ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ

‘ಕಾಲಾ ಹಿರನ್’ ಸಿನಿಮಾ ತಂಡ ಮತ್ತು ಸಲ್ಮಾನ್ ಖಾನ್ ನಡುವಿನ ಕಿರಿಕ್ ಮತ್ತೊಂದು ಹಂತಕ್ಕೆ ಹೋಗಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಅಮಿತ್ ಜಾನಿ ಹೇಳಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಅವರ ಟೀಮ್ ಕಳಿಸಿದ ಲೀಗಲ್ ನೋಟಿಸ್ ಅನ್ನು ಅಮಿತ್ ಜಾನಿ ಅವರು ಹರಿದು ಹಾಕಿದ್ದಾರೆ.

ಕ್ಯಾಮೆರಾ ಎದುರಲ್ಲೇ ನೋಟಿಸ್ ಹರಿದು ಸಲ್ಮಾನ್ ಖಾನ್ಗೆ ಸವಾಲು ಹಾಕಿದ ನಿರ್ಮಾಪಕ
Salman Khan, Amit Jani

Updated on: Jun 04, 2026 | 10:33 PM

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹಾಗೂ ಅವರ ಕಾನೂನು ತಂಡವು ‘ಕಾಲಾ ಹಿರನ್’ (Kala Hiran) ಚಿತ್ರದ ನಿರ್ಮಾಪಕ ಅಮಿತ್ ಜಾನಿ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆನ್ನಲ್ಲೇ ಈ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿರ್ಮಾಪಕ ಅಮಿತ್ ಜಾನಿ (Amit Jani) ಅವರು ಕ್ಯಾಮೆರಾದ ಮುಂಭಾಗದಲ್ಲೇ ಸಲ್ಮಾನ್ ಖಾನ್ ಕಳುಹಿಸಿದ್ದ ನೋಟಿಸ್ ಹರಿದು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ (Salman Khan) ಅಭಿಮಾನಿಗಳಿಂದ ತಮಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅಮಿತ್ ಜಾನಿ ಅವರು ಎಲ್ಲವನ್ನೂ ವಿವರಿಸಿದ್ದಾರೆ. ‘ಸಲ್ಮಾನ್ ಖಾನ್ ನೋಟಿಸ್‌ಗೆ ನಿಮ್ಮ ಉತ್ತರ ಏನು ಎಂದು ಮಾಧ್ಯಮಗಳು ಮತ್ತು ಸ್ನೇಹಿತರು ನನ್ನನ್ನು ಕೇಳುತ್ತಿದ್ದಾರೆ. ಕಳೆದ 36 ಗಂಟೆಗಳಿಂದ ಡೋಂಗ್ರಿ, ಧಾರಾವಿ, ಜೋಗೇಶ್ವರಿಯ ಮುಸ್ಲಿಂ ಯುವಕರು ಹಾಗೂ ಸಲ್ಮಾನ್ ಖಾನ್ ಅವರ ಬೆಂಬಲಿಗರು ನನಗೆ ಸಾವಿರಾರು ಮೆಸೇಜ್‌ಗಳನ್ನು ಕಳುಹಿಸಿ ಕೊಲೆ ಮಾಡುವ, ಶಿರಚ್ಛೇದ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಂಡರ್ ವರ್ಲ್ಡ್ ಡಿ ಕಂಪನಿ ಹೆಸರಿನಲ್ಲೂ ಬೆದರಿಕೆ ಸಂದೇಶ ಬಂದಿದೆ. ಹಾಗಾಗಿ, ನಾನು ಯಾರಿಗೆ ಉತ್ತರ ನೀಡಬೇಕು? ಈ ಬೆದರಿಕೆಗಳಿಗೋ ಅಥವಾ ನಿಮ್ಮ ನೋಟಿಸ್‌ಗೋ? ನಿಮ್ಮ ನೋಟಿಸ್‌ಗೆ ನನ್ನ ಉತ್ತರ ಇದೇ’ ಎಂದು ಹೇಳುತ್ತಾ ಅವರು ನೋಟಿಸ್ ಪತ್ರವನ್ನು ಹರಿದು ಹಾಕಿದ್ದಾರೆ.

