧರ್’ ಸಿನಿಮಾ ಮುಗಿಯುತ್ತಿದ್ದಂತೆ ಅಟ್ಲಿ ಜೊತೆ ಸಿನಿಮಾ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಬಗ್ಗೆ ಸುನಿಲ್ ಗ್ರೋವರ್ ಮಿಮಿಕ್ರಿ; ಸಿಟ್ಟಾದ್ರಾ ಸಲ್ಲು?

ಪುನರ್ಜನ್ಮದ ಕತೆಯುಳ್ಳ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮೂರು ಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಜೊತೆಗೆ ಸಿನಿಮಾದ ಕತೆ ಸಹ ಮೂರು ಭಿನ್ನ ಕಾಲಘಟ್ಟದಲ್ಲಿ ನಡೆಯಲಿದ್ದು, ಬೃಹತ್ ಸೆಟ್​ಗಳನ್ನು ಇದಕ್ಕಾಗಿ ನಿರ್ಮಾಣ ಮಾಡುವ ಯೋಜನೆ ಇದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೊರತಾಗಿ ಇನ್ನೊಬ್ಬ ಪ್ರಮುಖ ನಟ ಸಹ ಇರಲಿದ್ದು, ದಕ್ಷಿಣ ಭಾರತದ ನಟನನ್ನು ಈ ಪಾತ್ರಕ್ಕೆ ಆಯ್ಕೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿರುವ ಸನ್ ಪಿಕ್ಚರ್ಸ್ ನಿರ್ಮಾಣ ಮಾಡಲಿದ್ದು, ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷದ ಏಪ್ರಿಲ್ ನಲ್ಲಿ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:31 am, Thu, 28 November 24

Loading...
Unable to load recommendations.
Follow Us