AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್

‘ಕಾಲಾ ಹಿರನ್’ ಚಿತ್ರವು ಸಲ್ಮಾನ್ ಖಾನ್ ಅವರ ವರ್ಚಸ್ಸು ಮತ್ತು ವೃತ್ತಿಪರ ಗೌರವಕ್ಕೆ ಧಕ್ಕೆ ತರುವಂತಹ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ಅಂಶಗಳನ್ನು ಒಳಗೊಂಡಿದೆ. ಇದು ಸಂಪೂರ್ಣವಾಗಿ ಮಾನಹಾನಿಕರವಾಗಿದೆ ಮತ್ತು ನಟನ ಇಮೇಜ್ ಬಳಸಿಕೊಂಡು ವಿವಾದ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್
Salman Khan, Kala Hiran Poster
ಮದನ್​ ಕುಮಾರ್​
|

Updated on: Jun 02, 2026 | 4:02 PM

Share

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ತಂಡವು ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸಲ್ಮಾನ್ ಖಾನ್ ಆರೋಪಿ ಆಗಿರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ ಎನ್ನಲಾಗಿದೆ. ‘ಕಾಲಾ ಹಿರನ್’ (Kala Hiran: The Battle for Legacy) ಚಿತ್ರದ ಎಲ್ಲಾ ರೀತಿಯ ಸಿದ್ಧತೆ ಮತ್ತು ಪ್ರಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.

ವರದಿಗಳ ಪ್ರಕಾರ, ಏಪ್ರಿಲ್ 24ರಂದು ಈ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಭರತ್ ಶ್ರೀನಾಥ್ ನಿರ್ದೇಶನದ ಹಾಗೂ ಅಮಿತ್ ಜಾನಿ ನಿರ್ಮಾಣದ ಈ ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಕ್ಷಯ್ ಪಾಂಡೆ ಅವರು ನಟರನ್ನು ಸಂಪರ್ಕಿಸುತ್ತಿದ್ದರು. ಈ ವೇಳೆ ಚಿತ್ರದ ಸಾರಾಂಶ ಮತ್ತು ಪಾತ್ರಗಳ ಸ್ಕೆಚ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಅದರಲ್ಲಿ ಸಲ್ಮಾನ್ ಖಾನ್ ಅವರ ಪ್ರಕರಣವನ್ನು ಪ್ರಸ್ತಾಪಿಸಲಾಗಿತ್ತು. ಇದು ಸಲ್ಮಾನ್ ಖಾನ್ ಅವರ ಗಮನಕ್ಕೆ ಬಂದ ತಕ್ಷಣ ಅವರ ವಕೀಲರ ತಂಡ ಕಾನೂನು ಕ್ರಮಕ್ಕೆ ಮುಂದಾಗಿದೆ.

ಸಲ್ಮಾನ್ ಖಾನ್ ಅವರ ಕಾನೂನು ತಂಡವು ನೋಟಿಸ್‌ನಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಿದೆ. ಮೊದಲನೆಯದಾಗಿ, ಕೃಷ್ಣಮೃಗ ಬೇಟೆ ಪ್ರಕರಣವು ಸದ್ಯ ರಾಜಸ್ಥಾನ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಸುತ್ತ ಸಿನಿಮಾ ಮಾಡುವುದು ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಚಿತ್ರದಲ್ಲಿ ಘಟನೆಯನ್ನು ಅತಿರಂಜಿತವಾಗಿ ಬಿಂಬಿಸುವುದರಿಂದ ಸಲ್ಮಾನ್ ಖಾನ್ ವಿರುದ್ಧ ಸಾರ್ವಜನಿಕರಲ್ಲಿ ಪೂರ್ವಾಗ್ರಹ ಮೂಡಬಹುದು ಮತ್ತು ಇದು ಅವರಿಗೆ ಸಿಗಬೇಕಾದ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಬಹುದು ಎಂದು ವಾದಿಸಲಾಗಿದೆ.

ಎರಡನೆಯದಾಗಿ, ಈ ಚಿತ್ರವು ಸಲ್ಮಾನ್ ಖಾನ್ ಅವರ ವೈಯಕ್ತಿಕ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ. ಸಲ್ಮಾನ್ ಖಾನ್ ಅವರ ಹೆಸರು, ವ್ಯಕ್ತಿತ್ವ ಅಥವಾ ಅವರಿಗೆ ಸಂಬಂಧಿಸಿದ ಘಟನೆಗಳನ್ನು ಬಳಸಿಕೊಳ್ಳಲು ಚಿತ್ರತಂಡ ಯಾವುದೇ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆದಿಲ್ಲ. ಸಲ್ಮಾನ್ ಅವರ ಜನಪ್ರಿಯತೆ ಮತ್ತು ಘನತೆಯನ್ನು ಬಳಸಿಕೊಂಡು ಚಿತ್ರತಂಡ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ವಕೀಲರು ದೂರಿದ್ದಾರೆ.

ಇದನ್ನೂ ಓದಿ: ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಸಲ್ಮಾನ್ ಖಾನ್ ಅವರ ಕಾನೂನು ತಂಡವು ಅಕ್ಷಯ್ ಪಾಂಡೆ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರ ಎಲ್ಲಾ ವ್ಯಕ್ತಿಗಳಿಗೆ ಚಿತ್ರದ ನಿರ್ಮಾಣ, ಚಿತ್ರಕಥೆ ಅಭಿವೃದ್ಧಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಜೊತೆಗೆ, ಬೇಷರತ್ ಲಿಖಿತ ಕ್ಷಮಾಪಣೆಗೆ ಒತ್ತಾಯಿಸಿದೆ. ಈ ನೋಟಿಸ್ ತಲುಪಿದ 24 ಗಂಟೆಗಳ ಒಳಗೆ ನಿಯಮಗಳನ್ನು ಪಾಲಿಸದಿದ್ದರೆ ಕೋಟ್ಯಂತರ ರೂಪಾಯಿ ನಷ್ಟ ಪರಿಹಾರ ಹಾಗೂ ಸಿವಿಲ್-ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More