‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

ಖ್ಯಾತ ನಟ ಸಂಜಯ್ ದತ್ ಅಭಿನಯಿಸಿದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆ ಆಗುತ್ತಿವೆ. ‘ಧುರಂಧರ್ 2’ ಯಶಸ್ಸಿನ ಬಳಿಕ ಅವರ ಹೊಸ ಸಿನಿಮಾ ‘ಆಖ್ರಿ ಸವಾಲ್’ ರಿಲೀಸ್​ಗೆ ಸಜ್ಜಾಗಿದೆ. ಮೇ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ.

‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’
Aakhri Sawal First Look Poster

Updated on: Mar 26, 2026 | 5:11 PM

ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್ (Sanjay Dutt) ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಬ್ಲಾಕ್‌ಬಸ್ಟರ್ ‘ಧುರಂಧರ್: ದಿ ರಿವೆಂಜ್’ ಸಿನಿಮಾದಲ್ಲಿ ಚೌಧರಿ ಅಸ್ಲಂ ಎಂಬ ಪಾತ್ರದ ಮೂಲಕ ಸಂಜಯ್ ದತ್ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಈಗ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಆಖ್ರಿ ಸವಾಲ್’ (Aakhri Sawal) ಎಂಬುದು ಈ ಸಿನಿಮಾದ ಹೆಸರು. ಗುರುವಾರ (ಮಾರ್ಚ್ 26) ಚಿತ್ರತಂಡವು ಸಾಮಾಜಿಕ ಜಾಲತಾಣಗಳಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಸಂಜಯ್ ದತ್ ಅತ್ಯಂತ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅವರ ಈ ಭಾವಚಿತ್ರವು ಒಂದು ಬೃಹತ್ ಪ್ರಶ್ನಾರ್ಥಕ ಚಿಹ್ನೆಯ ಒಳಗೆ ಅಡಕವಾಗಿದೆ. ಪೋಸ್ಟರ್‌ನ ವಿನ್ಯಾಸ ಗಮನ ಸೆಳೆದಿದೆ. ಕಥೆಯ ಬಗ್ಗೆ ಕೌತುಕ ಮೂಡಿಸಿದೆ. ಪೋಸ್ಟರ್‌ನಲ್ಲಿರುವ ‘The Question India Never Stopped Asking’ ಎಂಬ ಟ್ಯಾಗ್‌ಲೈನ್ ಸಖತ್ ಹೈಲೈಟ್ ಆಗಿದೆ.

‘ಆಖ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದಾ, ಧನರಾಜ್ ನಾಥ್ವಾನಿ ಮತ್ತು ಸ್ವತಃ ಸಂಜಯ್ ದತ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವು ‘ನಿಖಿಲ್ ನಂದಾ ಮೋಷನ್ ಪಿಕ್ಚರ್ಸ್’ ಮತ್ತು ‘ನೀಮ್ ಟ್ರೀ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ. ಸಂಜಯ್ ದತ್ ಅವರೊಂದಿಗೆ ಚಿತ್ರದಲ್ಲಿ ಅಮಿತ್ ಸಾಧ್, ನಮಾಶಿ ಚಕ್ರವರ್ತಿ, ಸಮೀರಾ ರೆಡ್ಡಿ, ತ್ರಿದಾ ಚೌಧರಿ ಮತ್ತು ನೀತು ಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪೋಸ್ಟರ್​ನಲ್ಲಿ ‘ಆಖ್ರಿ ಸವಾಲ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರವು 2026ರ ಮೇ 15ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಕತೆ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಧುರಂಧರ್ 2: ಪಾಕಿಸ್ತಾನದ ಪೊಲೀಸ್ ಆಗಲು ಕೈತುಂಬಾ ಸಂಬಳ ಪಡೆದ ಸಂಜಯ್ ದತ್

ಸದ್ಯ ಸಂಜಯ್ ದತ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಅದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿದ್ದಾರೆ. ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರವು ಬಿಡುಗಡೆಯಾದಾಗಿನಿಂದ ಅನೇಕ ದಾಖಲೆಗಳನ್ನು ಬರೆಯುತ್ತಿದ್ದು, ಈಗ ‘ಆಖ್ರಿ ಸವಾಲ್’ ಘೋಷಣೆ ಆಗಿರುವುದು ಸಂಜು ಬಾಬಾ ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us