‘ರಾಮಾಯಣ’ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರ ದೀಪಾವಳಿಗೆ ಬಿಡುಗಡೆಗೆ ಸಿದ್ಧವಾಗಿದೆ. 4000 ಕೋಟಿ ವೆಚ್ಚದ ಈ ಬಿಗ್ ಬಜೆಟ್ ಚಿತ್ರದ ಭಾರತೀಯ ವಿತರಣಾ ಹಕ್ಕುಗಳನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ 250 ಕೋಟಿಗೆ ಪಡೆದಿದೆ. ರಣಬೀರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್ ನಟನೆಯ ಚಿತ್ರಕ್ಕೆ ಎ.ಆರ್. ರೆಹಮಾನ್, ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ. ಈ ಐತಿಹಾಸಿಕ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಸೃಷ್ಟಿಸುವ ನಿರೀಕ್ಷೆಯಿದೆ.

ಮುಖ್ಯಾಂಶಗಳು
- ‘ರಾಮಾಯಣ’ ಹಂಚಿಕೆ ಹಕ್ಕು ಫೈನಲ್
- 4000 ಕೋಟಿಯ ಸಿನಿಮಾಗೆ 250 ಕೋಟಿಯ ಡೀಲ್
- ದೈತ್ಯ ಚಿತ್ರಕ್ಕೆ ಕರಣ್ ಜೋಹರ್ ಬಲ
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ (Ramayana Movie) ಮೊದಲ ಭಾಗ ಈ ವರ್ಷದ ದೀಪಾವಳಿ ಹಬ್ಬದ ವೇಳೆಗೆ ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಈ ಚಿತ್ರದ ಭಾರತದ ಹಂಚಿಕೆ ಹಕ್ಕನ್ನು ಪಡೆದಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯ ವೈಭವದ ಚಿತ್ರವನ್ನು ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.
ಡೀಲ್ ಕುದುರಿದ್ದು 250 ಕೋಟಿಗೆ!
ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಬಿಗ್ ಬಜೆಟ್ ಸಿನಿಮಾ. ಇದರ ವಿತರಣಾ ಹಕ್ಕುಗಳಿಗಾಗಿ ಆರಂಭದಲ್ಲಿ ಭಾರಿ ದೊಡ್ಡ ಮೊತ್ತದ ಬೇಡಿಕೆ ಇಡಲಾಗಿತ್ತು. ಮೂಲಗಳ ಪ್ರಕಾರ, ಧರ್ಮ ಪ್ರೊಡಕ್ಷನ್ಸ್ ಜೊತೆಗಿನ ಮಾತುಕತೆ ಬರೋಬ್ಬರಿ 500 ಕೋಟಿ ರೂಪಾಯಿಗಳ ಭಾರಿ ಮೊತ್ತದಿಂದಲೇ ಆರಂಭವಾಗಿತ್ತು. ಆದರೆ, ಹಲವು ಸುತ್ತಿನ ಮಾತುಕತೆಗಳ ನಂತರ ಅಂತಿಮವಾಗಿ ಇದರ ಅರ್ಧದಷ್ಟು ಬೆಲೆಗೆ, ಅಂದರೆ ಕೇವಲ 250 ಕೋಟಿ ರೂಪಾಯಿಗಳಿಗೆ ಈ ಡೀಲ್ ಫೈನಲ್ ಆಗಿದೆ. ರೇಸ್ನಲ್ಲಿದ್ದ ವಿತರಕರಿಗೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಚಿತ್ರದ 30 ನಿಮಿಷಗಳ ಎಡಿಟ್ ಮಾಡಿದ ವಿಶೇಷ ತುಣುಕನ್ನು ತೋರಿಸಿದ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಅಪಾರ ಅನುಭವ
ಕೆಲವು ವರ್ಷಗಳ ಹಿಂದೆ ಆದರ್ ಪೂನಾವಾಲಾ ಅವರ ‘ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ ಧರ್ಮ ಪ್ರೊಡಕ್ಷನ್ಸ್ನ ಶೇ. 50 ರಷ್ಟು ಪಾಲನ್ನು 1,000 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದಾದ ನಂತರ ಕರಣ್ ಜೋಹರ್ ಸಂಸ್ಥೆಗೆ ದೊಡ್ಡ ಆರ್ಥಿಕ ಬಲ ಬಂದಿತ್ತು. ಈ ಹಿಂದೆ ಎಸ್ಎಸ್ ರಾಜಮೌಳಿ ಅವರ ‘ಬಾಹುಬಲಿ’ ಸರಣಿ, ಘಾಜಿ ಅಟ್ಯಾಕ್, ಶಂಕರ್ ನಿರ್ದೇಶನದ ‘2.0’ ಮತ್ತು ಜೂನಿಯರ್ ಎನ್ಟಿಆರ್ ನಟನೆಯ ‘ದೇವರ: ಪಾರ್ಟ್ 1’ ನಂತಹ ದಕ್ಷಿಣ ಭಾರತದ ದೈತ್ಯ ಪ್ಯಾನ್-ಇಂಡಿಯಾ ಚಿತ್ರಗಳನ್ನು ಉತ್ತರ ಭಾರತದಲ್ಲಿ ಯಶಸ್ವಿಯಾಗಿ ವಿತರಣೆ ಮಾಡಿದ ಹೆಗ್ಗಳಿಕೆ ಧರ್ಮ ಪ್ರೊಡಕ್ಷನ್ಸ್ಗಿದೆ.
ಇದನ್ನೂ ಓದಿ: ‘ಬಿಟ್ಟಿ ಪ್ರಚಾರಕ್ಕಾಗಿ ರಾಮಾಯಣ ಚಿತ್ರದಲ್ಲಿ ಕಳಪೆ ವಿಎಫ್ಎಕ್ಸ್’: ಸೆಟ್ಗೆ ಭೇಟಿ ನೀಡಿದ ಕ್ರಿಯೇಟರ್ ಆರೋಪ
ಭಾರಿ ತಾರಾಗಣ
ಈ ವರ್ಷದ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾ ಎಂದು ಗುರುತಿಸಲ್ಪಟ್ಟಿರುವ ‘ರಾಮಾಯಣ: ಪಾರ್ಟ್ 1’ ನಲ್ಲಿ ಭಾರಿ ತಾರಾಗಣವಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದಲ್ಲಿದ್ದಾರೆ. ಇನ್ನು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ನ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ನೀಡುತ್ತಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎರಡನೇ ಭಾಗದ ಪ್ರೀ-ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಧೂಳೀಪಟ ಮಾಡಲಿದೆ ಎಂದು ಟ್ರೇಡ್ ಅನಾಲಿಸ್ಟ್ಗಳು ಭವಿಷ್ಯ ನುಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




