‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ

ನೈಜ ಘಟನೆ ಆಧರಿಸಿದ ‘12th ಫೇಲ್​’ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್​ ಮಾಸ್ಸಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ 54 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದ ಈ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಿ ಕಂಗನಾ ರಣಾವತ್​ ಮೆಚ್ಚುಗೆ ಸೂಚಿಸಿದ್ದಾರೆ.

‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ
ಇರ್ಫಾನ್​ ಖಾನ್​, ಕಂಗನಾ ರಣಾವತ್​, ವಿಕ್ರಾಂತ್ ಮಾಸ್ಸಿ

Updated on: Jan 05, 2024 | 2:58 PM

ನಟ ಇರ್ಫಾನ್​ ಖಾನ್​ (Irrfan Khan) ಅವರು ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್​ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಕಾಲಿಕ ಮರಣದಿಂದ ಚಿತ್ರರಂಗಕ್ಕೆ ನಷ್ಟ ಆಯಿತು. ಮುಂದಿನ ದಿನಗಳಲ್ಲಿ ಅವರ ಸ್ಥಾನವನ್ನು ನಟ ವಿಕ್ರಾಂತ್​ ಮಾಸ್ಸಿ (Vikrant Massey) ಅವರು ತುಂಬಬಲ್ಲರು ಎಂದು ಕಂಗನಾ ರಣಾವತ್​ ಹೇಳಿದ್ದಾರೆ. ಸಾಮಾನ್ಯವಾಗಿ ಕಂಗನಾ ರಣಾವತ್​ ಅವರು ಯಾರನ್ನೂ ಅಷ್ಟು ಸುಲಭಕ್ಕೆ ಹೊಗಳುವುದಿಲ್ಲ. ಅವರಿಂದ ವಿಕ್ರಾಂತ್ ಮಾಸ್ಸಿಗೆ ಮೆಚ್ಚುಗೆ ಸಿಕ್ಕಿದೆ. ‘12th ಫೇಲ್​’ ಸಿನಿಮಾದಲ್ಲಿನ ವಿಕ್ರಾಂತ್​ ಮಾಸ್ಸಿ ನಟನೆ ಕಂಡು ಕಂಗನಾ ರಣಾವತ್ (Kangana Ranaut)​ ಫಿದಾ ಆಗಿದ್ದಾರೆ.

2023ರ ಅಕ್ಟೋಬರ್ 27ರಂದು ‘12th ಫೇಲ್​’ ಸಿನಿಮಾ ಬಿಡುಗಡೆ ಆಗಿತ್ತು. ಅಚ್ಚರಿ ಎಂದರೆ, ಅದೇ ದಿನ ಕಂಗನಾ ರಣಾವತ್​ ನಟನೆಯ ‘ತೇಜಸ್​’ ಕೂಡ ತೆರೆಕಂಡಿತ್ತು. ಬಾಕ್ಸ್​ ಆಫೀಸ್​ನಲ್ಲಿ ‘ತೇಜಸ್​’ ಸಿನಿಮಾ ಹೀನಾಯವಾಗಿ ಸೋತಿತು. ಆದರೆ ‘12th ಫೇಲ್​’ ಸಿನಿಮಾ ಹಿಟ್ ಆಯಿತು. ಈಗ ಈ ಸಿನಿಮಾವನ್ನು ಒಟಿಟಿಯಲ್ಲಿ ನೋಡಿ ಕಂಗನಾ ರಣಾವತ್​ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..

ನೈಜ ಘಟನೆ ಆಧರಿಸಿದ ‘12th ಫೇಲ್​’ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​ ಮುಂತಾದವರು ನಟಿಸಿದ್ದಾರೆ. ಚಿತ್ರಮಂದಿರದಲ್ಲಿ 54 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ವಿಮರ್ಶಕರು ಮತ್ತು ಪ್ರೇಕ್ಷಕರು ಈ ಸಿನಿಮಾಗೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಈಗ ‘ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​’ ಒಟಿಟಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.

ಇದನ್ನೂ ಓದಿ: Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್

‘ವಿಧು ಸರ್​ ಮತ್ತೊಮ್ಮೆ ನನ್ನ ಹೃದಯ ಗೆದ್ದಿದ್ದಾರೆ. ವಿಕ್ರಾಂತ್​ ಮಾಸ್ಸಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಇರ್ಫಾನ್​ ಖಾನ್​ ಅವರಿಂದ ತೆರವಾದ ಸ್ಥಾನವನ್ನು ಮುಂದಿನ ದಿನಗಳಲ್ಲಿ ವಿಕ್ರಾಂತ್​ ಮಾಸ್ಸಿ ತುಂಬಲಿದ್ದಾರೆ. ನಿಮ್ಮ ಪ್ರತಿಭೆಗೆ ನನ್ನ ಪ್ರಣಾಮಗಳು’ ಎಂದು ಕಂಗನಾ ರಣಾವತ್​ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ‘ಎಮರ್ಜೆನ್ಸಿ’ ಸಿನಿಮಾದ ಕೆಲಸಗಳಲ್ಲಿ ಕಂಗನಾ ರಣಾವತ್​ ಅವರು ಬ್ಯುಸಿ ಆಗಿದ್ದಾರೆ. ಆ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us