
ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿ ಸಿದ್ಧವಾಗಿರುವ ‘ಹನುಮಾನ್ ಅಂಶ್’ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ನಡುವೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರು ಈ ಚಿತ್ರವನ್ನು ಬಹುವಾಗಿ ಶ್ಲಾಘಿಸಿದ್ದಾರೆ. ಕೇವಲ 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡು ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2026ರ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.
ಯಾವುದೇ ಸ್ಟಾರ್ ಕಲಾವಿದರು ಹಾಗೂ ಅಬ್ಬರದ ಪ್ರಚಾರ ಇಲ್ಲದೇ ಇದ್ದರೂ ಕೂಡ ‘ಹನುಮಾನ್ ಅಂಶ್’ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಮೊದಲು ‘ಫ್ಯಾಷನ್’ ಖ್ಯಾತಿಯ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ‘ಹನುಮಾನ್ ಅಂಶ್’ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಹಾಗೂ ಬಾಬಾ ಪಾತ್ರಧಾರಿ ಶೋಭಿನವ್ ಸತ್ಯಾ ಅವರ ಅಭಿನಯವನ್ನು ಕೊಂಡಾಡಿದ್ದರು. ಈಗ ಕಂಗನಾ ಅವರು ಚಿತ್ರಕ್ಕೆ ಮೆಚ್ಚಿಗೆ ಸೂಚಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನೀಮ್ ಕರೋಲಿ ಬಾಬಾ ಅವರ ಚಿತ್ರವನ್ನು ಹಂಚಿಕೊಂಡಿರುವ ಕಂಗನಾ ರಣಾವತ್, ‘ಹನುಮಾನ್ ಅಂಶ್ ಬರೀ ಸಿನಿಮಾವಲ್ಲ, ಅದೊಂದು ಸತ್ಸಂಗ. ನೀಮ್ ಕರೋಲಿ ಬಾಬಾ ಅವರ ಪವಾಡಗಳನ್ನು ಅನುಭವಿಸಿದ ಜನರ ಕಥೆಗಳನ್ನು ಸುಂದರವಾಗಿ ಹೆಣೆಯಲಾಗಿದೆ. ಥೆರಪಿಗೆ ಹೋಗುವುದನ್ನು ಬಿಟ್ಟು ಈ ಸಿನಿಮಾ ನೋಡಿ’ ಎಂದು ಬರೆದುಕೊಂಡಿದ್ದಾರೆ.
ಇನ್ನೊಂದೆಡೆ, ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜ್ ಅವರು ಈ ಚಿತ್ರತಂಡಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ‘ಸಂತರ ಜೀವನಧಾರಿತ ಸಿನಿಮಾಗಳು ಕೇವಲ ಮನರಂಜನೆ ನೀಡುವುದಕ್ಕೆ ಸೀಮಿತವಾಗಬಾರದು. ಅವು ಪ್ರೇಕ್ಷಕರಲ್ಲಿ ಭಕ್ತಿ, ವೈರಾಗ್ಯ ಹಾಗೂ ಜ್ಞಾನವನ್ನು ಮೂಡಿಸಬೇಕು. ಸೃಜನಶೀಲ ಸ್ವಾತಂತ್ರ್ಯದ ಹೆಸರಿನಲ್ಲಿ ರಂಜನೆ ಅಥವಾ ಕಮರ್ಷಿಯಲ್ ಯಶಸ್ಸಿಗಾಗಿ ಸಂತರ ನಿಜ ಜೀವನದ ಕಥೆಯನ್ನು ತಿರುಚುವುದು ಅಥವಾ ಕಾಲ್ಪನಿಕ ದೃಶ್ಯಗಳನ್ನು ಸೇರಿಸುವುದು ತಪ್ಪು. ಸಂತರ ಚರಿತ್ರೆಗೆ ಧಕ್ಕೆ ತರುವುದು ಅಪರಾಧಕ್ಕೆ ಸಮಾನ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಹನುಮಾನ್ ಅಂಶ್’ ವರ್ಷದ ಟಾಪ್ ಲಾಭದಾಯಕ ಸಿನಿಮಾ, ಗಳಿಸಿರುವುದೆಷ್ಟು?
ಕೇವಲ 2 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಆಗಸ್ಟ್ 7ರಂದು ಬಹಳ ಕಡಿಮೆ ಸದ್ದಿನೊಂದಿಗೆ ಚಿತ್ರಮಂದಿರಗಳಿಗೆ ಪ್ರವೇಶಿಸಿತ್ತು. ಆರಂಭದ ಮೊದಲ ಎರಡು ವಾರಗಳಲ್ಲಿ ಬರಿ 1.48 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ತವಾಗಿದ್ದ ಈ ಚಿತ್ರ, ಮೂರನೇ ವಾರದಿಂದ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಯ ಚೇತರಿಕೆ ಕಂಡಿತು. ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದಾಗಿ ಭಾರಿ ಪ್ರದರ್ಶನ ಕಾಣುತ್ತಿರುವ ‘ಹನುಮಾನ್ ಅಂಶ್’, ಇಲ್ಲಿಯವರೆಗೆ 54.13 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಪ್ರದರ್ಶನ ಮುಂದುವರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:44 pm, Wed, 2 September 26