ಎಆರ್ ರೆಹಮಾನ್​ರ ‘ರೋಜಾ ಜಾನೇ ಮನ್’ ಹಾಡು ಹುಟ್ಟಿದ್ದು ಹೇಗೆ?

|

Updated on: Jul 09, 2023 | 8:12 PM

AR Rahman: 'ರೋಜಾ' ಸಿನಿಮಾದ ಎವರ್​ಗ್ರೀನ್ ಹಾಡು 'ರೋಜಾ ಜಾನೇ ಮನ್' ಹಾಡು ಹುಟ್ಟಿದ್ದು ಹೇಗೆ? ಹಾಡನ್ನು ಯಾರು ಹಾಡಬೇಕಿತ್ತು?

ಎಆರ್ ರೆಹಮಾನ್​ರ ರೋಜಾ ಜಾನೇ ಮನ್ ಹಾಡು ಹುಟ್ಟಿದ್ದು ಹೇಗೆ?
ರೋಜಾ
Follow us on

ಎಆರ್ ರೆಹಮಾನ್ (AR Rahman) ಅಂಥಹಾ ದೈತ್ಯ ಸಂಗೀತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ್ದು ಮಣಿರತ್ನಂ ನಿರ್ದೇಶನದ ರೋಜಾ (Roja) ಸಿನಿಮಾ. ಆ ಸಿನಿಮಾದ ಹಾಡುಗಳು ಇಂದಿಗೂ ಜೀವಂತ. ‘ಚಿನ್ನ ಚಿನ್ನ ಆಸೈ’, ‘ಕಾದಲ್ ರೋಜಾವೆ’ ಹಿಂದಿಯಲ್ಲಿ ‘ರೋಜಾ ಜಾನೇ ಮನ್’ ಹಾಡುಗಳನ್ನಂತೂ ಇನ್ನೂ ನೂರು ವರ್ಷವಾದರೂ ಯಾರೂ ಮರೆಯಲಾರರೇನೋ. ಆದರೆ ಈ ಹಾಡು ಹುಟ್ಟಿದ್ದರ ಹಿಂದೆ ಹಾಗೂ ರೆಕಾರ್ಡ್ ಆಗಿದ್ದರ ಹಿಂದೆ ವಿಶೇಷ ಕತೆಯಿದೆ. ಅದನ್ನು ಎಆರ್ ರೆಹಮಾನ್​ರ ಆತ್ಮೀಯ ಗೆಳೆಯರಲ್ಲೊಬ್ಬರಾದ ಖ್ಯಾತ ಸಿನಿಮಾಟೊಗ್ರಾಫರ್ ರಾಜೀವ್ ಮೆನನ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಬಹುತೇಕರಿಗೆ ಗೊತ್ತಿರುವಂತೆ ಎಆರ್ ರೆಹಮಾನ್ ಸಿನಿಮಾಕ್ಕೆ ಬರುವ ಮುಂಚೆ ಜಾಹೀರಾತುಗಳಿಗೆ ಸಂಗೀತ ನೀಡುತ್ತಿದ್ದರು. ರಾಜೀವ್ ಮೆನನ್ ಜಾಹೀರಾತು ನಿರ್ದೇಶಕರಾಗಿದ್ದರು. ಒಮ್ಮೆ ಸಿಂಥಾಲ್ ಸೋಪಿನ ಜಾಹೀರಾತು ಮಾಡುವಾಗ ಅದಕ್ಕೆ ಎಆರ್ ರೆಹಮಾನ್ 36 ಸೆಕೆಂಡ್​ನ ಹಾಡೊಂದನ್ನು ಮಾಡಿದ್ದರು. ಆ ಹಾಡನ್ನು ಸ್ವತಃ ರಾಜೀವ್ ಮೆನನ್ ಅವರಿಂದಲೇ ಹಾಡಿಸಿದ್ದರು. ಕನ್ನಡದಲ್ಲಿ ಅದು ‘ನಮ್ಮ ಸಿಂಥಾಲ್’ ಎಂದಿತ್ತು. ಆ ಜಾಹೀರಾತಿನಲ್ಲಿ ಅರವಿಂದ ಸ್ವಾಮಿ ನಟಿಸಿದ್ದರು.

ಸಿಂಥಾಲ್ ಹಾಡು ಸೂಪರ್ ಹಿಟ್ ಆದ ಬಳಿಕ ಮಣಿರತ್ನಂ, ಎಆರ್ ರೆಹಮಾನ್ ಅವರನ್ನು ಅರಸಿ ಹೋಗಿ ಅವರಿಗೆ ರೋಜಾ ಸಿನಿಮಾದ ಸಂಗೀತ ನಿರ್ದೇಶನದ ಜವಾಬ್ದಾರಿ ಕೊಟ್ಟರು. ಅವರಿಬ್ಬರ ಭೇಟಿಗೆ ಕಾರಣವೂ ರಾಜೀವ್ ಮೆನನ್ ಅವರೇ ಆಗಿದ್ದರು. ರೋಜಾ ಸಿನಿಮಾದ ‘ಕಾದಲ್ ರೋಜಾವೆ’ ಹಾಡು ಸಿಂಥಾಲ್​ನ ಆ ಜಾಹೀರಾತಿನಿಂದಲೇ ಸ್ಪೂರ್ತಿ ಪಡೆದಿದ್ದಾಗಿದೆ. ರಾಜೀವ್ ಮೆನನ್ ಹೇಳಿರುವಂತೆ ಸಿಂಥಾಲ್ ಹಾಡಿನ ಪಲಕುಗಳು ರೋಜಾವೇ ಹಾಡಿನಲ್ಲಿವೆ.

