ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ

ದೆಹಲಿಯಲ್ಲಿ ನಡೆದ ವಿಶೇಷ ಪ್ರಿವ್ಯೂ ಬಳಿಕ ಇಂದು (ಜುಲೈ 24) ಯೂಟ್ಯೂಬ್‌ನಲ್ಲಿ ‘ರಾಮಾಯಣ’ ಚಿತ್ರದ ಬಿಡುಗಡೆಯಾಗಬೇಕಿತ್ತು. ಬಹುನಿರೀಕ್ಷಿತ ಟ್ರೇಲರ್ ಕೊನೆಯ ಕ್ಷಣದಲ್ಲಿ ಮುಂದೂಡಲ್ಪಟ್ಟಿದೆ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಜಾಗತಿಕ ಪಾಲುದಾರಿಕೆಯಿಂದಾಗಿ ಟ್ರೇಲರ್ ಅನ್ನು ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಕೊನೆಯ ಕ್ಷಣದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ ರದ್ದು; ಕಾರಣ ಕೊಟ್ಟ ನಮಿತ್ ಮಲ್ಹೋತ್ರಾ
ರಾಮಾಯಣ ತಂಡ

Updated on: Jul 30, 2026 | 10:06 AM

ಮುಖ್ಯಾಂಶಗಳು

  • ರಾಮಾಯಣ ರಿಲೀಸ್ ಮುಂದಕ್ಕೆ
  • ಹಾಲಿವುಡ್ ರೇಂಜ್‌ನಲ್ಲಿ ಬರ್ತಿದೆ ರಾಮನ ಕಥೆ
  • ಸೋನಿ ಪಿಕ್ಚರ್ಸ್ ಜೊತೆ ನಮಿತ್ ಮಲ್ಹೋತ್ರಾ ಕೈಜೋಡಿಸಿದ್ದೇ ಕಾರಣ

ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದ (Ramayana Movie) ಟ್ರೇಲರ್ ಪ್ರಿವ್ಯೂ ಈವೆಂಟ್ ಕಳೆದ ವಾರವಷ್ಟೇ ದೆಹಲಿಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಅಲ್ಲಿ ಬಂದ ಸೆಲೆಬ್ರಿಟಿಗಳಿಗೆ ಮಾತ್ರ ಟ್ರೇಲರ್ ತೋರಿಸಲಾಗಿತ್ತು. ಇಂದು (ಜುಲೈ 24) ಯೂಟ್ಯೂಬ್‌ನಲ್ಲಿ ಟ್ರೇಲರ್ ಅಧಿಕೃತವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಟ್ರೇಲರ್ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಪೋಸ್ಟ್ ಮೂಲಕ ಇದಕ್ಕೆ ಕಾರಣ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

‘ಇಂದು ನಮ್ಮ ‘ರಾಮಾಯಣ’ ಚಿತ್ರಕ್ಕೆ ಅತ್ಯಂತ ವಿಶೇಷವಾದ ಕ್ಷಣ. ರಾಮಾಯಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನನ್ನ ಕನಸು, ಈಗ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗಿನ ನಮ್ಮ ಪಾಲುದಾರಿಕೆಯಿಂದಾಗಿ ನನಸಾಗುತ್ತಿದೆ. ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ, ನಾವು ನಮ್ಮ ಚಿತ್ರದ ಟ್ರೇಲರ್ ಅನ್ನು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಒಂದೇ ಬಾರಿಗೆ ವಿಶ್ವದಾದ್ಯಂತ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. ಟ್ರೇಲರ್ ಹೊಸ ರಿಲೀಸ್ ದಿನಾಂಕವನ್ನು ಅವರು ರಿವೀಲ್ ಮಾಡಿಲ್ಲ.

‘100ಕ್ಕೂ ಹೆಚ್ಚು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಯಾವುದೇ ಪ್ರಮುಖ ಹಾಲಿವುಡ್ ಸಿನಿಮಾಗಳಂತೆಯೇ ನಮ್ಮ ರಾಮಾಯಣವನ್ನು ಇಡೀ ಜಗತ್ತಿಗೆ ತೋರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಜನರು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮತ್ತು ನಮ್ಮ ಕಥೆಗಳನ್ನು ಹೊಸ ಹೆಮ್ಮೆ ಹಾಗೂ ಉತ್ಸಾಹದೊಂದಿಗೆ ಅನ್ವೇಷಿಸಲು ಇದು ದಾರಿಯನ್ನು ಮಾಡಿಕೊಡಲಿದ್ದು, ಇದು ನಿಜಕ್ಕೂ ವಿಶೇಷವಾಗಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದ ಸೀತೆ ಪಾತ್ರ ಸಾಯಿ ಪಲ್ಲವಿ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದೇಕೆ?

‘ಇದನ್ನು ಸಾಧ್ಯವಾಗಿಸಲು ಸಹಾಯ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಮತ್ತು ರಾಮಾಯಣದ ಭಕ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ದೇಶದ ಯುವ ಪೀಳಿಗೆಯೇ ನಮ್ಮ ಭವಿಷ್ಯ, ನಮ್ಮ ಭವಿಷ್ಯವನ್ನು ರಕ್ಷಿಸಲು ನಾವೆಲ್ಲರೂ ಕೈಲಾದಷ್ಟು ಶ್ರಮಿಸೋಣ’ ಎಂದಿದ್ದಾರೆ ನಮಿತ್ ಮಲ್ಹೋತ್ರ.

‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ನಿರ್ದೇಶನ ಇದೆ. ನಮಿತ್ ಮಲ್ಹೋತ್ರ ಹಾಗೂ ಯಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ರಾಮ, ಸಾಯಿ ಪಲ್ಲವಿ ಸೀತೆ ಹಾಗೂ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ.

ಪ್ರಶ್ನೆ: ರಾಮಾಯಣ ರಿಲೀಸ್ ಯಾವಾಗ?
ಉತ್ತರ: 
ದೀಪಾವಳಿ

ಪ್ರಶ್ನೆ: ರಾಮಾಯಣ ಟ್ರೇಲರ್ ಯಾವಾಗ ರಿಲೀಸ್ ಆಗಬೇಕಿತ್ತು?
ಉತ್ತರ:
ಜುಲೈ 24

ಪ್ರಶ್ನೆ: ರಾಮಾಯಣ ಟ್ರೇಲರ್ ರದ್ದಿಗೆ ಕಾರಣ ಏನು?
ಉತ್ತರ:
ಹೊಸ ಒಪ್ಪಂದವೇ ಕಾರಣ

Published On - 6:56 am, Fri, 24 July 26

Loading...
Unable to load recommendations.
Follow Us