ನೋಡಿಕೊಳ್ಳಲು ಯಾರೂ ಇಲ್ಲದೇ 400 ಕೋಟಿ ರೂಪಾಯಿಗೆ ಮಾರಾಟ ಆಯ್ತು ಬಾಲಿವುಡ್​ ನಟನ ಬಂಗಲೆ

ಈ ಬಂಗಲೆಯಲ್ಲಿ ದೇವ್​ ಆನಂದ್​ ಅವರು ಅಂದಾಜು 40 ವರ್ಷ ವಾಸವಾಗಿದ್ದರು. ಈಗ ಈ ಪ್ರಾಪರ್ಟಿಯನ್ನು ನೋಡಿಕೊಳ್ಳಲು ಮುಂಬೈನಲ್ಲಿ ಯಾರೂ ಇಲ್ಲ. ಹಾಗಾಗಿ ಇದನ್ನು ಮಾರಬೇಕು ಎಂಬ ನಿರ್ಧಾರ ಈ ಮೊದಲೇ ಮಾಡಲಾಗಿತ್ತು. ಇತ್ತೀಚೆಗೆ ಇದರ ವ್ಯವಹಾರ ಫೈನಲ್​ ಆಗಿದೆ. ನೂರಾರು ಕೋಟಿ ರೂಪಾಯಿಗೆ ಈ ಬಂಗಲೆ ಮಾರಾಟ ಆಗಿದೆ.

ನೋಡಿಕೊಳ್ಳಲು ಯಾರೂ ಇಲ್ಲದೇ 400 ಕೋಟಿ ರೂಪಾಯಿಗೆ ಮಾರಾಟ ಆಯ್ತು ಬಾಲಿವುಡ್​ ನಟನ ಬಂಗಲೆ
ದೇವ್​ ಆನಂದ್​

Updated on: Sep 19, 2023 | 8:04 PM

ಹಿಂದಿ ಚಿತ್ರರಂಗದಲ್ಲಿ (Bollywood) ನಟ ದೇವ್​ ಆನಂದ್​ ಮಾಡಿದ ಸಾಧನೆ ಬಹಳ ದೊಡ್ಡದು. ಸ್ಟಾರ್​ ಹೀರೋ ಆಗಿ ಮೆರೆದ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಅವರ ಸಿನಿಮಾದ ಹಾಡುಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. ಕೈ ತುಂಬ ಸಂಭಾವನೆ ಪಡೆಯುತ್ತಿದ್ದ ದೇವ್​ ಆನಂದ್​ (Dev Anand) ಅವರು ಅನೇಕ ಕಡೆಗಳಲ್ಲಿ ಆಸ್ತಿ ಮಾಡಿದ್ದರು. ಮುಂಬೈನಲ್ಲಿ ಬಹುಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿ ಹೊಂದಿದ್ದರು. 2011ರಲ್ಲಿ ಅವರು ನಿಧನರಾದರು. ಈಗ ಆ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಮಕ್ಕಳು ಮುಂಬೈ ಬಿಟ್ಟು ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಆ ಕಾರಣದಿಂದ ದೇವ್​ ಆನಂದ್​ ಒಡೆತನದ ಬಂಗಲೆಯೊಂದನ್ನು (Dev Anand Bungalow) ಮಾರಾಟ ಮಾಡಲಾಗಿದೆ. ಬರೋಬ್ಬರಿ 400 ಕೋಟಿ ರೂಪಾಯಿಗೆ ಇದು ಸೇಲ್​ ಆಗಿದೆ ಎಂದು ವರದಿ ಪ್ರಕಟ ಆಗಿದೆ.