ಇದನ್ನೂ ಓದಿ:AR Rahman: ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ದಿರಿಸು; ಹಣ ಯಾವುದಕ್ಕೆ ಬಳಕೆಯಾಗಲಿದೆ ಗೊತ್ತಾ?

ಇನ್ನೊಂದು ವಿಶೇಷತೆಯೆಂದರೆ ಹೊಸಬರು, ಬಹಳ ನಾಚಿಕೆ ಸ್ವಭಾವದವರಾಗಿದ್ದ ಎ.ಆರ್.ರೆಹಮಾನ್ ಅವರಿಗೆ ಅದಾಗಲೇ ದೊಡ್ಡ ಹಾಡುಗಾರರಾಗಿದ್ದ ಎಸ್​ಪಿ ಬಾಲಸುಬ್ರಹ್ಮಣ್ಯಂ ಇನ್ನಿತರೆಯವರನ್ನು ಹ್ಯಾಂಡಲ್ ಮಾಡುವುದು ಕಷ್ಟ ಎನಿಸಿ ಅವರಿಗೆ ಪರಿಚಯವಿದ್ದವರಿಂದಲೇ ಹಾಡಿಸಲು ಯೋಜನೆ ಹಾಕಿ, ಕಾದಲ್ ರೋಜಾವೆ ಅಥವಾ ರೋಜಾ ಜಾನೇ ಮನ್ ಹಾಡನ್ನು ರಾಜೀವ್ ಮೆನನ್ ಅವರಿಂದ ಹಾಡಿಸಲು ಮುಂದಾಗಿದ್ದರಂತೆ. ರೆಕಾರ್ಡಿಂಗ್ ಸಹ ಮಾಡಿದ್ದರಂತೆ ಆದರೆ ಅನುಭವಿ ಗಾಯಕ ಅಲ್ಲದ ರಾಜೀವ್​ಗೆ ಹಾಡುವುದು ಕಷ್ಟವಾಯ್ತಂತೆ. ಅಲ್ಲದೆ ಆಗಾಗ್ಗೆ ಪವರ್ ಕಟ್ ಸಹ ಆಗುತ್ತಿದ್ದರಿಂದ ರೆಕಾರ್ಡಿಂಗ್ ಬಹಳ ನಿಧಾನವಾಗಿ ಸಾಗಿತ್ತಂತೆ.

ಆಗ ನಿರ್ಮಾಪಕರು ತಾಳ್ಮೆ ಕಳೆದುಕೊಂಡು ಎಸ್​ಪಿ ಬಾಲಸುಬ್ರಹ್ಮಣಂ ಅವರನ್ನು ಕರೆಸಿ ಅವರಿಂದ ಹಾಡಿಸಿದರಂತೆ ಕೇವಲ ಅರ್ಧ ಗಂಟೆಯಲ್ಲಿ ಬಾಲಸುಬ್ರಹ್ಮಣಂ ಅವರು ಆ ಹಾಡನ್ನು ಹಾಡಿ ಹೋದರಂತೆ. ಆ ಮೂಲಕ ಐತಿಹಾಸಿಕ ಹಾಡಿಗೆ ದನಿಯಾಗುವ ಅವಕಾಶ ರಾಜೀವ್ ಮೆನನ್​ಗೆ ತಪ್ಪಿ ಹೋಯಿತು. ಅದು ಮಾತ್ರವೇ ಅಲ್ಲ. ರೋಜಾ ಸಿನಿಮಾದ ನಾಯಕನ ಪಾತ್ರವನ್ನು ಮಣಿರತ್ನಂ ರಾಜೀವ್​ ಮೆನನ್​ಗೆ ಕೊಟ್ಟಿದ್ದರಂತೆ ಆದರೆ ಅವರು ನಿರಾಕರಿಸಿದ ಕಾರಣ ಆ ಪಾತ್ರ ಅರವಿಂದ್ ಸ್ವಾಮಿಗೆ ಹೋಯ್ತು. ಆ ಮೇಲೆ ನಡೆದಿದ್ದೆಲ್ಲ ಈಗ ಇತಿಹಾಸ. ರೋಜಾ, ಭಾರತೀಯ ಚಿತ್ರಜಗತ್ತಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿಬಿಟ್ಟಿತು. ಅರವಿಂದ್ ಸ್ವಾಮಿ ಸ್ಟಾರ್ ಆದರು. ಎ.ಆರ್.ರೆಹಮಾನ್ ಎಂಬ ಸಂಗೀತ ಸಾಮ್ರಾಟನ ಪ್ರತಿಭೆ ಲೋಕಕ್ಕೆ ತಿಳಿಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