‘ಅನಿಮಲ್ ಸಿನಿಮಾ ಮಾಡಿದವರು ವಿಕೃತ ಮನಸ್ಸಿನವರು’: ಜಾವೇದ್ ಅಖ್ತರ್​

ಬಾಕ್ಸ್ ಆಫೀಸ್​ನಲ್ಲಿ ಬ್ಲಾಕ್ ಬಸ್ಟರ್​ ಹಿಟ್​ ಆದ ‘ಅನಿಮಲ್’ ಸಿನಿಮಾಗೆ ಅನೇಕರು ಈ ಮೊದಲೇ ತಕರಾರು ತೆಗೆದಿದ್ದರು. ಖ್ಯಾತ ಗೀತಸಾಹಿತಿ ಜಾವೇದ್​ ಅಖ್ತರ್​ ಅವರು ಕೂಡ ಆ ಸಿನಿಮಾವನ್ನು ಟೀಕಿಸಿದ್ದರು. ಅವರು ನೀಡಿದ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿತ್ತು. ಈಗ ಜಾವೇದ್​ ಅಖ್ತರ್​ ಅವರು ಮತ್ತೆ ‘ಅನಿಮಲ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

‘ಅನಿಮಲ್ ಸಿನಿಮಾ ಮಾಡಿದವರು ವಿಕೃತ ಮನಸ್ಸಿನವರು’: ಜಾವೇದ್ ಅಖ್ತರ್​
ಜಾವೇದ್ ಅಖ್ತರ್​, ರಣಬೀರ್​ ಕಪೂರ್​

Updated on: Nov 25, 2024 | 8:58 PM

ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​, ಬಾಬಿ ಡಿಯೋಲ್​ ಮುಂತಾದವರು ನಟಿಸಿದ ‘ಅನಿಮಲ್’ ಸಿನಿಮಾದಲ್ಲಿ ಹಲವಾರು ಆಕ್ಷೇಪಾರ್ಹ ದೃಶ್ಯಗಳು ಇದ್ದವು. ಅವುಗಳ ಬಗ್ಗೆ ವಿಮರ್ಶಕರು ತಕರಾರು ತೆಗೆದಿದ್ದರು. ಬಾಕ್ಸ್ ಆಫೀಸ್​ನಲ್ಲಿ ಅಂದಾಜು 900 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ಈ ಸಿನಿಮಾ ಬಗ್ಗೆ ಗೀತರಚನಕಾರ ಜಾವೇದ್​ ಅಖ್ತರ್​ ಅವರು ನೆಗೆಟಿವ್ ಪ್ರತಿಕ್ರಿಯೆ ನೀಡಿದ್ದರು. ಅದೇ ವಿಚಾರವಾಗಿ ಅವರು ಮತ್ತೆ ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

‘ಅನಿಮಲ್’ ರೀತಿಯ ಕಥೆ ಇರುವ ಸಿನಿಮಾವನ್ನು ಮಾಡುವವರನ್ನು ವಿಕೃತ ಮನಸ್ಸಿನವರು ಎಂದು ಜಾವೇದ್​ ಅಖ್ತರ್​ ಹೇಳಿದ್ದಾರೆ. ಪ್ರೇಕ್ಷಕರು ಅಂತಹ ಸಿನಿಮಾವನ್ನು ನೋಡಿ ಗೆಲ್ಲಿಸುವುದು ಅದಕ್ಕಿಂತಲೂ ದೊಡ್ಡ ದುರಂತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಹೇಳಿಕೆಯಿಂದ ಚಿತ್ರತಂಡಕ್ಕೆ ಮತ್ತೆ ಕೋಪ ಬರಬಹುದು. ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

‘12ರಿಂದ 15 ಜನರು ಸೇರಿಕೊಂಡು ಕೆಟ್ಟ ಮೌಲ್ಯಗಳು ಇರುವ ಸಿನಿಮಾವನ್ನು ಮಾಡಿದರೆ ಅಥವಾ ಅಶ್ಲೀಲವಾದ ಒಂದು ಹಾಡನ್ನು ಮಾಡಿದರೆ ಅದು ದೊಡ್ಡ ಸಮಸ್ಯೆ ಅಲ್ಲ. 140 ಕೋಟಿ ಜನರಲ್ಲಿ 10 ಅಥವಾ 12 ಜನರು ವಿಕೃತ ಮನಸ್ಸಿನವರಾದರೆ ಪರವಾಗಿಲ್ಲ. ಆದರೆ ಅಂಥ ಸಿನಿಮಾ ಸೂಪರ್​ ಹಿಟ್​ ಆದರೆ ಅದು ನಿಜಕ್ಕೂ ಸಮಸ್ಯೆ’ ಎಂದು ಜಾವೇದ್​ ಅಖ್ತರ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಹಲವರ ಬಳಿ ಕ್ಷಮೆ ಕೇಳಿದ್ದ ರಣ್​ಬೀರ್ ಕಪೂರ್

ಮಹಿಳೆಯವರಿಗೆ ಅಗೌರವ ತೋರಿಸುವಂತಹ ದೃಶ್ಯಗಳು ‘ಅನಿಮಲ್’ ಸಿನಿಮಾದಲ್ಲಿ ಇವೆ. ಕೆಟ್ಟ ಸಂಭಾಷಣೆ ಇದೆ. ತನ್ನ ಬೂಟು ನೆಕ್ಕು ಎಂದು ಮಹಿಳಾ ಪಾತ್ರಕ್ಕೆ ಕಥಾನಾಯಕ ಹೇಳುವಂತಹ ದೃಶ್ಯ ಇದೆ. ಅಲ್ಲದೇ ಕ್ರೌರ್ಯ ಕೂಡ ಮಿತಿ ಮೀರಿದೆ ಎಂಬ ಕಾರಣಕ್ಕೆ ಹಲವರು ಈ ಸಿನಿಮಾವನ್ನು ತೆಗಳಿದ್ದಾರೆ. ಆದರೆ ಈ ಟೀಕೆಯನ್ನು ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ಒಪ್ಪಿಕೊಂಡಿಲ್ಲ. ಅವರು ತಮ್ಮ ಸಿನಿಮಾವನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.