Manoj Bajpayee: ಶೂ ಇಲ್ಲದೇ ಬಡವನಂತೆ ನಿಂತಿದ್ದ ಮನೋಜ್ ಬಾಜಪಾಯಿ ಜೊತೆ ಶಾರುಖ್ ನಡೆದುಕೊಂಡಿದ್ದು ಹೇಗೆ?
Discotheque | Shah Rukh Khan: ಮನೋಜ್ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ.

ನಟ ಶಾರುಖ್ ಖಾನ್ (Shah Rukh Khan) ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಾರೆ. ಆದರೆ ಅವರ ರಿಯಲ್ ಲೈಫ್ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಗೊತ್ತಿರುವುದು ಕೆಲವೇ ಮಂದಿಗೆ ಮಾತ್ರ. ಕಿಂಗ್ ಖಾನ್ ಜೊತೆ ಒಡನಾಡಿದ ಎಲ್ಲರಿಗೂ ಅವರ ನಿಜವಾದ ವ್ಯಕ್ತಿತ್ವದ ಪರಿಚಯ ಆಗಿರುತ್ತದೆ. ಆ ಬಗ್ಗೆ ಅನೇಕ ಸೆಲೆಬ್ರಿಟಿಗಳು ಹೇಳಿಕೊಂಡಿದ್ದುಂಟು. ಈಗ ನಟ ಮನೋಜ್ ಬಾಜಪಾಯಿ (Manoj Bajpayee) ಕೂಡ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಮನೋಜ್ ಅವರನ್ನು ಡಿಸ್ಕೋಟೆಕ್ಗೆ (Discotheque) ಕರೆದುಕೊಂಡು ಹೋಗಿದ್ದೇ ಶಾರುಖ್ ಖಾನ್. ಆ ನೆನಪುಗಳನ್ನು ಅವರೀಗ ಮೆಲುಕು ಹಾಕಿದ್ದಾರೆ.
ಬಿಹಾರದ ಹಳ್ಳಿಯಿಂದ ಬಂದವರು ಮನೋಜ್ ಬಾಜಪಾಯಿ. ರಂಗಭೂಮಿಯಲ್ಲಿ ಅನುಭವ ಹೊಂದಿದ್ದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟು ಅತ್ಯುತ್ತಮ ನಟ ಎನಿಸಿಕೊಂಡರು. ಈಗ ಅವರಿಗೆ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ.
ಇದನ್ನೂ ಓದಿ: Pathaan: ‘ಪಠಾಣ್ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್ ಖಾನ್
‘ತುಂಬ ವರ್ಷಗಳ ಹಿಂದೆ ದೆಹಲಿಯಲ್ಲಿ ಗುಂಗ್ರೂ ಎಂಬ ನೈಟ್ ಕ್ಲಬ್ ಇತ್ತು. ಆ ಸಮಯದಲ್ಲಿ ನಾನು ಚಪ್ಪಲಿ ಧರಿಸಿ ನಿಂತಿದ್ದೆ. ನಂತರ ನನಗೋಸ್ಕರ ಶೂಗಳ ವ್ಯವಸ್ಥೆ ಮಾಡಿಸಲಾಯಿತು. ಶಾರುಖ್ ಖಾನ್ ಅವರು ನನ್ನನ್ನು ಡಿಸ್ಕೋಟೆಕ್ ಒಳಗೆ ಕರೆದುಕೊಂಡು ಹೋದರು. ಅದೇ ಮೊದಲ ಬಾರಿಗೆ ನಾನು ಅದನ್ನು ನೋಡಿದ್ದು’ ಎಂದು ಮನೋಜ್ ಬಾಜಪಾಯಿ ಹೇಳಿದ್ದಾರೆ.
ಮನೆಗೆ ಬಂದ ಅತಿಥಿಗಳಿಗೆ ಶಾರುಖ್ ಸತ್ಕಾರ:
ಮುಂಬೈನಲ್ಲಿ ಶಾರುಖ್ ಖಾನ್ ಅವರ ಐಷಾರಾಮಿ ಬಂಗಲೆ ಇದೆ. ಇದಕ್ಕೆ ‘ಮನ್ನತ್’ ಎಂದು ಹೆಸರು. ‘ಮನ್ನತ್’ಗೆ ಬರುವ ಎಲ್ಲ ಅತಿಥಿಗಳನ್ನು ಶಾರುಖ್ ಖಾನ್ ಅವರು ತುಂಬ ಆತ್ಮೀಯವಾಗಿ ಉಪಚರಿಸುತ್ತಾರೆ. ಅದರ ಅನುಭವ ಹಲವರಿಗೆ ಆಗಿದೆ. ಇತ್ತೀಚೆಗೆ ‘ದಿ ರೊಮ್ಯಾಂಟಿಕ್ಸ್’ ನಿರ್ದೇಶಕಿ ಸ್ಮೃತಿ ಮುಂದ್ರಾ ಕೂಡ ಆ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Shah Rukh Khan: ‘ಪಠಾಣ್’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್ ಖಾನ್ ಅಭಿಮಾನಿಗಳು
‘ಶಾರುಖ್ ಖಾನ್ ಅವರು ಎಂತಹ ವ್ಯಕ್ತಿ ಎಂಬುದನ್ನು ಈ ಘಟನೆ ವಿವರಿಸುತ್ತದೆ. ಅವರು ನೀಡಿದ ಆತಿಥ್ಯ ಅತ್ಯುನ್ನತವಾಗಿತ್ತು. ತಮ್ಮ ತಂಡದಲ್ಲಿ ತುಂಬ ಜನರು ಇದ್ದೆವು. ಎಲ್ಲರಿಗೂ ಶಾರುಖ್ ಖಾನ್ ಮನೆಯಲ್ಲಿ ಚಹ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ನಾವು ಇರುವ ರೂಮಿನ ಒಳಗೆ ಅವರು ಬಂದರು. ಆಗ ನನಗೆ ಅಚ್ಚರಿ ಕಾದಿತ್ತು. ನಮ್ಮ ತಂಡದ ಪ್ರತಿಯೊಬ್ಬರ ಹೆಸರನ್ನೂ ಶಾರುಖ್ ಖಾನ್ ತಿಳಿದುಕೊಂಡಿದ್ದರು. ಎಲ್ಲರ ಹೆಸರು ಕರೆದು ಮಾತನಾಡಿಸಿದರು. ಪ್ರತಿಯೊಬ್ಬರ ಕೆಲಸ ಮತ್ತು ಸಮಯಕ್ಕೆ ಗೌರವ ನೀಡಿದರು’ ಎಂದು ಸ್ಮೃತಿ ಮುಂದ್ರಾ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:32 pm, Tue, 28 February 23