‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಧುರಂಧರ್’ ಸಿನಿಮಾದ ಕಥೆ ಹೇಗೆ ಸಿದ್ಧವಾಯ್ತು ಎಂಬ ಬಗ್ಗೆ ರಾಮ್ ಗೋಪಾಲ್ ವರ್ಮಾ ಬಾಯಿಬಿಟ್ಟಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ತಮಗೆ ಹೇಳಿದ ವಿಷಯವನ್ನು ಈಗ ಆರ್​ಜಿವಿ ಬಹಿರಂಗ ಪಡಿಸಿದ್ದಾರೆ. ಆರ್​ಜಿವಿ ನಿರ್ದೇಶಿಸಿದ್ದ 2 ಸಿನಿಮಾಗಳನ್ನು ಸೇರಿಸಿ ‘ಧುರಂಧರ್’ ಮಾಡಲಾಯ್ತು ಎಂಬುದು ಗೊತ್ತಾಗಿದೆ.

‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು
Satya, Dhurandhar

Updated on: Mar 15, 2026 | 11:04 AM

‘ಧುರಂಧರ್’ (Dhurandhar) ಚಿತ್ರದ ದೃಶ್ಯಗಳು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸತ್ಯ’ ಚಿತ್ರವನ್ನು ಹೋಲುತ್ತವೆ ಎಂಬ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಆರ್​ಜಿವಿ ಶೈಲಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ಕೆಲಸದಿಂದ ಇನ್ನೊಬ್ಬರು ಪ್ರಭಾವಿತರಾಗುವುದು ಸಾಮಾನ್ಯ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

‘ಆದಿತ್ಯ ಧಾರ್ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರತಿಯೊಬ್ಬ ಫಿಲ್ಮ್ ಮೇಕರ್ ಕೂಡ ತಾವು ಈ ಹಿಂದೆ ನೋಡಿದ ಅಥವಾ ಇಷ್ಟಪಟ್ಟ ಸಿನಿಮಾಗಳಿಂದ ಪ್ರಭಾವಿತರಾಗಿಯೇ ಇರುತ್ತಾರೆ. ನನ್ನದೇ ಸಿನಿಮಾಗಳ ಉದಾಹರಣೆ ಇದೆ. ಬ್ರೂಸ್ ಲೀ ಅವರ ‘ರಿಟರ್ನ್ ಆಫ್ ದಿ ಡ್ರ್ಯಾಗನ್’ ಮತ್ತು ಸನ್ನಿ ಡಿಯೋಲ್ ಅವರ ‘ಅರ್ಜುನ್’ ಚಿತ್ರದಿಂದ ‘ಶಿವ’ ಸಿನಿಮಾ ಪ್ರೇರಿತವಾಗಿತ್ತು. ಹಾಗೆಯೇ ‘ಸತ್ಯ’ ಚಿತ್ರದಲ್ಲಿ ‘ದಿ ಗಾಡ್ ಫಾದರ್’ ಮತ್ತು ‘ಗುಡ್ ಫೆಲ್ಲಾಸ್’ ಚಿತ್ರಗಳ ಪ್ರಭಾವವಿತ್ತು’ ಎಂದು ರಾಮ್ ಗೋಪಾಲ್ ವರ್ಮಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧಾರ್ ಜೊತೆಗೆ ಮಾತನಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ. ‘ತಾನು ಮುಖ್ಯವಾಗಿ ‘ಸತ್ಯ’ ಮತ್ತು ‘ಕಂಪನಿ’ ಸಿನಿಮಾಗಳಿಂದ ಪ್ರೇರಿತನಾಗಿದ್ದು, ಅದಕ್ಕೆ ಸ್ವಲ್ಪ ದೇಶಭಕ್ತಿಯನ್ನು ಬೆರೆಸಿ ಧುರಂಧರ್ ಸಿನಿಮಾ ಸಿದ್ಧಪಡಿಸಿದೆ ಎಂದು ಆದಿತ್ಯ ಅವರೇ ನನಗೆ ಹೇಳಿದ್ದರು’ ಎಂದು ಆರ್​ಜಿವಿ ಹೇಳಿದಾರೆ. ಆ ಬಗ್ಗೆ ಆದಿತ್ಯ ಧಾರ್ ಏನು ಹೇಳುತ್ತಾರೆ ಎಂಬ ಕೌತುಕ ಮೂಡಿದೆ.

ಮಾರ್ಚ್ 19ಕ್ಕೆ ‘ಧುರಂಧರ್ 2: ದಿ ರಿವೆಂಜ್’ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರ ಕಣ್ಣು ಸಿನಿಮಾದ ಮೇಲಿದೆ. ರಾಮ್ ಗೋಪಾಲ್ ವರ್ಮಾ ಅವರು ಮೊದಲಿನಿಂದಲೂ ‘ಧುರಂಧರ್’ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅವರು ‘ಧುರಂಧರ್ 2’ ಸಿನಿಮಾದ ಟ್ರೈಲರ್‌ ನೋಡಿ ಹೊಗಳಿದ್ದರು. ಸಿನಿಮಾಗೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ್’ ಸಿನಿಮಾ

ಒಂದು ದಿನ ಮೊದಲೇ ‘ಧುರಂಧರ್ 2’ ಸಿನಿಮಾದ ಪೇಯ್ಡ್ ಪ್ರೀಮಿಮರ್ ಶೋಗಳು ನಡೆಯಲಿವೆ. ಮಾರ್ಚ್ 18ರ ಸಂಜೆ 5 ಗಂಟೆಯಿಂದ ದೇಶಾದ್ಯಂತ ಪ್ರೀಮಿಯರ್ ಶೋ ಆರಂಭ ಆಗಲಿದೆ. ಈ ಶೋಗಳ ಮುಂಗಡ ಟಿಕೆಟ್ ಬುಕಿಂಗ್​ನಿಂದಲೇ ಈ ಚಿತ್ರಕ್ಕೆ ಈಗಾಗಲೇ 34 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಇನ್ನೂ ಹೆಚ್ಚಾಗುವುದು ಗ್ಯಾರಂಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us