
ಬಾಲಿವುಡ್ ಹ್ಯಾಂಡ್ಸಮ್ ನಟ ರಣ್ಬೀರ್ ಕಪೂರ್ ತಮ್ಮ ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪ್ರಸ್ತುತ ಅವರು ಬಿಗ್ ಬಜೆಟ್ನ ‘ರಾಮಾಯಣ’ ಸಿನಿಮಾದ ಶೂಟಿಂಗ್ನಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದಾರೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಈ ಬಿಗ್ ಪ್ರಾಜೆಕ್ಟ್ನ ಎರಡನೇ ಭಾಗವು ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.
ರಾಮಾಯಣ 2 ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ರಣ್ಬೀರ್ ಕಪೂರ್ ಅವರು ‘ಬ್ರಹ್ಮಾಸ್ತ್ರ 2’ ಸಿನಿಮಾದ ಕೆಲಸಗಳನ್ನು ತಕ್ಷಣವೇ ಪ್ರಾರಂಭಿಸಲಿದ್ದಾರೆ. ಪಿಂಕ್ವಿಲ್ಲಾ ವರದಿಯ ಪ್ರಕಾರ ನಿರ್ದೇಶಕ ಅಯಾನ್ ಮುಖರ್ಜಿ ಈಗಾಗಲೇ ಬ್ರಹ್ಮಾಸ್ತ್ರ 2 ಚಿತ್ರದ ಕಥೆ ಹಾಗೂ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. 2027 ರ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರದ ಶೂಟಿಂಗ್ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.
ಈ ಸೀಕ್ವೆಲ್ನಲ್ಲಿ ರಣ್ಬೀರ್ ಕಪೂರ್ ಅವರು ‘ದೇವ್’ ಮತ್ತು ‘ಶಿವ’ ಎಂಬ ಎರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಆಲಿಯಾ ಭಟ್ ಅವರು ‘ಈಶಾ’ ಪಾತ್ರದಲ್ಲಿಯೇ ಮುಂದುವರೆಯಲಿದ್ದಾರೆ. ಅಷ್ಟೇ ಅಲ್ಲದೆ ‘ಅಮೃತ’ ಪಾತ್ರಕ್ಕಾಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರನ್ನು ಚಿತ್ರತಂಡ ಸಂಪರ್ಕಿಸುತ್ತಿದೆ. ಈ ಮೂಲಕ ಸಿನಿಮಾದಲ್ಲಿ ತಾರಾಗಣ ಇನ್ನಷ್ಟು ದೊಡ್ಡದಾಗಲಿದೆ.
ಇದನ್ನೂ ಓದಿ: ರಣ್ಬೀರ್ ಕಪೂರ್ ಅನ್ನು ರಾಮನ ಪಾತ್ರದಲ್ಲಿ ಒಪ್ಪಲಾಗದು, ತಗಾದೆ ತೆಗೆದ ಹಿರಿಯ ನಟ
ರಣ್ಬೀರ್ ಕಪೂರ್ ಸಾಲಿನಲ್ಲಿ ಪ್ರಸ್ತುತ ಸಾಲು ಸಾಲು ದೊಡ್ಡ ಸಿನಿಮಾಗಳಿವೆ. ರಾಮಾಯಣ ಭಾಗ 1, ಭಾಗ 2 ಮತ್ತು ಬ್ರಹ್ಮಾಸ್ತ್ರ 2 ಸಿನಿಮಾಗಳ ಜೊತೆಗೆ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಖತ್ ಹೈಪ್ ಸೃಷ್ಟಿಸಿರುವ ‘ಅನಿಮಲ್ ಪಾರ್ಕ್’ ಚಿತ್ರವೂ ಅವರ ಕೈಯಲ್ಲಿದೆ. ರಣ್ಬೀರ್ ಕಪೂರ್ ಅವರ ಈ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ರಣ್ಬೀರ್ ಅಬ್ಬರ ಮುಂದುವರೆಯುವುದು ಖಚಿತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.