AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ

‘ಧುರಂಧರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಮಾತ್ರವಲ್ಲದೇ ವಿವಾದವನ್ನೂ ಮಾಡಿಕೊಂಡಿದೆ. ಈ ಚಿತ್ರದಲ್ಲಿ ಆರ್. ಮಾಧವನ್ ಅವರು ಕಾಣಿಸಿಕೊಂಡ ಒಂದು ದೃಶ್ಯದಿಂದ ಸಿಖ್ ಧರ್ಮದವರಿಗೆ ನೋವಾಗಿದೆ. ಚಿತ್ರತಂಡದ ವಿರುದ್ಧ ದೂರು ನೀಡಲಾಗಿದೆ. ಅಲ್ಲದೇ, ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ
R Madhavan, Ranveer Singh
ಮದನ್​ ಕುಮಾರ್​
|

Updated on: Mar 24, 2026 | 9:07 PM

Share

‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ವಿವಾದಕ್ಕೂ ಸಿಲುಕಿದೆ. ಚಿತ್ರದ ದೃಶ್ಯವೊಂದರಲ್ಲಿ ಸಿಖ್ (Sikh) ಧರ್ಮದ ಪವಿತ್ರ ಗ್ರಂಥದ ಸಾಲುಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಾಯಕ ನಟ ರಣವೀರ್ ಸಿಂಗ್, ಆರ್. ಮಾಧವನ್ (R Madhavan) ಮತ್ತು ನಿರ್ದೇಶಕ ಆದಿತ್ಯ ಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜೋತ್ ಸಿಂಗ್ ಕೀರ್ ಅವರು ಮುಂಬೈನಲ್ಲಿ ಈ ದೂರು ದಾಖಲಿಸಿದ್ದಾರೆ.

ನಟ ಆರ್. ಮಾಧವನ್ ಅವರು ‘ಧುರಂಧರ್ 2’ ಚಿತ್ರದ ದೃಶ್ಯವೊಂದರಲ್ಲಿ ಸಿಗರೇಟ್ ಸೇದುತ್ತಾ, ಗುರು ಗೋಬಿಂದ್ ಸಿಂಗ್ ರಚಿಸಿದ ಪವಿತ್ರ ‘ದಶಮ್ ಗ್ರಂಥ’ದ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಗುರ್ಬಾನಿ ಎಂಬುದು ಕೇವಲ ಸಂಭಾಷಣೆಯಲ್ಲ, ಅದು ದೈವಿಕ ಮತ್ತು ಪವಿತ್ರವಾದದ್ದು. ಸಿಗರೇಟ್ ಸೇದುತ್ತಾ ಅದನ್ನು ಹೇಳುವುದು ಅಕ್ಷಮ್ಯ ಅಪರಾಧ’ ಎಂದು ಗುರ್ಜೋತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದ ತಾರಕಕ್ಕೇರುತ್ತಿದ್ದಂತೆಯೇ ನಟ ಆರ್. ಮಾಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ‘ಯಾರ ಮನಸ್ಸಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಚಿತ್ರದಲ್ಲಿ ಶ್ಲೋಕ ಹೇಳುವ ಮುನ್ನವೇ ನಾನು ಸಿಗರೇಟ್ ಆರಿಸಿದ್ದೆ. ಪರದೆಯ ಮೇಲೆ ಎಲ್ಲಿಯೂ ಧೂಮಪಾನ ಮಾಡುತ್ತಾ ಶ್ಲೋಕ ಹೇಳುವ ದೃಶ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

View this post on Instagram

A post shared by R. Madhavan (@actormaddy)

‘ನಿರ್ದೇಶಕ ಆದಿತ್ಯ ಧರ್ ಅವರು ಇಂತಹ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿದ್ದಾರೆ. ಸಿಖ್ ಸಮುದಾಯದ ಮೇಲೆ ನಮಗೆ ಅಪಾರ ಗೌರವವಿದೆ. ಚಿತ್ರ ಬಿಡುಗಡೆಗೆ ಮುನ್ನ ನಾನು ಯಾವಾಗಲೂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತೇನೆ. ಉದ್ದೇಶಪೂರ್ವಕವಾಗಿ ಈ ತಪ್ಪು ನಡೆದಿಲ್ಲ’ ಎಂದು ಆರ್. ಮಾಧವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸದ್ಯಕ್ಕೆ ವಿವಾದ ತಣ್ಣಗಾಗಿಲ್ಲ. ಚಿತ್ರತಂಡ ಬೇಷರತ್ ಕ್ಷಮೆ ಕೇಳದಿದ್ದರೆ ನಿರ್ದೇಶಕ ಆದಿತ್ಯ ಧರ್, ನಟರಾದ ರಣವೀರ್ ಸಿಂಗ್ ಮತ್ತು ಮಾಧವನ್ ಅವರು ಎಲ್ಲೇ ಕಾಣಿಸಿಕೊಂಡರೂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಸಿಖ್ ಸಂಘಟನೆಗಳು ಎಚ್ಚರಿಕೆ ನೀಡಿವೆ. ಸದ್ಯ ಈ ಎಲ್ಲ ಕಾರಣಗಳಿಂದ ‘ಧುರಂಧರ್ 2’ ಸಿನಿಮಾ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us