ಮುಂಬೈನ ಅನೇಕ ಸೆಲೆಬ್ರಿಟಿಗಳು ಜುಹೂ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ. ಶ್ರೀಮಂತರ ಏರಿಯಾ ಎಂದೇ ಫೇಮಸ್​ ಆಗಿರುವ ಈ ಜಾಗದಲ್ಲಿ ದೇವ್​ ಆನಂದ್​ ಅವರ ಬಂಗಲೆ ಇದೆ. ಇದನ್ನು ಒಂದು ರಿಯಲ್​ ಎಸ್ಟೇಟ್​ ಕಂಪನಿಯು ಖರೀದಿಸಿದೆ. ಬಂಗಲೆಯನ್ನು ನೆಲಸಮ ಮಾಡಿ, ಅಲ್ಲಿ 22 ಮಹಡಿಯ ಕಟ್ಟಡವನ್ನು ನಿರ್ಮಿಸಲು ಪ್ಲ್ಯಾನ್​ ಸಿದ್ಧವಾಗಿದೆ ಎಂಬ ಮಾತು ಕೇಳಿಬಂದಿದೆ. 350ರಿಂದ 400 ಕೋಟಿ ರೂಪಾಯಿಗೆ ಈ ವ್ಯವಹಾರ ಕುದುರಿದೆ. ಕೆಲವು ಸಮಯದ ತನಕ ಈ ಬಂಗಲೆಯ ಅಕ್ಕಪಕ್ಕ ಮಾಧುರಿ ದೀಕ್ಷಿತ್​, ಡಿಂಪಲ್​ ಕಪಾಡಿಯಾ ಮುಂತಾದ ಸೆಲೆಬ್ರಿಟಿಗಳು ವಾಸಿಸುತ್ತಿದ್ದರು.

ಇದನ್ನೂ ಓದಿ: 32 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ನಟಿ ಸೋನಂ ಕಪೂರ್​

ಈ ಬಂಗಲೆಯಲ್ಲಿ ದೇವ್​ ಆನಂದ್​ ಅವರು ಅಂದಾಜು 40 ವರ್ಷ ವಾಸವಾಗಿದ್ದರು. ಅವರ ಮಗ ಸುನೀಲ್ ಈಗ ಅಮೆರಿಕದಲ್ಲಿ ವಾಸವಾಗಿದ್ದಾರೆ. ಮಗಳು ದೇವಿನಾ ಅವರು ಊಟಿಯಲ್ಲಿ ಸೆಟ್ಲ್​ ಆಗಿದ್ದಾರೆ. ಆದ್ದರಿಂದ ಮುಂಬೈನಲ್ಲಿ ಇರುವ ಈ ಪ್ರಾಪರ್ಟಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಇದನ್ನು ಮಾರಬೇಕು ಎಂಬ ನಿರ್ಧಾರ ಈ ಮೊದಲೇ ಮಾಡಲಾಗಿತ್ತು. ಈಗ ವ್ಯವಹಾರ ಫೈನಲ್​ ಆಗಿದೆ. ಇದಲ್ಲದೇ ಪನ್ವೇಲ್​ನಲ್ಲಿ ಇರುವ ಆಸ್ತಿಯನ್ನು ಕೂಡ ಇದೇ ಕಾರಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: 44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?

ಜುಹೂ ಏರಿಯಾದ ಬಗ್ಗೆ ದೇವ್​ ಆನಂದ್​ ಅವರು ಬಹಳ ಪ್ರೀತಿ ಹೊಂದಿದ್ದರು. ಯಾಕೆಂದರೆ 1950ರ ಸಮಯದಲ್ಲಿ ಆ ಪ್ರದೇಶ ನಿರ್ಜನವಾಗಿತ್ತು. ಅಲ್ಲಿನ ನಿಸರ್ಗದ ಸೌಂದರ್ಯಕ್ಕೆ ದೇವ್​ ಆನಂದ್​ ಮಾರುಹೋಗಿದ್ದರು. ಹಾಗಾಗಿ ಅಲ್ಲಿ ಮನೆ ಕಟ್ಟಲು ನಿರ್ಧರಿಸಿದರು. ವರ್ಷಗಳು ಉರುಳಿದಂತೆ ಜುಹೂ ಪ್ರದೇಶದ ಚಹರೆಯೇ ಬದಲಾಯಿತು. ದಿನದಿಂದ ದಿನಕ್ಕೆ ಆ ಜಾಗದಲ್ಲಿ ಜನಜಂಗುಳಿ ಹೆಚ್ಚಾಯಿತು. ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us