ಬೆದರಿಕೆ ಹಾಕುತ್ತಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನಿರ್ಮಾಪಕರು, ‘ಧಾರಾವಿ, ಜೋಗೇಶ್ವರಿ ಮತ್ತು ಡೋಂಗ್ರಿಯಲ್ಲಿರುವ ಸಲ್ಮಾನ್ ಖಾನ್ ಅವರ ಉದ್ಧಟ ಹಾಗೂ ವಿಕೃತ ಅಭಿಮಾನಿಗಳು ನನ್ನ ಕುಟುಂಬವನ್ನು ಮುಗಿಸುವುದಾಗಿ ಹೆದರಿಸುತ್ತಿದ್ದಾರೆ. ಡಿ-ಕಂಪನಿ ಹೆಸರಲ್ಲೂ ಸಂದೇಶ ಬರುತ್ತಿದೆ. ಈಗ ನೋಟಿಸ್‌ಗೆ ಉತ್ತರ ಸಿಕ್ಕಿದೆ ಅಲ್ಲವೇ? ಇನ್ನು ಮುಂದೆ ನಾವು ಡಿ-ಕಂಪನಿಯನ್ನು ನೋಡಿಕೊಳ್ಳುತ್ತೇವೆ. ನಿಮಗೆ ಯಾರು ಬೇಕೋ ಅವರನ್ನು ಕಳುಹಿಸಿ’ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ವೈರಲ್ ವಿಡಿಯೋ:

‘ಕಾಲಾ ಹಿರನ್’ ನೋಟಿಸ್ ವಿವಾದ:

ವರದಿಗಳ ಪ್ರಕಾರ, ಅಮಿತ್ ಜಾನಿ ನಿರ್ಮಿಸುತ್ತಿರುವ ‘ಕಾಲಾ ಹಿರನ್’ ಚಿತ್ರದ ಪ್ರಚಾರದ ವೇಳೆ ‘ಇದು ನೈಜ ಘಟನೆಗಳ ಆಧಾರಿತ ಸಿನಿಮಾ’ ಎಂದು ಉಲ್ಲೇಖಿಸಲಾಗಿತ್ತು. ಈ ಚಿತ್ರವು ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನ ಮತ್ತು ಅವರ ಮೇಲಿದ್ದ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎಂದು ಪ್ರೇಕ್ಷಕರು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂದು ಸಲ್ಮಾನ್ ಖಾನ್ ಅವರ ಕಾನೂನು ತಂಡ ಆಕ್ಷೇಪ ವ್ಯಕ್ತಪಡಿಸಿ, ನೋಟಿಸ್ ಕಳುಹಿಸಿತ್ತು.

ಇದನ್ನೂ ಓದಿ: ಕೃಷ್ಣಮೃಗ ಬೇಟೆ ಕುರಿತ ‘ಕಾಲಾ ಹಿರನ್’ ಸಿನಿಮಾ ಸಲ್ಮಾನ್ ಖಾನ್ ಬಯೋಪಿಕ್ ಅಲ್ಲ: ನಿರ್ಮಾಪಕರ ಸ್ಪಷ್ಟನೆ

ಪ್ರಸ್ತುತ ನಿರ್ಮಾಪಕ ಅಮಿತ್ ಜಾನಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಆದರೆ ಈ ಹೊಸ ವಿವಾದ ಹಾಗೂ ಆರೋಪಗಳ ಬಗ್ಗೆ ನಟ ಸಲ್ಮಾನ್ ಖಾನ್ ಅಥವಾ ಅವರ ಕಾನೂನು ತಂಡದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆ ಬಗ್ಗೆ ಕೌತುಕ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us