
ಸಿನಿಮಾ ಮತ್ತು ಕಿರುತೆರೆಯಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ಹಲವು ಗಮನಾರ್ಹ ಪ್ರಾಜೆಕ್ಟ್ಗಳನ್ನು ನೀಡಿದೆ. ‘ರಾಮಾಯಣ’ ಸೀರಿಯಲ್ ಮೂಲಕ ಪ್ರೇಕ್ಷಕರ ಮನಗೆದ್ದ ಈ ಸಂಸ್ಥೆಯಿಂದ ಈಗ ಮತ್ತೊಂದು ಮಹಾ ಪೌರಾಣಿಕ ಸಿನಿಮಾ ಬರುತ್ತಿದೆ. ವಿಶೇಷ ಏನೆಂದರೆ ಏಳು ಭಾಗಗಳಲ್ಲಿ ಈ ಸಿನಿಮಾ ಬರಲಿದೆ. ‘ಶ್ರೀಮದ್ಭಾಗವತಂ’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಪೌರಾಣಿಕ ಕಥೆಯನ್ನು ಕಿರುತೆರೆಯಲ್ಲಿ ಅದ್ದೂರಿಯಾಗಿ ತೋರಿಸಿದ ಅನುಭವ ಹೊಂದಿರುವ ‘ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್’ ಸಂಸ್ಥೆಯು ಈ ದೊಡ್ಡ ಸಾಹಸಕ್ಕೆ ಕೈ ಹಾಕಿದೆ.
ಶ್ರೀಮದ್ಭಾಗವತ ಮಹಾಪುರಾಣದಿಂದ ಪ್ರೇರಣೆ ಪಡೆದ ಈ ಚಿತ್ರವನ್ನು ಸಾಮಾನ್ಯ ಸಿನಿಮಾದಂತೆ ಒಂದೇ ಭಾಗದಲ್ಲಿ ಮುಗಿಸುವ ಬದಲು ಏಳು ಭಾಗಗಳ ಭವ್ಯ ಸಿನಿಮ್ಯಾಟಿಕ್ ದೃಶ್ಯ ವೈಭವವಾಗಿ ರೂಪಿಸಲಾಗುತ್ತಿದೆ. ಹೀಗಾಗಿ ಚಿತ್ರದ ಘೋಷಣೆಯಲ್ಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದ ಮೊದಲ ಭಾಗಕ್ಕೆ ‘ವಿಷ್ಣುರಥ’ ಎಂದು ಹೆಸರು ಇಡಲಾಗಿದೆ. ಪೋಸ್ಟರ್ ಗಮನ ಸೆಳೆದಿದೆ.
ಸಾಗರ್ ಪಿಕ್ಚರ್ಸ್ ಎಂದರೆ ಮೊದಲು ನೆನಪಾಗುವುದು ‘ರಾಮಾಯಣ’ ಧಾರಾವಾಹಿ. ಭಾರತೀಯ ಕಿರುತೆರೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಈ ಪೌರಾಣಿಕ ಧಾರಾವಾಹಿಯು ಸಾಗರ್ ಕುಟುಂಬದ ಹೆಸರನ್ನು ಮನೆಮನೆಗೂ ತಲುಪಿಸಿತ್ತು. ಇದೀಗ ಹಲವು ವರ್ಷಗಳ ಬಳಿಕ ಅದೇ ಪೌರಾಣಿಕ ಕಥನ ಪರಂಪರೆಯನ್ನು ಹೊಸ ತಲೆಮಾರಿನ ಸಿನಿಮ್ಯಾಟಿಕ್ ದೃಷ್ಟಿಕೋನದೊಂದಿಗೆ ಪ್ರೇಕ್ಷಕರ ಎದುರು ತರಲಾಗುತ್ತಿದೆ.

Amrit Sagar Chopra, Akash Sagar Chopra
ಶ್ರೀಮದ್ಭಾಗವತದ ವಿಶಾಲ ಕಥಾ ಪ್ರಪಂಚವನ್ನು ಒಂದೇ ಸಿನಿಮಾದಲ್ಲಿ ಸೀಮಿತಗೊಳಿಸದೆ, ಏಳು ಭಾಗಗಳಾಗಿ ಕಟ್ಟಿಕೊಡವುದು ಈ ಪ್ರಾಜೆಕ್ಟ್ನ ಪ್ರಮುಖ ಹೈಲೈಟ್ಗಳಲ್ಲಿ ಒಂದು. ಕಥೆಯ ವಿವಿಧ ಪಾತ್ರಗಳು, ಘಟನೆಗಳು ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ವಿಸ್ತಾರವಾಗಿ ತೋರಿಸಲು ಈ ಮಾದರಿಯು ಅವಕಾಶ ನೀಡಲಿದೆ. ಹೀಗಾಗಿ ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲದೆ, ದೊಡ್ಡ ಸಿನಿಮಾಟಿಕ್ ಯೂನಿವರ್ಸ್ ಆಗಿ ರೂಪುಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ರಾಜ್ಕುಮಾರ್ಗೆ ಪೌರಾಣಿಕ ಕಥೆ ಹೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್; ಸಿನಿಮಾ ಸೆಟ್ಟೇರಿಲ್ಲ ಏಕೆ?
ಈ ಮಹತ್ವಾಕಾಂಕ್ಷೆಯ ಯೋಜನೆಯ ಸಾರಥ್ಯವನ್ನು ಆಕಾಶ್ ಸಾಗರ್ ಚೋಪ್ರಾ ಮತ್ತು ಅಮೃತ್ ಸಾಗರ್ ವಹಿಸಿಕೊಂಡಿದ್ದಾರೆ. ಸಿನಿಮಾದ ನಿರ್ಮಾಣಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಾಲನೆ ದೊರೆತಿದೆ. ಭವ್ಯವಾದ ಸೆಟ್ಗಳು, ದೊಡ್ಡ ಮಟ್ಟದ ಪ್ರೊಡಕ್ಷನ್, ಆಧುನಿಕ ವಿಎಫ್ಎಕ್ಸ್ ಮತ್ತು ಅತ್ಯಾಧುನಿಕ ಸಿನಿಮಾಟಿಕ್ ತಂತ್ರಜ್ಞಾನಗಳ ಮೂಲಕ ಶ್ರೀಮದ್ಭಾಗವತದ ಜಗತ್ತನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.